ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಭೆಗೆ ಕೆಲವು ದಿನಗಳ ಮುಂಚೆ ಅಂದರೆ ಫೆಬ್ರವರಿ 10 ರಂದು ಬಿಡದಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಭಿವೃದ್ಧಿಪಡಿಸಿದ 1490.65 ಎಕರೆ ಭೂಮಿಯನ್ನು ವಿಶೇಷ ಹೂಡಿಕೆ ಪ್ರದೇಶವೆಂದು ಕರ್ನಾಟಕ ಸರ್ಕಾರ ಘೋಷಿಸಿದೆ.
ಅಧಿಸೂಚಿತ ಪ್ರದೇಶವು ರಾಮನಗರ ಜಿಲ್ಲೆಯ ಬಿಡದಿ ಮೊದಲ ಮತ್ತು ಎರಡನೇ ಹಂತದಲ್ಲಿ- ವಲಯ 1 ಮತ್ತು 2 ಕೈಗಾರಿಕಾ ಪ್ರದೇಶ ವಲಯಗಳನ್ನು ಒಳಗೊಂಡಿದೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಸ್ತಾವನೆಯ ಆಧಾರದ ಮೇಲೆ ಆದೇಶವನ್ನು ಹೊರಡಿಸಲಾಗಿದೆ. ಸೋಮವಾರ ಇದನ್ನು ಸಾರ್ವಜನಿಕಗೊಳಿಸಲಾಗಿದೆ ಎಂದು ಇಲಾಖೆಯ ಕಾರ್ಯದರ್ಶಿ ಪಿ ಸೆಲ್ವ ಕುಮಾರ್ ಅವರು ಟಿಎನ್ಐಇಗೆ ತಿಳಿಸಿದ್ದಾರೆ.
2022 ರಲ್ಲಿ ವಿಶೇಷ ಹೂಡಿಕೆ ಪ್ರದೇಶ ಕಾಯ್ದೆಯನ್ನು ಪರಿಚಯಿಸಲಾಯಿತು, 2024 ರಲ್ಲಿ ನಿಯಮಗಳನ್ನು ರೂಪಿಸಲಾಯಿತು, ಇದು ಅಭಿವೃದ್ಧಿಗಾಗಿ ಪ್ರಮುಖ ಕೈಗಾರಿಕಾ ಪ್ರದೇಶಗಳನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರೀಸ್ ಅಸೋಸಿಯೇಷನ್ ಮಾದರಿಯು ಕಾಯ್ದೆ ಮತ್ತು ಅದರ ನಿಯಮಗಳನ್ನು ರೂಪಿಸಲು ಆಧಾರವಾಗಿ ಕಾರ್ಯನಿರ್ವಹಿಸಿತು. ಇದರ ಅಡಿಯಲ್ಲಿ, ಸಂಗ್ರಹಿಸಿದ ಆದಾಯ ಮತ್ತು ತೆರಿಗೆಗಳಲ್ಲಿ 70% ಅನ್ನು ಸುಧಾರಣೆಗಳಿಗಾಗಿ ಸ್ಥಳೀಯ ಸಂಸ್ಥೆಗೆ ಹಂಚಲಾಗುತ್ತದೆ, ಆದರೆ 30% ರಾಜ್ಯ ಸರ್ಕಾರಕ್ಕೆ ತೆರಿಗೆ ಆದಾಯವಾಗಿ ಹೋಗುತ್ತದೆ ಎಂದು ವಿವರಿಸಿದ್ದಾರೆ.
"ELCIA ಮಾದರಿಯಡಿಯಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ 20 ಕೈಗಾರಿಕಾ ಪ್ರದೇಶಗಳನ್ನು ಪಟ್ಟಿ ಮಾಡಿದೆ, ಅಲ್ಲಿ KIADB ಅಭಿವೃದ್ಧಿ ಪ್ರಯತ್ನಗಳಿಗೆ ಮುಂಚೂಣಿಯಲ್ಲಿದೆ" ಎಂದು ಕುಮಾರ್ ಹೇಳಿದರು. ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಬಿಡದಿಯನ್ನು ಪಟ್ಟಣವೆಂದು ಬಹಳ ಹಿಂದಿನಿಂದಲೂ ಕಲ್ಪಿಸಿಕೊಂಡಿದೆ.