ರಾಯಚೂರು: ಪ್ರಿಯಕರನಿಗಾಗಿ ಯುವತಿ ಚಿನ್ನ ಕದ್ದಿದ್ದು ಈ ವಿಷಯ ತಿಳಿದ ಪೋಷಕರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಯರಮರಸ್ ಹೊರವಲಯದಲ್ಲಿ ಈ ಘಟನೆ ನಡೆದಿದ್ದು ಮೂವರು ರೈಲಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆಯಲ್ಲಿ ತಂದೆ-ತಾಯಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮಗಳು ಸ್ಥಿತಿ ಗಂಭೀರವಾಗಿದೆ.
ಮೃತರನ್ನು 44 ವರ್ಷದ ಸಮೀರ್ ಅಹ್ಮದ್, 40 ವರ್ಷದ ಜುಲ್ಲಾಕಾ ಬೇಗಂ ಗುರುತಿಸಲಾಗಿದ್ದು ಗಂಭೀರ ಗಾಯಗೊಂಡಿದ್ದ 21 ವರ್ಷದ ಮೆಹಾಮುನ್ ಎಂಬಾಕೆಯನ್ನು ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೆಹಾಮುನ್ ಸರ್ಫರಾಜ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆತನ ಜೊತೆ ಬದುಕಬೇಕೆಂದು ತಾನು ಟ್ಯೂಷನ್ ಹೇಳಿಕೊಡುತ್ತಿದ್ದ ಮಹಿಮ್ಮುದ್ ಹುಸೇನ್ ಎಂಬುವರ ಮನೆಯಲ್ಲಿ ಡೈಮಂಡ್ ನಕ್ಲೇಸ್ ಹಾಗೂ ಚಿನ್ನವನ್ನು ಕದ್ದಿದ್ದಳು. ಇನ್ನು ತಮ್ಮ ಮನೆಯಲ್ಲಿದ್ದ ಚಿನ್ನಾಭರಣ ಕಳುವಾಗಿದೆ ಎಂದು ಮಹಿಮ್ಮುದ್ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ವಿಚಾರಣೆ ವೇಳೆ ತಾನೇ ಕದ್ದಿರುವುದಾಗಿ ಮೆಹಾಮುನ್ ಒಪ್ಪಿಕೊಂಡಿದ್ದಳು. ನಂತರ ಚಿನ್ನಾಭರಣವನ್ನು ಹಿಂದಿರುಗಿಸುವಂತೆ ಪೊಲೀಸರು ತಾಕೀತು ಮಾಡಿದ್ದರು. ಇನ್ನು ಪ್ರಿಯಕರ ಸರ್ಫರಾಜ್ ಗೆ ಕೊಟ್ಟಿದ್ದ ಬ್ರೆಸ್ಲೈಟ್ ವಾಪಸ್ ಕೊಡುವಂತೆ ಮೆಹಾಮುನ್ ಕೇಳಿದ್ದಾಳೆ. ನಂತರ ಸರ್ಫರಾಜ್ ಮೊಬೈಲ್ ಸ್ವಿಚ್ ಆಫ್ ಮಾಡಿ ತಪ್ಪಿಸಿಕೊಂಡಿದ್ದನು. ಇತ್ತ ಬಡ ಕುಟುಂಬದ ಸಮೀರ್ ಅಹ್ಮದ್, ಜುಲ್ಲಾಕಾ ಬೇಗಂ ದಂಪತಿ ಲಕ್ಷಾಂತರ ರೂ.ಮೌಲ್ಯದ ಚಿನ್ನವನ್ನು ಕೊಡಲು ಆಗದೆ ಕಂಗಲಾಗಿ ಆತ್ಮಹತ್ಯೆಯ ನಿರ್ಧಾರ ಮಾಡಿದ್ದರು.