ಮೈಸೂರು: ಜಗತ್ ಪ್ರಸಿದ್ಧ ಸರೋದ್ ವಾದಕ, ಪದ್ಮಶ್ರೀ ಪುರಸ್ಕೃತ ಪಂಡಿತ್ ರಾಜೀವ್ ತಾರಾನಾಥ್ (91) ಇಂದು ಮೈಸೂರಿನಲ್ಲಿ ನಿಧನರಾದರು.
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಖ್ಯಾತರಾಗಿದ್ದ ಪಂಡಿತ್ ರಾಜೀವ್ ತಾರಾನಾಥ್, ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ತೀವ್ರ ಅಸ್ವಸ್ಥರಾಗಿ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾರಾನಾಥ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
1932 ರ ಅಕ್ಟೋಬರ್ 17 ರಂದು ಬೆಂಗಳೂರಿನಲ್ಲಿ ಜನಿಸಿದ ರಾಜೀವ್ ತಾರಾನಾಥ್ ತಮ್ಮ ತಂದೆ ಪಂಡಿತ್ ತಾರಾನಾಥ್ ಅವರಿಂದ ಗಾಯನ ಸಂಗೀತದಲ್ಲಿ ಆರಂಭಿಕ ತರಬೇತಿಯನ್ನು ಪಡೆದು, ಅತ್ಯಂತ ಕಿರಿಯ ವಯಸ್ಸಿನಲ್ಲೇ (9 ವರ್ಷ) ಸಾರ್ವಜನಿಕ ಕಾರ್ಯಕ್ರಮ ನೀಡಿದ್ದರು. 20 ವರ್ಷದ ವಯಸ್ಸಿನಲ್ಲಿ ಅಕಾಶವಾಣಿ ರೇಡಿಯೋಗೆ ಹಾಡಿ ಖ್ಯಾತಿ ಪಡೆದಿದ್ದರು.
1980 ರ ದಶಕದಲ್ಲಿ ಆಡೆನ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಅಧ್ಯಯನ ಮಾಡಿ ಮತ್ತು 1995 ರಿಂದ 2005 ರವರೆಗೆ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ನಲ್ಲಿ ಭಾರತೀಯ ಸಂಗೀತ ಕಾರ್ಯಕ್ರಮದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.
ಮಹಾನ್ ಸರೋದ್ ಮಾಂತ್ರಿಕ ಎಂದೇ ಪ್ರಸಿದ್ಧರಾಗಿದ್ದ ಉಸ್ತಾದ್ ಅಲಿ ಅಕ್ಬರ್ ಖಾನ್ ಅವರ ವಿಶಿಷ್ಟ ಶಿಷ್ಯರಾದ ತಾರಾನಾಥ್ ಅವರು ಪಂಡಿತ್ ರವಿಶಂಕರ್ ಮತ್ತು ಶ್ರೀಮತಿ ಅನ್ನಪೂರ್ಣ ದೇವಿಯವರ ಮಾರ್ಗದರ್ಶನವನ್ನೂ ಪಡೆದರು. ಅವರ ಸರೋದ್ನ ಪಾಂಡಿತ್ಯವನ್ನು ಗುರುತಿಸಿ 2019 ರಲ್ಲಿ ಪದ್ಮಶ್ರೀ ಮತ್ತು 2000 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ.
ಪಂಡಿತ್ ತಾರಾನಾಥ್ ಅವರ ಪಾರ್ಥಿವ ಶರೀರವನ್ನು ಕುವೆಂಪುನಗರದ ಜ್ಞಾನಗಂಗಾ ಶಾಲೆಯ ಬಳಿ ಇರುವ ಅವರ ನಿವಾಸದಲ್ಲಿ ಜೂನ್ 12 ರಂದು ಬೆಳಿಗ್ಗೆ 9:30 ರಿಂದ 11 ರವರೆಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಮಧ್ಯಾಹ್ನದ ನಂತರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿದ್ದು, ಆಸ್ಪತ್ರೆ ವೆಚ್ಚ ಭರಿಸಲು ಸರಕಾರ ನೆರವು ಘೋಷಿಸಿದೆ.