ಬೆಳಗಾವಿ: ಮಂಡ್ಯ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಈ ಹಿಂದೆ ಬಾರಿ ಸದ್ದು ಮಾಡಿದ್ದ ಭ್ರೂಣ ಹತ್ಯೆ ಜಾಲ ಇದೀಗ ಬೆಳಗಾವಿಯಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಹೌದು.. ಬೆಂಗಳೂರು ಹಾಗೂ ಮಂಡ್ಯದಲ್ಲಿ ಕೆಲ ತಿಂಗಳ ಹಿಂದೆ ಹೆಣ್ಣು ಭ್ರೂಣಹತ್ಯೆಯ ಬೃಹತ್ ಜಾಲವೊಂದು ಪತ್ತೆಯಾದ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯಲ್ಲಿ ನಕಲಿ ವೈದ್ಯನೊಬ್ಬ ಭ್ರೂಣ ಹತ್ಯೆ ಮಾಡಿರುವ ಪ್ರಕರಣವು ಬಯಲಾಗಿದೆ.
ಕಿತ್ತೂರು ಪಟ್ಟಣದಲ್ಲಿ ನಕಲಿ ವೈದ್ಯ ಮಕ್ಕಳ ಮಾರಾಟ ಪ್ರಕರಣದ ಆರೋಪಿ ಅಬ್ದುಲ್ ಗಫಾರ್ ಲಾಡಖಾನ್ ಭ್ರೂಣಹತ್ಯೆ ಮಾಡಿದ್ದು, ಜಿಲ್ಲೆಯ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಫಾರ್ಮ್ಹೌಸ್ನಲ್ಲಿ ಭ್ರೂಣದ ಶವವೊಂದು ಪತ್ತೆಯಾಗಿದ್ದು, ಇನ್ನಷ್ಟು ಭ್ರೂಣಗಳಿಗಾಗಿ ಶೋಧ ನಡೆಸಲಾಗಿದೆ.
ಮೂಲಗಳ ಪ್ರಕಾರ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ನ ಸಹಾಯಕನಾಗಿರುವ ರೋಹಿತ್ ಕುಪ್ಪಸಗೌಡರ್ನನ್ನು ಕರೆದುಕೊಂಡು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೂಚನೆ ಮೇರೆಗೆ ಪೊಲೀಸರು, ಆರೋಗ್ಯ ಇಲಾಖೆ, ಎಫ್ಎಸ್ಎಲ್ ತಂಡ ಇಂದು ತಾಲೂಕಿನ ತಿಗಡೊಳ್ಳಿ ಬಳಿಯ ನಕಲಿ ವೈದ್ಯನ ಫಾರ್ಮ್ಹೌಸ್ನಲ್ಲಿ ಶೋಧ ನಡೆಸುತ್ತಿದ್ದಾಗ ಭ್ರೂಣದ ಶವ ಪತ್ತೆಯಾಗಿದೆ.
ಡಿಎಚ್ಒ ಡಾ.ಮಹೇಶ ಕೋಣಿ, ಎಸಿ ಪ್ರಭಾವತಿ ಫಕೀರಪುರ, ಡಿಎಎಸ್ಪಿ ರವಿ ನಾಯ್ಕ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಭ್ರೂಣಗಳನ್ನು ಹೂಳುತ್ತಿದ್ದ ರೋಹಿತ್ ಕುಪ್ಪಸಗೌಡರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಬ್ದುಲ್ ಗಫಾರ್ ಲಾಡಖಾನ್ ಫಾರ್ಮ್ ಹೌಸ್ ಪರಿಶೀಲನೆ ವೇಳೆ ತೋಟದಲ್ಲಿ ಮೂರು ಭ್ರೂಣಗಳ ಕಳೇಬರ ಪತ್ತೆಯಾಗಿವೆ ಎಂದು ವರದಿಯಾಗಿದೆ.
