ರಾಜ್ಯ

ಮಂಗಳೂರು: ಸಂಸ್ಕಾರಭರಿತ ಭಾಷೆ ಬಳಕೆ ಕುರಿತು ಮುಸ್ಲಿಂ ವೇದಿಕೆಯಿಂದ ಆರ್ ಎಸ್ಎಸ್ ಮುಖ್ಯಸ್ಥರಿಗೆ ಪತ್ರ

Lingaraj Badiger

ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ತನ್ನ ಶಿಕ್ಷಣದಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಸಂಸ್ಕಾರಭರಿತ ಭಾಷೆ ಮತ್ತು ಸಮುದಾಯದ ಬಗ್ಗೆ ಗೌರವ ಭಾವನೆಗೆ ಪ್ರೇರಕವಾದ ನೀತಿಗಳನ್ನು ರೂಪಿಸಬೇಕೆಂದು ಆಗ್ರಹಿಸಿ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ ಅವರಿಗೆ ಪತ್ರ ಬರೆಯಲು ‘ಕರ್ನಾಟಕ ಮುಸ್ಲಿಂ ಬಾಂಧವ್ಯ ವೇದಿಕೆ ಮುಂದಾಗಿದೆ.

ಈ ಸಂಬಂಧ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವೇದಿಕೆ ಕಾರ್ಯದರ್ಶಿ ಮುಷ್ತಾಕ್ ಇ ಅವರು, ಮುಸ್ಲಿಂ ಮಹಿಳೆಯರ ಬಗ್ಗೆ ಮಾತನಾಡುವಾಗ ಆರ್ ಎಸ್ಎಸ್ ನಾಯಕರು ಅನುಚಿತ, ಅಗೌರವ ಮತ್ತು ಅವಹೇಳನಕಾರಿ ಭಾಷೆ ಬಳಸುವುದನ್ನು ನಾವು ಬಹಳ ಹಿಂದಿನಿಂದಲೂ ಗಮನಿಸಿದ್ದೇವೆ. ಈ ಕುರಿತು ಸಂಘದ ಸಹ ಸಂಚಾಲಕರೊಂದಿಗೆಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಿಕೊಳ್ಳಲು ಪ್ರಯತ್ನ ನಡೆಸಿದೇವು. ಆದರೆ ಇದಕ್ಕೆ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಹೀಗಾಗಿ ಪತ್ರ ಬರೆಯಲು ನಿರ್ಧರಿಸಿದ್ದೇವೆ ಎಂದು ಮುಷ್ತಾಕ್ ಹೇಳಿದ್ದಾರೆ.

ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಇತ್ತೀಚೆಗೆ ಮುಸ್ಲಿಂ ಮಹಿಳೆಯರ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಉಲ್ಲೇಖಿಸಿದ ಮುಷ್ತಾಕ್, ಇಂತಹ ಹೇಳಿಕೆಯಿಂದ ಸಮಾಜ ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ ಎಂದರು.

“ಭಟ್ ಅವರು ಆರ್‌ಎಸ್‌ಎಸ್ ಶಾಖೆಯಲ್ಲಿ ಶಿಕ್ಷಣ ಪಡೆದಿದ್ದಾರೆ ಮತ್ತು ಅದರ ಸಿದ್ಧಾಂತದಿಂದ ಸ್ಫೂರ್ತಿ ಪಡೆದಿದ್ದಾರೆ. ಅಲ್ಲದೆ ಸಂಘದಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಅಂತಹ ವ್ಯಕ್ತಿ ಮಹಿಳೆಯರ ಬಗ್ಗೆ ಗೌರವದಿಂದ ಮಾತನಾಡುತ್ತಿಲ್ಲ. ಅವರ ಕೀಳುಮಟ್ಟದ ಹೇಳಿಕೆ ಆಘಾತಕಾರಿಯಾಗಿದೆ. ಅವರಷ್ಟೇ ಅಲ್ಲ, ಆರ್‌ಎಸ್‌ಎಸ್‌ನಲ್ಲಿ ತರಬೇತಿ ಪಡೆದ ಅನೇಕರು, ಮುಸ್ಲಿಮರು ಮತ್ತು ಮುಸ್ಲಿಂ ಮಹಿಳೆಯರ ವಿರುದ್ಧ ಇದೇ ಭಾಷೆಯನ್ನು ಬಳಸುತ್ತಿದ್ದಾರೆ. ಆರೆಸ್ಸೆಸ್‌ನ ಆಶ್ರಯದಲ್ಲಿರುವ ರಾಜಕಾರಣಿಗಳು ಮತ್ತು ಪತ್ರಕರ್ತರು ಸಹ ಮುಸ್ಲಿಮರ ಬಗ್ಗೆ ಸರಿಯಾದ ಜ್ಞಾನವಿಲ್ಲದೆ ಅಪಪ್ರಚಾರದಲ್ಲಿ ತೊಡಗಿದ್ದಾರೆ” ಎಂದು ಮುಷ್ಕಾಕ್ ಆರೋಪಿಸಿದರು.

SCROLL FOR NEXT