ಬೆಂಗಳೂರು: ಇನ್ಸ್ಪೆಕ್ಟರ್ಗೆ ರಕ್ತದಲ್ಲಿಯೇ ಪ್ರೇಮಪತ್ರ ಬರೆದು ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ ಮಹಿಳೆ ಕೊನೆಗೂ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ಸಂಜನಾ ಅಲಿಯಾಸ್ ವನಜಾ(40) ಜೈಲು ಸೇರಿದ ಮಹಿಳೆ. ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸತೀಶ್ ಅವರಿಗೆ ಕರೆ ಮಾಡಿ ಪ್ರೀತಿಸುವಂತೆ ವನಜಾ ಪೀಡಿಸುತ್ತಿದ್ದರು. ಹೀಗಾಗಿ ಆಕೆಯ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ.
ಸಿ.ಜೆ.ಸತೀಶ್ ಅವರು ಕಳೆದ ಆಗಸ್ಟ್ನಲ್ಲಿ ರಾಮಮೂರ್ತಿನಗರ ಠಾಣೆಯ ಇನ್ಸ್ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಅಕ್ಟೋಬರ್ ಕೊನೆ ವಾರದಲ್ಲಿ ಸತೀಶ್ ಅವರ ಇಲಾಖೆಯ ವಾಟ್ಸ್ಆ್ಯಪ್ ನಂಬರ್ಗೆ ಸಂಜನಾ ನಿರಂತರವಾಗಿ ಸಂದೇಶ ಕಳುಹಿಸುತ್ತಿದ್ದಳು. ಪ್ರೀತಿಸುವಂತೆ ಒತ್ತಾಯಿಸಿದ್ದು, ಉತ್ತರ ನೀಡುವಂತೆ ದುಂಬಾಲು ಬಿದ್ದಿದ್ದಳು. ಆರಂಭದಲ್ಲಿ ಯಾರೋ ಹಾಸ್ಯ ಮಾಡುತ್ತಿದ್ದಾರೆ ಎಂದು ಸುಮ್ಮನಾಗಿದ್ದರು.
ಆದರೆ, ಆಕೆಯಿಂದ ನಿರಂತರವಾಗಿ ಕಾಲ್ ಬರುತ್ತಿತ್ತು. ಹೀಗಾಗಿ ಆಕೆಯ 10ಕ್ಕೂ ಹೆಚ್ಚು ಮೊಬೈಲ್ ನಂಬರ್ಗಳನ್ನು ಬ್ಲಾಕ್ ಮಾಡಲಾಗಿತ್ತು. ಆದರೂ ಬೇರೆ ಬೇರೆ ನಂಬರ್ ಗಳಿಂದ ಕರೆ, ಸಂದೇಶ ಕಳುಹಿಸಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದಳು.
ಒಮ್ಮೆ ಪಿಐ ಸತೀಶ್ ಠಾಣೆಯಲ್ಲಿ ಇಲ್ಲದ ವೇಳೆ ತುಪ್ಪದಿಂದ ಮಾಡಿದ ಕಜ್ಜಾಯವನ್ನು ಡಬ್ಬಿಯಲ್ಲಿ ತುಂಬಿಕೊಂಡು ಬಂದಿದ್ದಳು. ಜತೆಗೆ ಹೂಗುಚ್ಚ ತಂದು ಕೊಟ್ಟಿದ್ದಳು. ಬಳಿಕ ಪಿಐ ಎಲ್ಲವನ್ನು ನಿರಾಕರಿಸಿದರು. ಅಷ್ಟಕ್ಕೆ ಸುಮ್ಮ ನಾಗದ ಸಂಜನಾ, ನ.7ರಂದು ಇನ್ಸ್ಪೆಕ್ಟರ್ ಸತೀಶ್ ಅವರ ಮನಗೆಲ್ಲಲು ಚಿನ್ನಿ ಐ ಲವ್ ಯು.. ಯು ಲವ್ ಮೀ ಎಂಬ ರಕ್ತದಲ್ಲೇ 3 ಪ್ರೇಮ ಪತ್ರ ಬರೆದಿದ್ದಳು.
ಜತೆಗೆ ನೆಕ್ಸಿಟೋ ಪ್ಲಸ್ ಎಂಬ ಮಾತ್ರೆಗಳನ್ನು ಪೊಲೀಸ್ ಠಾಣೆಗೆ ಮುಚ್ಚಿದ ಲಕೋಟೆಯಲ್ಲಿ ಕಳುಹಿಸಿದ್ದಳು. ಈ ಪತ್ರದಲ್ಲಿ ಚಿನ್ನಿ ನಿನ್ನನ್ನು ಪ್ರೀತಿಸುತ್ತಿದ್ದೇನೆ. ನೀನು ನನ್ನನ್ನು ಪ್ರೀತಿಸಬೇಕು ಎಂದು ಹೃದಯದ ಚಿಹ್ನೆ ಸಹಿತ ಪತ್ರದಲ್ಲಿ ಬರೆಯಲಾಗಿತ್ತು.
ಸಂಜನಾ ಅಲಿಯಾಸ್ ವನಜಾ ತಾನು ಕಾಂಗ್ರೆಸ್ ಕಾರ್ಯಕರ್ತೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಹಾಗೂ ಸಚಿವರಾದ ಲಕ್ಷ್ಮೀ ಹೆಬ್ಟಾಳ್ಕರ್, ಮಾಜಿ ಶಾಸಕಿ ಮೊಟ್ಟಮ್ಮ ಆಪ್ತೆ ಎಂದು ಹೇಳಿಕೊಂಡು ಪಿಐ ಸತೀಶ್ ಅವರನ್ನು ಪರಿಚಯ ಮಾಡಿಕೊಂಡಿದ್ದಳು.
ಬಳಿಕ ಪ್ರೀತಿಸಲೇಬೇಕು ಎಂದು ಇನ್ಸ್ಪೆಕ್ಟರ್ ಮೇಲೆ ಒತ್ತಡ ಹೇರಲಾರಂಭಿಸಿದ್ದಳು. ಅಲ್ಲದೆ, ಒಮ್ಮೆ ಗೃಹ ಸಚಿವರ ಕಚೇರಿಯಿಂದಲೂ ಕರೆ ಮಾಡಿಸಿ, ತಾನೂ ಕೊಡುವ ದೂರು ಸ್ವೀಕರಿಸುವಂತೆ ಹೇಳಿಸಿದ್ದಳು ಎಂಬುದು ಗೊತ್ತಾಗಿದೆ.