ಫಾರ್ಮ್ಹೌಸ್ನಲ್ಲಿ ಭ್ರೂಣ ಹೂಳುತ್ತಿದ್ದ ಆರೋಪಿಗಳು
ಭ್ರೂಣಗಳನ್ನು ಹತ್ಯೆ ಕೃತ್ಯದಲ್ಲಿ ತೊಡಗಿರುವ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ಗೆ ರೋಹಿತ್ ಕುಪ್ಪಸಗೌಡರ್ ಹಲವು ವರ್ಷಗಳಿಂದ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾನೆ. ತಿಗಡೊಳ್ಳಿ ಗ್ರಾಮದ ಬಳಿ ಇರುವ ಫಾರ್ಮ್ಹೌಸ್ನಲ್ಲಿ ಭ್ರೂಣಗಳನ್ನು ಹೂಳುವುದೇ ರೋಹಿತ್ ಕುಪ್ಪಸಗೌಡರ ಕೆಲಸವಾಗಿತ್ತು ಎನ್ನಲಾಗಿದೆ. ಈತನನ್ನು ಫಾರ್ಮ್ಹೌಸ್ಗೆ ಕರೆದುಕೊಂಡು ಹೋಗಿರುವ ಅಧಿಕಾರಿಗಳು, ಶೋಧ ನಡೆಸುತ್ತಿದ್ದಾರೆ.
ರೋಹಿತ್ ತೋರಿಸಿದ ಜಾಗದಲ್ಲಿಯೇ ಒಂದು ಭ್ರೂಣ ಪತ್ತೆಯಾಗಿರುವ ಕಾರಣ ಇನ್ನಷ್ಟು ಭ್ರೂಣಗಳು ಇರಬಹುದು ಎಂಬ ಶಂಕೆಯಿಂದ ಶೋಧ ಕಾರ್ಯ ಮುಂದುವರಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಅಬ್ದುಲ್ ಗಫಾರ್ ಲಾಡಖಾನ್ ಹಿಂದೆ ಯಾರಿದ್ದಾರೆ. ಜಾಲದಲ್ಲಿ ಯಾರೆಲ್ಲ ತೊಡಗಿಸಿಕೊಂಡಿದ್ದಾರೆ. ಫಾರ್ಮ್ಹೌಸ್ ಸೇರಿ ಇನ್ನೂ ಹಲವು ಪ್ರದೇಶಗಳಲ್ಲಿ ಭ್ರೂಣಗಳನ್ನು ಹೂಳಲಾಗಿದೆಯೇ ಎಂಬುದು ಸೇರಿ ಹತ್ತಾರು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಡವರೇ ನಕಲಿ ವೈದ್ಯನ ಟಾರ್ಗೆಟ್, ಬಯಲಾಯ್ತು ಮಕ್ಕಳ ಮಾರಾಟ ಜಾಲ
ಮದುವೆಗೂ ಮುಂಚೆ ಗರ್ಭಿಣಿಯಾಗಿ ಮಗುವನ್ನು ಸಾಕಲಾಗದೆ ನರಳಾಡುವ ಅಸಹಾಯಕ ಯುವತಿಯರನ್ನು ಗುರಿಯಾಗಿಸಿಕೊಂಡು ನಕಲಿ ವೈದ್ಯ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಆಪರೇಷನ್ ಮಾಡಿ ಮಗುವನ್ನು ತಾವೇ ಸಾಕುವುದಾಗಿ ಹೇಳಿ ಮಗುವನ್ನು ರಕ್ಷಿಸುತ್ತಿದ್ದರು. ಬಳಿಕ ಎರಡ್ಮೂರು ತಿಂಗಳು ಮಗು ಆರೈಕೆ ಮಾಡಿ ಮಗುವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು.
ಮಕ್ಕಳಿಲ್ಲದವರಿಗೆ ಅರವತ್ತು ಸಾವಿರದಿಂದ ಒಂದೂವರೆ ಲಕ್ಷ ಹಣಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈ ವಿಚಾರ ತಿಳಿದು ಮಕ್ಕಳ ಮಾರಾಟ ಗ್ಯಾಂಗ್ ಹಿಂದೆ ಬಿದ್ದಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಮತ್ತು ಕೇಂದ್ರ ಸಂಯೋಜಕರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಮಕ್ಕಳ ಮಾರಾಟ ಮಾಡುತ್ತಿದ್ದ ಆರೋಪಿ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಭ್ರೂಣ ಹತ್ಯೆ ಕೂಡ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.