ಸಿಂಡಿಕೇಟ್ ಬ್ಯಾಂಕ್
ಸಿಂಡಿಕೇಟ್ ಬ್ಯಾಂಕ್ 
ರಾಜ್ಯ

ನಕಲಿ ದಾಖಲೆ ಮೇಲೆ ಸಾಲ ನೀಡಿಕೆ: ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ಸೇರಿ ಐವರಿಗೆ 5 ವರ್ಷ ಕಠಿಣ ಜೈಲು, 62 ಲಕ್ಷ ರೂ. ದಂಡ!

Srinivasamurthy VN

ಬೆಂಗಳೂರು: ನಕಲಿ ದಾಖಲೆ ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದ್ದು, ಪ್ರಕರಣದ ಪ್ರಮುಖ ಅಪರಾಧಿಗಳಾದ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ಸೇರಿ ಐವರಿಗೆ 5 ವರ್ಷ ಕಠಿಣ ಕಾರಾಗೃಹ ಜೈಲು ಶಿಕ್ಷೆ ವಿಧಿಸಿ, 62.30ಲಕ್ಷ ರೂ ದಂಡ ವಿಧಿಸಿದೆ.

ಬೆಂಗಳೂರಿನ ಜಾಲಹಳ್ಳಿ ಶಾಖೆಯ ಸಿಂಡಿಕೇಟ್ ಬ್ಯಾಂಕ್‌ಗೆ ವಂಚನೆ ಎಸಗಿದ ಐವರಿಗೆ ಸಿಬಿಐ ವಿಶೇಷ ನ್ಯಾಯಾಲಯವು 5 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 62.30 ಲಕ್ಷ ರೂಪಾಯಿ ದಂಡ ವಿಧಿಸಿದೆ. 62.30 ಲಕ್ಷ ದಂಡದ ಪೈಕಿ ಸತ್ಯಬಾಬು 15.95 ಲಕ್ಷ, ಭಾರತಿ, ನಳಿನಾಕ್ಷಿ, ರಮೇಶ್ ತಲಾ 13.70 ಲಕ್ಷ, ರಾಜಕುಮಾರ ನೇಶನ್ 5.25 ಲಕ್ಷ ರೂ ಹಣ ಪಾವತಿಸಬೇಕಿದೆ.

ಸಂತ್ರಸ್ತರಿಗೆ ಅಂದರೆ ಸಿಂಡಿಕೇಟ್ ಬ್ಯಾಂಕ್, ಜಾಲಹಳ್ಳಿ ಶಾಖೆ, (ಈಗ ಪಂಜಾಬ್ ನ್ಯಾಷನಲ್ ಬ್ಯಾಂಕ್) ಗೆ 61 ಲಕ್ಷ ರೂ.ಗಳನ್ನು -ಪರಿಹಾರವಾಗಿ ಪಾವತಿಸಬೇಕು ಮತ್ತು ಉಳಿದ ಮೊತ್ತವನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ತೀರ್ಪು ನೀಡಿದೆ. ಸಿಂಡಿಕೇಟ್ ಬ್ಯಾಂಕ್ ಜಾಲಹಳ್ಳಿ ಶಾಖೆ ಅಂದಿನ ವ್ಯವಸ್ಥಾಪಕ ಜಿ.ಸತ್ಯಬಾಬು, ಅಧಿಕಾರಿಗಳಾದ ಎಸ್. ಭಾರತಿ, ನಳಿನಾಕ್ಷಿ, ಎಸ್. ರಮೇಶ್ ಮತ್ತು ಪ್ರಿನ್ಸ್ ನೇಶನ್ ಶಿಕ್ಷೆಗೆ ಗುರಿಯಾದ ಅಪರಾಧಿಗಳಾಗಿದ್ದಾರೆ. ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಏನಿದು ಪ್ರಕರಣ?

