ಹೊಸನಗರ: ಹೊಸನಗರ ತಾಲ್ಲೂಕಿನ ಹೂವಿನಕೋಣೆಯಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಯ ನೀರಿನ ಟ್ಯಾಂಕ್ಗೆ ಕೀಟನಾಶಕ ಬೆರೆಸಿದ ಪ್ರಕರಣದ ಬಗ್ಗೆ ಪೊಲೀಸ್ ತನಿಖೆ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ. ಅದೇ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಓದುತ್ತಿರುವ 11 ವರ್ಷದ ಬಾಲಕ ಪ್ರಮುಖ ಆರೋಪಿಯಾಗಿದ್ದಾನೆ.
ಆ ಬಾಲಕನನ್ನು ಶಾಲೆಯಲ್ಲಿ ನಾಯಕನನ್ನಾಗಿ ಮಾಡಲಾಗಿತ್ತು, ಆದರೆ ಯಾರೂ ಅವನ ಸೂಚನೆಗಳನ್ನು ಪಾಲಿಸಲಿಲ್ಲ ಆದ ಕಾರಣ ಈ ಕೃತ್ಯಕ್ಕೆ ಮುಂದಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 15 ದಿನಗಳ ಹಿಂದೆ, 2 ನೇ ತರಗತಿಯ ವಿದ್ಯಾರ್ಥಿಯೊಬ್ಬ ಸಹಪಾಠಿಯ ಕುಡಿಯುವ ನೀರಿನ ಬಾಟಲಿಗೆ ಫಿನಾಲ್ ಬೆರೆಸಿದ್ದ ಎನ್ನಲಾಗಿದೆ. ಆ ಘಟನೆಯನ್ನು ಉದಾಹರಣೆಯನ್ನಾಗಿ ಕಂಡ ಬಾಲಕ, ಇತರರು ತನ್ನ ಮಾತನ್ನು ಪಾಲಿಸುತ್ತಿಲ್ಲ ಎಂದು ಅಸಮಾಧಾನಗೊಂಡು ಶಾಲೆಯ ನೀರಿನ ಟ್ಯಾಂಕ್ಗೆ ಕೀಟನಾಶಕವನ್ನು ಬೆರೆಸಲು ಯೋಜಿಸಿದ್ದ ಎಂದು ವರದಿಯಾಗಿದೆ.
ಎಸ್ಪಿ ಮಿಥುನ್ ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ಈ ಪ್ರಕರಣದ ಬಗ್ಗೆ ಮಾತನಾಡಿದ್ದು, ಬಾಲಕ ಶುಂಠಿ ಬೆಳೆ ರಕ್ಷಣೆಗಾಗಿ ಉದ್ದೇಶಿಸಲಾದ ಕೀಟನಾಶಕವನ್ನು ತನ್ನ ಮನೆಯಿಂದ ತಂದು ಶಾಲೆಯ ನೀರಿನ ಟ್ಯಾಂಕ್ಗೆ ಸುರಿದಿದ್ದಾನೆ. "ಈ ವಿದ್ಯಾರ್ಥಿ ಶಾಲೆ ಅಧಿಕೃತವಾಗಿ ತೆರೆಯುವುದಕ್ಕೂ ಮೊದಲು ಬೆಳಿಗ್ಗೆ 9 ಗಂಟೆಗೆ ಶಾಲೆಗೆ ಬಂದಿದ್ದ ಮತ್ತು ಕೀಟನಾಶಕವನ್ನು ಟ್ಯಾಂಕ್ಗೆ ಬೆರೆಸಿದ್ದ. ಇಬ್ಬರು ವಿದ್ಯಾರ್ಥಿಗಳು ಅವನು ಈ ಕೃತ್ಯ ಎಸಗಿದ್ದನ್ನು ನೋಡಿದ್ದಾರೆ ಆದರೆ ಯಾರಿಗಾದರೂ ಹೇಳಿದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವನು ಅವರಿಗೆ ಬೆದರಿಕೆ ಹಾಕಿದ್ದ. ಅವನು ಇತರ ತರಗತಿಗಳಿಗೆ ಹೋಗಿ ಅದರ ಬಗ್ಗೆ ಮಾತನಾಡದಂತೆ ಎಚ್ಚರಿಸಿದ್ದಾನೆ." ಎಂದು ಎಸ್ ಪಿ ಹೇಳಿದ್ದಾರೆ.
ಹಲವಾರು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ನಂತರ ಪೊಲೀಸರು ಪ್ರಕರಣವನ್ನು ಭೇದಿಸಲು ಸಾಧ್ಯವಾಯಿತು. ಬಾಲಕನನ್ನು ಬಾಲಾಪರಾಧಿ ತಿದ್ದುಪಡಿ ಗೃಹಕ್ಕೆ ಕಳುಹಿಸಲಾಗುವುದು. ಯಾರಾದರೂ ಬಾಲಕನನ್ನು ಈ ಕೃತ್ಯ ಎಸಗಲು ಪ್ರಚೋದಿಸಿದ್ದಾರೆಯೇ ಎಂದು ಕೇಳಿದಾಗ, ಪೊಲೀಸರು ಬೇರೆ ಯಾರೂ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ.
ಅಪರಾಧಿಗಳನ್ನು ಪತ್ತೆಹಚ್ಚಲು ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಘಟನೆಯನ್ನು ಸಾಮೂಹಿಕ ಹಾನಿಯನ್ನುಂಟುಮಾಡುವ ಗುರಿಯನ್ನು ಹೊಂದಿರುವ "ಭಯೋತ್ಪಾದಕ ಕೃತ್ಯ" ಎಂದು ಕರೆದಿದ್ದರು.