ಕಲಬುರಗಿ: ರಷ್ಯಾದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಕಲಬುರಗಿಯ ಮೂವರು ಯುವಕರು ಭಾನುವಾರ ತವರಿಗೆ ವಾಪಸ್ ಆಗಿದ್ದಾರೆ.
ಕಲಬುರಗಿಯ ನೂರಾನಿ ಮೊಹಲ್ಲಾ ನಿವಾಸಿ ಸೈಯದ್ ಇಲಿಯಾಸ್ ಹುಸೇನಿ, ಇಸ್ಲಾಮಬಾದ್ ಕಾಲೊನಿ ನಿವಾಸಿ ಸಮೀರ್ ಅಹ್ಮದ್, ಮಿಜಗುರಿ ಪ್ರದೇಶದ ಅಬ್ದುಲ್ ನಯೀಮ್ ವಾಪಸ್ ಆದವರು.
ರಷ್ಯಾಗೆ ಉದ್ಯೋಗ ಅರಸಿ 2023ರ ಡಿಸೆಂಬರ್ ತಿಂಗಳಲ್ಲಿ ಕಲಬುರಗಿಯ ಈ ಯುವಕರು ತೆರಳಿದ್ದರು. ಮುಂಬೈ ಮೂಲದ ಬಾಬಾ ಜಾಬ್ ಸೆಕ್ಯೂರಿಟಿ ಏಜೆನ್ಸಿ ಯುವಕರಿಂದ ಲಕ್ಷಾಂತರ ರೂಪಾಯಿ ಪಡೆದು, ರಷ್ಯಾದಲ್ಲಿ ಸೆಕ್ಯೂರಿಟಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿತ್ತು. ಅದರಂತೆ, ಯುವಕರು ರಷ್ಯಾಕ್ಕೆ ತೆರಳಿದ್ದರು.
ಆದರೆ, ಅಲ್ಲಿ ಉಕ್ರೇನ್ ಮತ್ತು ರಷ್ಯಾ ಮಧ್ಯೆ ಯುದ್ಧ ಶುರುವಾದ ಬಳಿಕ ರಷ್ಯಾ ಸೇನೆ ಈ ಯುವಕರನ್ನು ಯುದ್ದದಲ್ಲಿ ಬಳಸಿಕೊಳ್ಳಲು ಸೂಚಿಸಿತ್ತು. ಬಂಕರ್ಗಳನ್ನು ಅಗೆಯುವ ಕೆಲಸಕ್ಕೆ ಇವರನ್ನು ನಿಯೋಜಿಸಲಾಗಿತ್ತು. ಇದರಿಂದ ಬೇಸತ್ತ ಯುವಕರು, ರಷ್ಯಾದಲ್ಲಿ ತಮಗೆ ನೀಡಿರುವ ಕೆಲಸದ ಕುರಿತು ವಿಡಿಯೋ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಇದನ್ನು ಗಮನಿಸಿ ಯುವಕರನ್ನು ಮರಳಿ ತರುವಂತೆ ಕೇಂದ್ರ ಸರಕಾರಕ್ಕೆ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡಾ ಪತ್ರ ಬರೆದು ಒತ್ತಾಯಿಸಿದ್ದರು.
ಬಳಿಕ ಪ್ರಧಾನಿ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿ, ವಾಪಸ್ ಆದ ಕೆಲವೇ ದಿನಗಳಲ್ಲಿ ಮೂವರು ಯುವಕರು ಮರಳಿ ತವರಿಗೆ ಮರಳಿದ್ದಾರೆ.
ಕಲಬುರಗಿ ಜಿಲ್ಲೆಯ ಮದ್ಬೂಲ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿರುವ ಸೈಯದ್ ನವಾಜ್ ಅಲಿ ಅವರು ಮಾತನಾಡಿ, ತಮ್ಮ ಮಗ ಸೈಯದ್ ಇಲಿಯಾಸ್ ಹುಸೇನಿ ತನ್ನ ಗೆಳೆಯರೊಂದಿಗೆ ವಾಪಸ್ಸಾಗಿದ್ದಾನೆಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು, ನಕಲಿ ಜಾಬ್ ಏಜೆನ್ಸಿಗಳು ಯುವಕರನ್ನು ಮರಳು ಮಾಡಿ ಹೆಚ್ಚಾಗಿ ಮೋಸ ಮಾಡುತ್ತಿವೆ. ಯುವಕರು ಆಲೋಚಿಸದೆ ಈ ಏಜೆನ್ಸಿಗಳಿಗೆ ಬಲಿ ಆಗಬಾರದು ಎಂದು ಮನವಿ ಮಾಡಿದ್ದಾರೆ.