ರಾಜ್ಯ

ನನ್ನ ಮಗನನ್ನು ಬಹಳ ಪ್ರೀತಿಸುತ್ತೇನೆ, ಮಗು ಸಾವಿಗೆ ಪತಿಯೇ ಕಾರಣ: ಟಿಶ್ಯೂ ಪೇಪರ್ ನಲ್ಲಿ ಸುಚನಾ ಆಕ್ರೋಶದ ಪದಗಳು!

Manjula VN

ಪಣಜಿ/ಬೆಳಗಾವಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಸ್ಟಾರ್ಟ್‌ಅಪ್‌ನ ಸಿಇಒ ಸುಚನಾ ಸೇಠ್ ತನ್ನ ನಾಲ್ಕು ವರ್ಷದ ಬಾಲಕನನ್ನು ಉಸಿರುಗಟ್ಟಿಸಿ ಹತ್ಯೆಗೈದ ಪ್ರಕರಣದಲ್ಲಿ ಪೊಲೀಸರು ಮಹತ್ವದ ಪ್ರಗತಿ ಸಾಧಿಸಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ಗೋವಾ ಪೊಲೀಸರು, ಆರೋಪಿ ಸುಚನಾ ಸೇಠ್ ಬ್ಯಾಗ್ ನಲ್ಲಿ ಐಲೈನರ್ ನಿಂದ ಬರೆಯಲ್ಪಟ್ಟಿದ್ದ ಕೆಲವು ಸಾಲುಗಳಿರುವ ಟಿಶ್ಯೂ ಪೇಪರ್'ನ್ನು ಪತ್ತೆ ಮಾಡಿದ್ದಾರೆ.

ಟಿಶ್ಯೂ ಪೇಪರ್ ನಲ್ಲಿ ಸುಚನಾ ಪತಿ ವಿರುದ್ಧ ಹರಿಹಾಯ್ದಿರುವ ಪದಗಳನ್ನು ಬರೆದಿರುವುದು ಕಂಡು ಬಂದಿದೆ. ನನಗೆ ಅಪರಾಧಿ ಭಾವನೆ ಶುರುವಾಗಿದೆ. ಹತಾಶಳಾಗಿದ್ದೇನೆ. ನಾನು ನನ್ನ ಮಗನನ್ನು ತುಂಬಾ ಪ್ರೀತಿಸುತ್ತೇನೆ. ಆದರೆ, ಅವನು ತನ್ನ ತಂದೆಯನ್ನು ಭೇಟಿಯಾಗುವುದು ನನಗಿಷ್ಟವಿಲ್ಲ. ಅಲ್ಲದೆ, ಮಗನ ಸಾವಿಗೆ ನಾನು ಕಾರಣಳಲ್ಲ. ಪತಿ ಕಾರಣ ಎಂದು ಬರೆದಿರುವುದು ಕಂಡು ಬಂದಿದೆ.

ಈ ಟಿಶ್ಯೂ ಪೇಪರ್ ನ್ನು ಪೊಲೀರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಇದು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸೂಚನೆ ನೀಡಬಹುದು. ಕೊಲೆ ಮಾಡಲು ಸುಚನಾ ಉದ್ದೇಶ ಏನಿರಬಹುದು ಎಂಬುದು ತಿಳಿದುಬರಬಹುದು ಎಂದು ಪೊಲೀಸರು ಹೇಳಿದ್ದಾರೆ.

ಪತಿ ಮಾಡಿದ್ದ ವಿಡಿಯೋ ಕರೆ ಸ್ವೀಕರಿಸಿದ್ದ ಸುಚನಾ, ಜನವರಿ 7 ರಂದು ಮಗು ಭೇಟಿ ಮಾಡಲು ಬರುವುದಾಗಿ ತಿಳಿಸಿದ್ದಾಗ ಒಪ್ಪಿಗೆ ಸೂಚಿಸಿದ್ದಳು. ಆದರೆ, ಇದನ್ನು ತಪ್ಪಿಸಲು ಅಪರಾಧ ಎಸಗಲು ಗೋವಾಗೆ ತೆರಳಿದ್ದಳು ಎಂದು ತಿಳಿದುಬಂದಿದೆ.

ಆರೋಪಿಯನ್ನು ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ದ ಪೊಲೀಸರು
ಈ ನಡುವೆ ಶುಕ್ರವಾರ ಮಧ್ಯಾಹ್ನ, ಪೊಲೀಸರು ಸುಚನಾ ಅವರನ್ನು ಅಪರಾಧ ಎಸಗಿದ ಸ್ಥಳಕ್ಕೆ ಕರೆದೊಯ್ದಿದ್ದು, ಘಟನೆಯನ್ನು ಮರುಸೃಷ್ಟಿಸಿದ್ದಾರೆಂದು ತಿಳಿದುಬಂದಿದೆ.

ಈ ವೇಳೆ ಆರೋಪಿ ಸುಚನಾ ಆರಂಭಿಕ ಹಂತದಲ್ಲಿ ಪೊಲೀಸರಿಗೆ ಸಹಕರಿಸಲು ನಿರಾಕರಿಸಿದ್ದಾಳೆ. ಆದರೆ, ನಂತರ ಒಪ್ಪಿಕೊಂಡಲು ಎಂದು ವರದಿಗಳು ತಿಳಿಸಿವೆ. ಇದಲ್ಲದೆ, ಸುಚನಾ ಕಾರು ಚಾಲನಿಗೆ ನೀಡಬೇಕಿದ್ದ ರೂ.30 ಸಾವಿರ ಬಾಡಿಗೆ ಹಣವನ್ನು ನೀಡಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆಯ ಭಾಗವಾಗಿ ಆ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.

SCROLL FOR NEXT