ಪ್ರಜ್ವಲ್ ರೇವಣ್ಣನನ್ನು ಬಂಧಿಸಿ ಕರೆತರುತ್ತಿರುವ ಮಹಿಳಾ ಅಧಿಕಾರಿಗಳು  
ರಾಜ್ಯ

ಪ್ರಜ್ವಲ್ ರೇವಣ್ಣ ಬಂಧಿಸಿ ಜೀಪ್ ನಲ್ಲಿ ಕರೆದೊಯ್ಯಲು ಮಹಿಳಾ ಅಧಿಕಾರಿಗಳು ಮಾತ್ರ ಬಂದಿದ್ದೇಕೆ?

ಮಹಿಳೆಯರ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ ಅವರ ಬಂಧನವಾಗಿದೆ.

ಬೆಂಗಳೂರು: ಅಮಾನತುಗೊಂಡಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಶುಕ್ರವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನ ಕೇಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಮಹಿಳಾ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಮಹಿಳಾ ಪೊಲೀಸರು ಅವರನ್ನು ಬಂಧಿಸಿ ಜೀಪಿನಲ್ಲಿ ಕೂರಿಸಿಕೊಂಡು ಎಸ್ ಐಟಿ ಕಚೇರಿಗೆ ಕರೆದೊಯ್ದರು. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಜಾರಿಗೊಳಿಸಲಾಗಿದ್ದ ಬಂಧನ ವಾರಂಟ್ ಪ್ರತಿ ಹಿಡಿದುಕೊಂಡು ಪ್ರಜ್ವಲ್ ಬಂಧನಕ್ಕೆ ಮಹಿಳಾ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಕಾಯುತ್ತಿದ್ದರು.

ಬಂಧಿಸಿ ಕರೆತಂದಿದ್ದು ಮಹಿಳಾ ಅಧಿಕಾರಿಗಳು: ಪ್ರಜ್ವಲ್‌ನಿಂದ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ವೀಡಿಯೊಗಳು ಸೋರಿಕೆಯಾದ ನಂತರ ಅವರ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ. ಹಾಸನದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಮರು ಆಯ್ಕೆ ಬಯಸುತ್ತಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ 33 ವರ್ಷದ ಮೊಮ್ಮಗ ಪ್ರಜ್ವಲ್ ಕಳೆದ ಏಪ್ರಿಲ್ 27 ರಂದು ವಿದೇಶಕ್ಕೆ ಹೋದವರು ಇಂದು ಬೆಳಗ್ಗೆಯಷ್ಟೇ ವಾಪಸ್ಸಾಗಿದ್ದಾರೆ.

ಅವರು ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿಗೆ ವಿಮಾನದಿಂದ ಇಳಿದ ಕೂಡಲೇ ಖಾಕಿ ಧರಿಸಿದ ಮಹಿಳೆಯರು ಅವರನ್ನು ಬರಮಾಡಿಕೊಂಡರು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಬಂಧನ ವಾರಂಟ್ ನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆಯಲ್ಲಿ, ಇಬ್ಬರು ಐಪಿಎಸ್ ಅಧಿಕಾರಿಗಳಾದ ಸುಮನ್ ಡಿ ಪೆನ್ನೇಕರ್ ಮತ್ತು ಸೀಮಾ ಲಾಟ್ಕರ್ ನೇತೃತ್ವದ ಮಹಿಳಾ ಪೊಲೀಸರು ಅವರನ್ನು ಸುತ್ತುವರೆದಿದ್ದರು.

ಪ್ರಜ್ವಲ್ ತಮ್ಮ ಅಧಿಕಾರ ಮತ್ತು ಸ್ಥಾನಮಾನ ದುರ್ಬಳಕೆ ಮಾಡಿಕೊಂಡು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡರು ಎಂಬ ಆರೋಪವಿದೆ. ಸಂತ್ರಸ್ತ ಮಹಿಳೆಯರು ಯಾರಿಗೂ ಹೆದರಬೇಕಾಗಿಲ್ಲ, ಧೈರ್ಯಮಾಡಿ ಮುಂದೆ ಬಂದು ದೂರು ನೀಡಬಹುದು ಎಂದು ಸಂದೇಶ ರವಾನಿಸಲು ಮಹಿಳಾ ಅಧಿಕಾರಿಗಳನ್ನೇ ಕರೆತರಲು ಕಳುಹಿಸಲಾಗಿತ್ತು ಎಂದು ಮೂಲಗಳು ಹೇಳುತ್ತವೆ.

ಎಲ್ಲಾ ಕಾನೂನು ಪ್ರಕ್ರಿಯೆಗಳ ಮೂಲಕ ಅವರನ್ನು ಬಂಧಿಸಲು ಅದೇ ಮಹಿಳೆಯರಿಗೆ ಅಧಿಕಾರವಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಮಹಿಳಾ ಅಧಿಕಾರಿಗಳು ಯಾರಿಗೂ ಹೆದರುವುದಿಲ್ಲ ಎಂಬ ಸಾಂಕೇತಿಕ ಸಂದೇಶವನ್ನು ಸಂತ್ರಸ್ತೆಯರಿಗೆ ರವಾನಿಸುವುದು ಕೂಡ ಇದರ ಹಿಂದಿನ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT