ಮಂಡ್ಯ: ತಾಲ್ಲೂಕಿನ ಆಲಕೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮೊಟ್ಟೆ ಕೊಡುವುದನ್ನು ವಿರೋಧಿಸಿದ ಪೋಷಕರು, 84 ಮಕ್ಕಳ ವರ್ಗಾವಣೆ ಪತ್ರ ಪಡೆದಿದ್ದು, ಅಕ್ಕಪಕ್ಕದ ಕೀಲಾರ, ಹನಕೆರೆ, ಬೆಸಗರಹಳ್ಳಿ ಸರ್ಕಾರಿ ಶಾಲೆಗೆ ದಾಖಲಿಸಿದ್ದಾರೆ.
ಎಲ್ಕೆಜಿ, ಯುಕೆಜಿ ಸೇರಿ 144 ಮಕ್ಕಳಿರುವ ಶಾಲೆಯ ಬಳಿ ಇತಿಹಾಸ ಪ್ರಸಿದ್ಧ ವೀರಭದ್ರೇಶ್ವರಸ್ವಾಮಿ ದೇವಾಲಯವಿದೆ ಎಂಬ ಕಾರಣಕ್ಕೆ ಮೊಟ್ಟೆ ಬದಲು ಬಾಳೆಹಣ್ಣು ನೀಡಲಾಗುತ್ತಿತ್ತು. ಮಕ್ಕಳಿಗೆ ಮೊಟ್ಟೆ ನೀಡಬೇಕು ಎಂಬ ಕೆಲ ಪೋಷಕರ ಮಾತಿಗೆ ಇತರೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಅವರನ್ನು ಮನವೊಲಿಸುವ ಅಧಿಕಾರಿಗಳ ಪ್ರಯತ್ನ ಫಲ ನೀಡಿಲ್ಲ.
ಮೊಟ್ಟೆ ತಿನ್ನುವುದನ್ನು ನಾವು ವಿರೋಧಿಸುವುದಿಲ್ಲ. ದೇವಾಲಯ ಇರುವುದರಿಂದ ಕೊಡಬಾರದು, ಮನೆಗೇ ಕೊಟ್ಟು ಕಳುಹಿಸಲಿ ಎಂದಿದ್ದೆವು. ಬೇಯಿಸಿ ಕೊಡಬೇಕು ಎಂದು ಕೆಲವರು ಪಟ್ಟುಹಿಡಿದಿದ್ದರು.
ಆಚಾರ ವಿಚಾರಕ್ಕೆ ಅಡೆತಡೆ ಆಗುತ್ತದೆಂದು ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿದೆವು, ಬ್ಲಾಕ್ ಶಿಕ್ಷಣ ಅಧಿಕಾರಿ ಕೆ ಟಿ ಸೌಭಾಗ್ಯ ಪೋಷಕರ ಮನವೊಲಿಸಲು ಪ್ರಯತ್ನಿಸಿದರು, ಆದರೆ ವ್ಯರ್ಥವಾಯಿತು. ಎಂದು ಎಸ್ಡಿಎಂಸಿ ಸದಸ್ಯ ಚಂದ್ರು ಆಲಕೆರೆ ಹೇಳಿದರು.