ಬೆಳಗಾವಿ: 2024–25ನೇ ಸಾಲಿನಲ್ಲಿ ರಾಜ್ಯಕ್ಕೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ನಿಂದ ನೀಡಲಾಗುತ್ತಿದ್ದ ಕಡಿಮೆ ಬಡ್ಡಿ ದರದ ಹಣಕಾಸು ವ್ಯವಸ್ಥೆಯಲ್ಲಿ 2,185 ಕೋಟಿ ರೂಪಾಯಿಗಳ ಕಡಿತವಾಗಿದ್ದು, ಇದರಿಂದ ರಾಜ್ಯದ ಕೃಷಿ ಸಾಲ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕುಣಿಗಲ್ ಶಾಸಕ ಡಾ.ಹೆಚ್.ಡಿ.ರಂಗನಾಥ್ ಅವರ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರಿಸಿದರು.
ಕೇಂದ್ರದ ನಬಾರ್ಡ್ನಿಂದ 2024-25ನೇ ಸಾಲಿಗೆ ಕಡಿಮೆ ಬಡ್ಡಿದರದಲ್ಲಿ ರೂ.5600 ಅನುದಾನ ಬರಬೇಕಿತ್ತು. ಆದರೆ ರೂ.3415 ಕೋಟಿ ಮಾತ್ರ ಸಂದಾಯವಾಗಿದ್ದು, ರೂ.2185 ಕೋಟಿ ಅನುದಾನ ಕಡಿತವಾಗಿದೆ ಎಂದು ಮಾಹಿತಿ ನೀಡಿದರು.
ಅನುದಾನದಲ್ಲಿ ಕಡಿತದ ಪರಿಣಾಮ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರಿಯಾಯಿತಿ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡುವವಲ್ಲಿ ಹಲವು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ತೊಂದರೆ ಉಂಟಾಗಿದೆ ಎಂದು ಹೇಳಿದರು.
ಮದುಗಿರಿ ಕ್ಷೇತ್ರದಲ್ಲಿ ಶೇ.26 ರಷ್ಟು, ಕುಣಿಗಲ್ ಕ್ಷೇತ್ರದಲ್ಲಿ ಶೇ.8 ರಷ್ಟು ಎಸ್.ಸಿ ಹಾಗೂ ಎಸ್.ಟಿ ಜನಸಂಖ್ಯೆಯಿದೆ. ಈ ಹಿನ್ನೆಲೆಯಲ್ಲಿ ಅನುದಾನದ ಹಂಚಿಕೆಯಲ್ಲಿ ತಾರತಮ್ಯ ಉಂಟಾಗಿದೆ. ಮುಂಬರುವ ವರ್ಷದಲ್ಲಿ ಈ ತಾರತಮ್ಯ ನಿವಾರಿಸಿ ಕುಣಿಗಲ್ ಕ್ಷೇತ್ರಕ್ಕೆ ನಬಾರ್ಡ್ ಅನುದಾನ ಹಂಚಿಕೆ ಮಾಡುವುದಾಗಿ ಭರವಸೆ ನೀಡಿದರು.
ಕೃಷಿ ಪತ್ತಿನ ಸಹಕಾರಿ ಸಂಘಗಳ ಗಣಕೀಕರಣ ಯೋಜನೆಯಡಿ ಕುಣಿಗಲ್ ತಾಲ್ಲೂಕಿನ ಕೃಷಿ ಪತ್ತಿನ ಸಂಘಗಳಿಗೆ ಕಂಪ್ಯೂಟರ್, ಸ್ಕ್ಯಾನರ್, ಬಯೋಮೆಟ್ರಿಕ್ ಸ್ಕ್ಯಾನರ್, ಯು.ಪಿ.ಎಸ್ ಸೇರಿದಂತೆ ನೆರ್ಟ್ವರ್ಕಿಂಗ್ ಉಪಕರಣಗಳನ್ನು ನೀಡಲು ಪ್ರತಿ ಸಂಘಕ್ಕೆ ರೂ.1.30 ಲಕ್ಷದಂತೆ ರಾಜ್ಯ ಸರ್ಕಾರ ರೂ.24.70 ಲಕ್ಷ ಬಿಡುಗಡೆ ಮಾಡಿದೆ.
ತುಮಕೂರು ಡಿ.ಸಿ.ಸಿ ಬ್ಯಾಂಕ್ನ ಕುಣಿಗಲ್ ತಾಲ್ಲೂಕಿನ ಸಂಘಗಳಿಗೆ 2024-25ರಲ್ಲಿ 14,850 ರೈತರಿಗೆ ರೂ.40.33 ಕೋಟಿ ಅಲ್ಪಾವಧಿ ಕೃಷಿ ಸಾಲ ನೀಡುವ ಗುರಿ ನಿಗದಿಪಡಿಸಲಾಗಿದ್ದು, ಈ ಪೈಕಿ 10,833 ರೈತರು ರೂ.38.40 ಕೋಟಿ ಸಾಲ ಪಡೆದಿದ್ದಾರೆ. 11 ರೈತರಿಗೆ ರೂ.1.58 ಕೋಟಿ ಮಧ್ಯಮಾಧಿ/ಧೀರ್ಘಾವಧಿ ಕೃಷಿ ಸಾಲ ನೀಡಲಾಗಿದೆ.
2025-26ನೇ ಸಾಲಿನಲ್ಲಿ ತಾಲ್ಲೂಕಿನ 13,750 ರೈತರಿಗೆ ರೂ.40 ಕೋಟಿ ಅಲ್ಪಾವಧಿ ಕೃಷಿ ಸಾಲ ನೀಡಲು ಗುರಿ ನಿಗದಿಪಡಿಸಲಾಗಿದ್ದು, ನವೆಂಬರ್ ಅಂತ್ಯದವರೆಗೆ 2983 ರೈತರು ರೂ.10.50 ಕೋಟಿ ಅಲ್ಪಾವಧಿ ಸಾಲ ಪಡೆದಿದ್ದಾರೆ. 20 ರೈತರಿಗೆ 2 ಕೋಟಿ ಮಧ್ಯಮಾವಧಿ ಹಾಗೂ ಧೀರ್ಘಾವಧಿ ಸಾಲ ನೀಡಲು ಗುರಿ ನಿಗದಿಪಡಿಸಲಾಗಿದ್ದು, 13 ರೈತರು 1.30 ಕೋಟಿ ಮಧ್ಯಮಾವಧಿ ಹಾಗೂ ದೀರ್ಘಾವದಿ ಕೃಷಿ ಸಾಲ ಪಡೆದಿದಾರೆ ಎಂದು ತಿಳಿಸಿದರು.