ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ 
ರಾಜ್ಯ

ನಿರುದ್ಯೋಗ ಕುರಿತ ಅಂಕಿಅಂಶಗಳನ್ನು ಕೇಂದ್ರ ಸರ್ಕಾರ ಮರೆಮಾಚುತ್ತಿದೆ: ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್

ನಿರುದ್ಯೋಗ ಮತ್ತು ಆರ್ಥಿಕ ಬಿಕ್ಕಟ್ಟು ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದ್ದು, ಅಂಕಿಅಂಶಗಳನ್ನು ಮರೆಮಾಚುತ್ತಿದೆ ಎಂದು ರಾಜಕೀಯ ಅರ್ಥಶಾಸ್ತ್ರಜ್ಞ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಡಾ.ಪರಕಾಲ ಪ್ರಭಾಕರ್ ಅವರು ಶುಕ್ರವಾರ ಆರೋಪಿಸಿದ್ದಾರೆ.

ಮಂಗಳೂರು: ನಿರುದ್ಯೋಗ ಮತ್ತು ಆರ್ಥಿಕ ಬಿಕ್ಕಟ್ಟು ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದ್ದು, ಅಂಕಿಅಂಶಗಳನ್ನು ಮರೆಮಾಚುತ್ತಿದೆ ಎಂದು ರಾಜಕೀಯ ಅರ್ಥಶಾಸ್ತ್ರಜ್ಞ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಡಾ.ಪರಕಾಲ ಪ್ರಭಾಕರ್ ಅವರು ಶುಕ್ರವಾರ ಆರೋಪಿಸಿದ್ದಾರೆ.

ಗಣರಾಜ್ಯೋತ್ಸವದ ಅಂಗವಾಗಿ ಮಂಗಳೂರಿನಲ್ಲಿ ಮಹಾತ್ಮಾ ಗಾಂಧಿ ಪೀಸ್ ಫೌಂಡೇಶನ್ ವತಿಯಿಂದ ಟ್ಯಾಗೋರ್ ಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದ 'ರಿಪಬ್ಲಿಕ್ ಇನ್ ಕ್ರೈಸಿಸ್' ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪ್ರತಿ ವಿಚಾರ, ಕ್ಷೇತ್ರಗಳ ಬಗೆಗಿನ ವಾಸ್ತವವನ್ನು ಜನರಿಗೆ ತಿಳಿಸದೆ, ಭ್ರಮೆಗಳನ್ನು ಸೃಷ್ಟಿಸುತ್ತಿದೆ. ಅದರಲ್ಲೂ ದೇಶ ಯುವ ಜನತೆ ಪೈಕಿ ಶೇ.24ರಷ್ಟು ಮಂದಿ ನಿರುದ್ಯೋಗಿಗಳಾಗಿದ್ದಾರೆ. ಇದು ಪ್ರಪಂಚದಲ್ಲೇ ಹೆಚ್ಚಾಗಿದ್ದು, ಇರಾನ್, ಲೆಬನಾನ್, ಸಿರಿಯಾ ದೇಶಗಳಿಗಿಂತೂ ಹೆಚ್ಚು ಜನ ಇಲ್ಲಿ ನಿರುದ್ಯೋಗ ಸಮಸ್ಯೆಗೆ ಸಿಲುಕಿದ್ದಾರೆ. ನೆರೆಯ ಬಾಂಗ್ಲಾದೇಶದ ನಿರುದ್ಯೋಗದ ಪ್ರಮಾಣವೂ ಬರೀ ಶೇ.12ರಷ್ಟು ಇದೆ. ಆದರೂ, ಕೇಂದ್ರ ಸರಕಾರ ಈ ವಾಸ್ತವವನ್ನು ಮರೆಮಾಚಿ, ಆರ್ಥಿಕತೆಯಲ್ಲಿ ನಮ್ಮ ದೇಶ ಮುಂದುವರಿಯುತ್ತಿದೆ ಎಂಬ ಭ್ರಮೆ ಹರಡಲಾಗುತ್ತಿದೆ ಎಂದು ಅವರು ಟೀಕಿಸಿದರು.