2016ರ ಬ್ಯಾಂಕ್‌ನ ಹಿಂದಿನ ಹಿರಿಯ ವ್ಯವಸ್ಥಾಪಕ ಸತ್ಯಬಾಬು, ಇತರ ಅಪರಾಧಿಗಳೊಂದಿಗೆ ಸೇರಿಕೊಂಡು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನಕಲಿ ದಾಖಲೆ ಪಡೆದು ಸಾಲ ಮಂಜೂರು ಮಾಡಿದ್ದರು. ಅಕ್ರಮ ಬೆಳಕಿಗೆ ಬಂದು ಸತ್ಯಬಾಬು ಮತ್ತು ಇತರರ ವಿರುದ್ಧ ಸಿಬಿಐ ಎಫ್ ಐ ಆರ್ ದಾಖಲಿಸಿ ತನಿಖೆ ಕೈಗೊಂಡಿತ್ತು. ನಕಲಿ ದಾಖಲೆ ಪಡೆದು ಸಾಲ ಮಂಜೂರು ಮಾಡಿ ಬ್ಯಾಂಕ್‌ಗೆ ನಷ್ಟ ಉಂಟು ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಇದರ ಮೇರೆಗೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಪ್ರತ್ಯೇಕ ಎರಡು ಆರೋಪಪಟ್ಟಿಯನ್ನು ಸಿಬಿಐ ಅಧಿಕಾರಿಗಳು ಸಲ್ಲಿಸಿದ್ದರು.

ಬ್ಯಾಂಕ್ ಮ್ಯಾನೇಜರ್ ನಿಂದಲೇ ಸಂಚು

ಬ್ಯಾಂಕ್ ಮ್ಯಾನೇಜರ್ ಸತ್ಯಬಾಬು ಇತರರ ಜೊತೆ ಸೇರಿ ಸಂಚು ರೂಪಿಸಿ 25.80 ಲಕ್ಷ ಸಾಲ ಮಂಜೂರು ಮಾಡಿದ್ದು, ಮಂಜುನಾಥ ಇಂಜಿನಿಯರಿಂಗ್ ವರ್ಕ್ಸ್ ಮಾಲೀಕರಾಗಿದ್ದ ಭಾರತಿ ಅವರಿಗೆ 20 ಲಕ್ಷ ಸಾಲ ಮಂಜೂರು ಮಾಡಿದ್ದರು. ಅಂತೆಯೇ ನಳಿನಾಕ್ಷಿ ಅವರಿಗೆ ಸೇರಿದ ಮಹಾಲಕ್ಷ್ಮಿ ಗ್ರಾನೈಟ್ಸ್ ಗೆ 20 ಲಕ್ಷ ರೂ ಮಂಜೂರಾಗಿತ್ತು. 2014-15ರಲ್ಲಿ M/s DJ ಮ್ಯಾಕ್ಸ್ ಇಂಜಿನಿಯರಿಂಗ್ ಸಿಸ್ಟಂನ ಮಾಲೀಕ ರಮೇಶ್ ಅವರಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ಯೋಜನೆಯಡಿಯಲ್ಲಿ ಯಂತ್ರೋಪಕರಣಗಳನ್ನು ಖರೀದಿಸಿದ್ದರು ಎನ್ನಲಾಗಿದೆ. ಆದರೆ ಅಸಲಿ ಕಥೆ ಎಂದರೆ ಈ ಘಟಕಗಳು ಅಸ್ತಿತ್ವದಲ್ಲೇ ಇರಲಿಲ್ಲ. ಆದರೆ, ಸತ್ಯಬಾಬು ಅವರು ಘಟಕಗಳು ಅಸ್ತಿತ್ವದಲ್ಲಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಮಂಜೂರಾತಿ ಪೂರ್ವ ಮತ್ತು ನಂತರ ಭೇಟಿ ನೀಡದೆ ಸಾಲದ ಮೊತ್ತವನ್ನು ವಿತರಿಸಿದ್ದರು. ಇದು ಆರ್‌ಬಿಐ ಮತ್ತು ಬ್ಯಾಂಕ್ ರೂಪಿಸಿರುವ ಕಾರ್ಯವಿಧಾನಗಳು ಮತ್ತು ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಕೋರ್ಟ್ ಹೇಳಿದೆ.

SCROLL FOR NEXT