ಹಾವೇರಿ: ಆತಂಕಕಾರಿ ಬೆಳವಣಿಗೆಯಲ್ಲಿ, ಹಾನಗಲ್ನಲ್ಲಿ ನಡೆದಿದ್ದ ನೈತಿಕ ಪೊಲೀಸ್ಗಿರಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ತನ್ನನ್ನು ಬಲವಂತವಾಗಿ ಹೋಟೆಲ್ನಿಂದ ಕರೆದೊಯ್ದ ಯುವಕರ ಗುಂಪು ತನ್ನ ಮೇಲೆ ಪದೇ ಪದೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಗುರುವಾರ ವಿಡಿಯೋ ಮೂಲಕ ದೂರಿದ್ದಾರೆ.
ಜನವರಿ 8 ರಂದು ಅನ್ಯಕೋಮಿನ ಪುರುಷ ಮತ್ತು ಮಹಿಳೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನಾಲ್ಕರ್ ಕ್ರಾಸ್ ಬಳಿ ಇರುವ ಖಾಸಗಿ ಹೋಟೆಲ್ನಲ್ಲಿ ತಂಗಿದ್ದರು. ಆಟೋ ಚಾಲಕನೊಬ್ಬ ನೀಡಿದ ಮಾಹಿತಿ ಮೇರೆಗೆ ಕೆಲ ಯುವಕರ ಗುಂಪು ಹೋಟೆಲ್ನ ಕೊಠಡಿಗೆ ನುಗ್ಗಿ, ಇಬ್ಬರನ್ನು ಎಳೆದಾಡಿ ಹಲ್ಲೆ ನಡೆಸಿದ್ದರು.
ಅಲ್ಲದೆ ಇದನ್ನು ವಿಡಿಯೋ ಮಾಡಿಕೊಂಡಿದ್ದರು. ಈ ಘಟನೆಯ ಎರಡು ವಿಡಿಯೋಗಳು ಬುಧವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಸದ್ಯ ಈ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ.
ಮತ್ತೊಂದೆಡೆ ನೈತಿಕ ಪೊಲೀಸ್ ಗಿರಿ ಪ್ರಕರಣದ ಆರೋಪಿಗಳ ಮತ್ತೊಂದು ವಿಡಿಯೋ ಕೂಡ ವೈರಲ್ ಆಗಿದೆ.
ಸಂತ್ರಸ್ತೆಯು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ತಾನು ಹೋಟೆಲ್ನಲ್ಲಿ ತಂಗಿದ್ದಾಗ, ಐದರಿಂದ ಆರು ಜನರ ಗುಂಪೊಂದು ಒಳಗೆ ನುಗ್ಗಿ, ತನ್ನನ್ನು ಪ್ರಶ್ನಿಸಿ, ಹಲ್ಲೆ ನಡೆಸಿ ನನ್ನನ್ನು ಬಲವಂತವಾಗಿ ತಮ್ಮ ಬೈಕ್ಗಳಲ್ಲಿ ಕರೆದೊಯ್ದರು. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತನ್ನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದರು ಮತ್ತು ನಂತರ ಎಲ್ಲರೂ ತನ್ನ ಮೇಲೆ ಅತ್ಯಾಚಾರ ಎಸಗಿದರು. ಬಳಿಕ ಕಾರಿನಲ್ಲಿ ಕೂರುವಂತೆ ಹೇಳಿದರು ಮತ್ತು ಕಾರಿನ ಚಾಲಕ ಕೂಡ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಹಾನಗಲ್'ನಲ್ಲಿ ನೈತಿಕ ಪೊಲೀಸ್ಗಿರಿ, ಅನ್ಯಕೋಮಿನ ಮಹಿಳೆಯೊಂದಿಗೆ ಸಿಕ್ಕಿಬಿದ್ದ ವ್ಯಕ್ತಿಗೆ ಥಳಿತ, ಇಬ್ಬರ ಬಂಧನ
ಬಳಿಕ ಇತರೆ ಎರಡು ಮೂರು ಸ್ಥಳಗಳಿಗೆ ಕರೆದೊಯ್ದು ಅಲ್ಲಿಯೂ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಬಳಿಕ ಆರೋಪಿಗಳು ಆಕೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಕರೆದೊಯ್ದಿದ್ದಾರೆ ಮತ್ತು ಆಕೆ ಅಲ್ಲಿ ಬಸ್ ಹತ್ತಿದ್ದಾರೆ. 'ಅವರಿಗೆ ಶಿಕ್ಷೆಯಾಗಬೇಕೆಂದು ನಾನು ಬಯಸುತ್ತೇನೆ' ಎಂದು ಅವರು ಪೊಲೀಸರಿಗೆ ಮನವಿಯಲ್ಲಿ ವೀಡಿಯೊದಲ್ಲಿ ಒತ್ತಾಯಿಸಿದರು.
ಸಂತ್ರಸ್ತೆಯ ಪತಿ ಕೂಡ ಮಾಧ್ಯಮಗಳ ಮುಂದೆ, ತನ್ನ ಪತ್ನಿಯ ಮೇಲೆ ಯುವಕರ ಗುಂಪೊಂದು ಅತ್ಯಾಚಾರವೆಸಗಿದೆ ಎಂದು ಹೇಳಿಕೆ ನೀಡಿದ್ದಾರೆ.
'ಅವರು ನನ್ನ ಹೆಂಡತಿಯನ್ನು ಅಪಹರಿಸಿ, ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ. ಕುಟುಂಬದ ಸದಸ್ಯರೊಬ್ಬರ ಬಳಿ ಈ ದೌರ್ಜನ್ಯದ ಬಗ್ಗೆ ಆಕೆ ತೆರೆದಿಟ್ಟಿದ್ದಾಳೆ. ಈ ಬಗ್ಗೆ ಆಕೆ ನನಗೆ ಹೇಳಿಲ್ಲ' ಎಂದು ಅವರು ಹೇಳಿದರು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಾವೇರಿ ಎಸ್ಪಿ ಅಂಶುಕುಮಾರ್ ಶ್ರೀವಾಸ್ತವ, ಸಂತ್ರಸ್ತೆಯ ವಿಡಿಯೋ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮಹಿಳೆ ಹಾನಗಲ್ ಪೊಲೀಸ್ ಠಾಣೆಗೆ ತೆರಳಿ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು.
'ಆ ಸಮಯದಲ್ಲಿ ಸಾಮೂಹಿಕ ಅತ್ಯಾಚಾರದ ವಿಚಾರ ಹೊರಬಂದಿರಲಿಲ್ಲ. ಇದೀಗ ಸಂತ್ರಸ್ತೆಯೇ ಘಟನೆಯನ್ನು ವಿವರಿಸಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಶ್ರೀವಾಸ್ತವ ಹೇಳಿದ್ದಾರೆ.