ದೇಶೀಯ ಕೈಗಾರಿಕೆಗಳು ಹಿಂದೆಂದಿಗಿಂತಲೂ ತಳಮಟ್ಟಕ್ಕೆ ಕುಸಿದಿವೆ. ಪ್ರಸಕ್ತ ದೇಶದ ಸಾಲ 150 ಲಕ್ಷ ಕೋಟಿ ರೂ.ಗಳಾಗಿವೆ. ಇದರಲ್ಲಿ ಕಳೆದ 10 ವರ್ಷಗಳಲ್ಲಿನ ಸಾಲ 100 ಲಕ್ಷ ಕೋಟಿ ರೂ.ಗಳು. ಇದು ಪ್ರಜಾಪ್ರಭುತ್ವ ದೇಶ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು. ನಾನು 500 ವರ್ಷಗಳ ಹಿಂದಿನ ಇತಿಹಾಸದ ಬಗ್ಗೆ ಮಾತನಾಡುತ್ತಿಲ್ಲ. ಆದರೆ, ತೀರಾ ಇತ್ತೀಚೆಗೆ ಅಂದರೆ 2022ರ ಜನವರಿಯಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಯುವಕರು ರೈಲ್ವೆಯ ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ರೈಲಿನಲ್ಲಿ ಜಟಾಪಟಿ ನಡೆಸಿದ್ದು ಸುದ್ದಿಯಾಗಿತ್ತು. 35,000 ಹುದ್ದೆಗಳಿಗಾಗಿ ಅಂದು 1 ಕೋಟಿ 25 ಲಕ್ಷ ಜನ ಅರ್ಜಿ ಸಲ್ಲಿಸಿದ್ದರು. ಇದು ನನ್ನ ದೇಶದ ಯುವಕರು ಎದುರಿಸುತ್ತಿರುವ ಬಿಕ್ಕಟ್ಟು. ಈ ಬಗ್ಗೆ ಸರ್ಕಾರದಲ್ಲಿ ಅಂಕಿ-ಅಂಶ ಕೇಳಿದರೆ ಖಂಡಿತಾ ಸಿಗುವುದಿಲ್ಲ.

ಕೊರೋನಾ ಸಂದರ್ಭ ಸಾವಿಗೀಡಾದವರ ಸಂಖ್ಯೆ, ವಲಸೆ ಕಾರ್ಮಿಕರ ಸಾವಿನ ಬಗ್ಗೆಯೂ ಅಂಕಿ-ಅಂಶ ಸಿಗುವುದಿಲ್ಲ. ಇದು ಇಂದಿನ ವಾಸ್ತವ. ಒಳ್ಳೆಯದು, ಕೆಟ್ಟದು, ತಪ್ಪು ಒಪ್ಪುಗಳಿದ್ದರೂ ಹಿಂದೆಲ್ಲಾ ಭಾರತದ ಅಂಕಿ - ಅಂಶ ಪಾರದರ್ಶಕವಾಗಿತ್ತು. ಆದರೆ, ಪ್ರಸಕ್ತ ಸರ್ಕಾರಿ ಯಂತ್ರವನ್ನೇ ನಿಯಂತ್ರಿಸುವ ಮೂಲಕ ಅಂಕಿ ಅಂಶಗಳೇ ಸಿಗದಂತೆ ಮಾಡಲಾಗಿದೆ" ಎಂದು ಆರೋಪಿಸಿದರು.

ದೇಶದ ಪ್ರಧಾನಿಯವರು ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಎಂದು ಹೇಳುವ ಮೂಲಕ ರಾಜ್ಯಗಳ ಚುನಾವಣೆಯಲ್ಲಿ ಪ್ರಚಾರ ನಡೆಸಿದರೆ, ಕೇಂದ್ರ ಸರ್ಕಾರದ ಇತರ ಸಚಿವರಂತೂ ನೇರವಾಗಿಯೇ ನಮ್ಮ ಪಕ್ಷ ಆಡಳಿತಕ್ಕೆ ಬರದಿದ್ದರೆ ನಿಮಗೆ ಅನುದಾನವೇ ಸಿಗದು ಎಂದು ಬೆದರಿಕೆ ಒಡ್ಡುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನೇ ಅಣಕಿಸುತ್ತಿದ್ದಾರೆ. ಈಗಾಗಲೇ ಬಿಕ್ಕಟ್ಟಿನಲ್ಲಿರುವ ದೇಶದ ಪ್ರಜಾಪ್ರಭುತ್ವಕ್ಕೆ ಜಾತ್ಯತೀತ ಮೌಲ್ಯವುಳ್ಳ ಜನರೇ ಉತ್ತರದಾಯಿಗಳು. ಮತೀಯವಾದಕ್ಕೆ ಪ್ರತಿರೋಧ ತಗ್ಗಿದಾಗ ಪ್ರಜಾಪ್ರಭುತ್ವ ಮತ್ತಷ್ಟು ಅಪಾಯಕ್ಕೆ ಗುರಿಯಾಗಲಿದ್ದು, ದೇಶದಲ್ಲಿ ಸದ್ಯ ಆ ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ" ಎಂದು ಹೇಳಿದರು.

