ಬೆಳಗಾವಿ: ಧರ್ಮಸ್ಥಳದ ವಿರುದ್ಧ ಪಿತೂರಿ ನಡೆಯುತ್ತಿದೆ. ಇಂತಹ ವಿವಾದಗಳು ಹಲವು ತಲೆಮಾರುಗಳಿಂದ ಉಳಿದುಕೊಂಡಿರುವ ಸಂಸ್ಥೆಗಳಿಗೆ ಹಾನಿ ಮಾಡಬಹುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಧವಾರ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, 'ಧರ್ಮಸ್ಥಳದ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ನಾನು ವಿಧಾನಸಭೆಯಲ್ಲಿ ಬಹಿರಂಗವಾಗಿ ಹೇಳಿದ್ದೆ. ಆದರೆ, ಸತ್ಯ ಮೇಲುಗೈ ಸಾಧಿಸಿದೆ. ಕಾನೂನು ತನ್ನದೇ ಆದ ಹಾದಿಯನ್ನು ಹಿಡಿಯಬೇಕು. ಇಂತಹ ವಿವಾದಗಳು ಹಲವು ತಲೆಮಾರುಗಳಿಂದ ಜಾರಿಯಲ್ಲಿರುವ ಸಂಸ್ಥೆಗಳಿಗೆ ಹಾನಿ ಮಾಡಬಹುದು. ಆರ್ಎಸ್ಎಸ್ ಮತ್ತು ಬಿಜೆಪಿ ನಡುವೆ ದೊಡ್ಡ ವ್ಯತ್ಯಾಸವಿದೆ ಮತ್ತು ಅದು ಕೂಡ ಈ ವಿವಾದದಲ್ಲಿ ಆಳವಾಗಿ ಬೇರೂರಿದೆ...' ಎಂದು ಸುದ್ದಿಗಾರರಿಗೆ ತಿಳಿಸಿದರು.
ಇದಕ್ಕೂ ಮೊದಲು, ಆಗಸ್ಟ್ 31 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆಯನ್ನು ತಳ್ಳಿಹಾಕಿದರು. ವಿಶೇಷ ತನಿಖಾ ತಂಡ (ಎಸ್ಐಟಿ) ಈಗಾಗಲೇ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಿದರು.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ ಕೊನೆಗೂ ತಾರ್ಕಿಕ ಅಂತ್ಯ ಕಾಣುತ್ತಿದ್ದು, ವಿಶೇಷ ತನಿಖಾ ತಂಡ (SIT) ಬೆಳ್ತಂಗಡಿ ನ್ಯಾಯಾಲಯಕ್ಕೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ ಎನ್ನಲಾಗಿದೆ.
ಪ್ರಾಥಮಿಕ ವರದಿಯಲ್ಲಿ, ಧರ್ಮಸ್ಥಳದ ವ್ಯವಸ್ಥಾಪಕರಿಗೆ ಮತ್ತು ಮೇಲ್ವಿಚಾರಕರಿಗೆ ಕ್ಲೀನ್ಚಿಟ್ ನೀಡಲಾಗಿದ್ದು, ಧರ್ಮಸ್ಥಳದಲ್ಲಿ ಅಂತಹ ಯಾವುದೇ ಕೃತ್ಯಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ಆರೋಪಿಗಳಾದ ಚಿನ್ನಯ್ಯ, ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠ್ಠಲ ಗೌಡ, ಟಿ ಜಯಂತ್ ಮತ್ತು ಸುಜಾತಾ ಭಟ್ ಅವರು ಅಪರಾಧ ಕೃತ್ಯದಲ್ಲಿ ನೇರವಾಗಿ ಶಾಮೀಲಾಗಿದ್ದಾರೆ. ಈ ಗ್ಯಾಂಗ್, A1 ಆರೋಪಿ ಚಿನ್ನಯ್ಯ ಅಲಿಯಾಸ್ ಚಿನ್ನಯ್ಯನಿಗೆ ಹಣದ ಆಮಿಷ ತೋರಿಸಿ, ಆತನಿಂದ 'ಅಪರಿಚಿತ ಶವಗಳನ್ನು ಹೂತಿದ್ದೇನೆ' ಎಂದು ಸುಳ್ಳು ಹೇಳಿಸಿ, ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿರುವುದು ಬಯಲಾಗಿದೆ. ಹಣದ ಆಸೆಗೆ ಬಲಿಯಾದ ಚಿನ್ನಯ್ಯ ಬುರುಡೆ ಕಥೆ ಕಟ್ಟಿ, ಈ ಷಡ್ಯಂತ್ರಕ್ಕೆ ಸಹಕರಿಸಿದ್ದಾನೆ ಎಂದು ತಿಳಿಸಿದೆ.
ಕೋರ್ಟ್ಗೆ ಸಲ್ಲಿಸಿರುವುದು ಕೇವಲ ಪ್ರಾಥಮಿಕ ವರದಿಯಾಗಿದ್ದು, ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ, ಮತ್ತಷ್ಟು ಸಮಯ ನೀಡುವಂತೆ ಎಸ್ಐಟಿ ನ್ಯಾಯಾಲಯವನ್ನು ಕೋರಿದೆ. ಕೆಲವು ಪ್ರಮುಖ ತಾಂತ್ರಿಕ ಸಾಕ್ಷಿಗಳ ವರದಿಗಳು ಇನ್ನೂ ಬರಬೇಕಿದೆ. ಈ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಅಂತಿಮ ಮತ್ತು ಸಮಗ್ರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ವಿಶೇಷ ತನಿಖಾ ತಂಡ ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟಿದೆ ಎನ್ನಲಾಗಿದೆ.