ಪ್ರಜಾಪ್ರಭುತ್ವ, ಜಾತ್ಯತೀತ ದೇಶದಲ್ಲಿ ಇಂದು ಒಂದು ಧರ್ಮವನ್ನೇ ಶ್ರೇಷ್ಠ ಎಂಬಂತೆ ಬಿಂಬಿಸಲಾಗುತ್ತಿದೆ. ಅವರ ದೇವರನ್ನು ನಂಬದವರು ದೇಶದ್ರೋಹಿಗಳು ಎಂಬ ಮಾತುಗಳು ನಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳಿಂದಲೇ ಹೇಳಿಸಲಾಗುತ್ತಿದೆ. ದೇಶದ ಭವ್ಯ ವೈವಿಧ್ಯತೆಯನ್ನು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತ ಮಾಡಲಾಗುತ್ತಿದೆ. ಅವರ ದೇವರನ್ನು ನಂಬುವವರು, ಅವರ ಹೇಳಿಕೆಗಳನ್ನು ಒಪ್ಪುವವರು ಮಾತ್ರ ದೇಶ ಪ್ರೇಮಿಗಳು, ಉಳಿದವರು ಖಲಿಸ್ತಾನಿಗಳು, ನಕ್ಸಲರು, ದೇಶದ್ರೋಹಿಗಳು ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಆ ಮತೀಯವಾದವನ್ನು ಹರಡುವವರಿಗೆ ಅವರದ್ದೇ ಆದ ವ್ಯವಸ್ಥಿತ ಸೈನ್ಯವಿದೆ. ಜಾತ್ಯತೀತರಿಗೆ ಅಂತಹ ಸೈನ್ಯದ ಬಲವಿಲ್ಲ. ಹಾಗಾಗಿ ಪ್ರಜಾಪ್ರಭುತ್ವದ ಜತೆಗೆ ಬಿಕ್ಕಟ್ಟಿಗೆ ಸಿಲುಕಿರುವ ಜನರನ್ನು ನಾವು ರಕ್ಷಿಸಬೇಕಾಗಿದೆ. ನೈಜ ಜಾತ್ಯತೀತರು ಈ ಬಗ್ಗೆ 365 ದಿನಗಳೂ ಹೋರಾಟ ಮುಂದುವರಿಸಬೇಕಾಗಿದೆ" ಎಂದರು.

"ಭಾರತ ನಾಗರಿಕತೆಯನ್ನು ಮರು ಪರಿಷ್ಕರಣೆ ನಡೆಸುವ ಷಡ್ಯಂತ್ರ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಒಂದು ನಿರ್ದಿಷ್ಟ ಧರ್ಮ, ಭಾಷೆ, ಜಾತಿ, ಆಹಾರಕ್ಕೆ ಸೀಮಿತಗೊಳಿಸಲಾಗುತ್ತಿದೆ. ಈ ರೀತಿಯ ಭಯ ಸೃಷ್ಟಿಸುವವರು ಒಂದು ರೀತಿಯ ಅಪಾಯಕಾರಿ ವರ್ಗವಾಗಿದ್ದರೆ, ಜಾತ್ಯತೀತರೆಂದು ಕರೆಸಿಕೊಂಡವರು ಹಠಾತ್ತನೆ ಭಕ್ತರಾಗಿ ಬದಲಾಗುವವರು ಅದಕ್ಕಿಂತಲೂ ಅಪಾಯಕಾರಿ ವರ್ಗದವರು" ಎಂದು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

SCROLL FOR NEXT