ಬೆಂಗಳೂರು: ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಬಿಜೆಪಿ ಯುವ ಸಂಸದ ತೇಜಸ್ವಿಸೂರ್ಯ ಹಾಗೂ ಕಲಾವಿದೆ ಶಿವಶ್ರೀ ಅವರ ಆರತಕ್ಷತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆಯಲಿದ್ದು, ಅಭಿಮಾನಿಗಳು, ರಾಜಕೀಯ ಸ್ನೇಹಿತರಿಗೆ ಆಹ್ವಾನ ನೀಡಿದ್ದಾರೆ.
ಮಾರ್ಚ್ 5 ಹಾಗೂ 6 ರಂದು ತೇಜಸ್ವಿ ಸೂರ್ಯ ವಿವಾಹ ಸಮಾರಂಭ ಬೆಂಗಳೂರು ಕನಕಪುರದ ರೆಸಾರ್ಟ್ ನಲ್ಲಿ ನಡೆದಿತ್ತು. ಇದಕ್ಕೆ ಕುಟುಂಬ ಸದಸ್ಯರು, ಆಪ್ತ ವಲಯದ ಸ್ನೇಹಿತರು, ರಾಜಕೀಯ ಗಣ್ಯರಿಗಷ್ಟೇ ಆಹ್ವಾನ ನೀಡಲಾಗಿತ್ತು.
ಇಂದು ಬೆಳಗ್ಗೆ ಬೆಂಗಳೂರಿನ ಅರಮನೆ ಮೈದಾನ ವೃಕ್ಷ, ಗಾಯತ್ರಿ ವಿಹಾರ, ಪ್ಯಾಲೇಸ್ ಮೈದಾನದಲ್ಲಿ ರಿಸೆಪ್ಷನ್ ನಡೆಯಲಿದೆ. ಆರತಕ್ಷತೆಗೆ ಅಭಿಮಾನಿಗಳಿಗೆ ತೇಜಸ್ವಿ ಸೂರ್ಯ ಅವರು ಆಹ್ವಾನ ನೀಡಿದ್ದು, ಇದರ ಜೊತೆಗೆ ಒಂದು ಮನವಿಯನ್ನೂ ಮಾಡಿದ್ದಾರೆ.
ಭಾನುವಾರ ನಮ್ಮ ವಿವಾಹ ಆರತಕ್ಷತೆ ಕಾರ್ಯಕ್ರಮವಿದ್ದು, ನಿಮ್ಮೆಲ್ಲರ ಆಗಮನ ನಮಗೆ ಹೆಚ್ಚಿನ ಸಂತಸ ತರಲಿದೆ. ಇದೆಲ್ಲ ಸಂಭ್ರಮ, ಸಂತಸದ ನಡುವೆ ತಮ್ಮೆಲ್ಲರಲ್ಲಿ ನನ್ನದೊಂದು ವಿನಂತಿ.
ಭಾರತದಲ್ಲಿ ಪ್ರತಿವರ್ಷ ನಡೆಯುವ 1 ಕೋಟಿಗೂ ಅಧಿಕ ಮದುವೆ ಸಮಾರಂಭಗಳಲ್ಲಿ ಶೇ.85 ರಷ್ಟು ಹೂವುಗಳು & ಬೊಕ್ಕೆಗಳು ಕೇವಲ 24 ಘಂಟೆಗಳಲ್ಲಿ ನಿಷ್ಕ್ರಿಯವಾಗುತ್ತವೆ. ವರ್ಷಕ್ಕೆ ಏನಿಲ್ಲವೆಂದರೂ 300,000 ಕೆಜಿ ಯಷ್ಟು ಡ್ರೈ ಫ್ರೂಟ್ಸ್ ಗಳೂ ಮದುವೆ ನಡೆಯುವ ಸ್ಥಳದಲ್ಲಿಯೇ ಉಳಿದು ಹೋಗುತ್ತವೆ. ಇದರಿಂದ ವಾರ್ಷಿಕ 315 ಕೋಟಿ ಮೊತ್ತದ ಹಣ ಅನವಶ್ಯಕವಾಗಿ ವೆಚ್ಚವಾಗುತ್ತದೆ.
ನನ್ನ ವಿವಾಹ ಆರತಕ್ಷತೆ ಕಾರ್ಯಕ್ರಮಕ್ಕೆ ಹೂ ಬೊಕ್ಕೆಗಳು, ಡ್ರೈ ಫ್ರೂಟ್ಸ್ ಗಳನ್ನು ದಯವಿಟ್ಟು ತರಬೇಡಿ ಎಂದು ತಮ್ಮಲ್ಲಿ ವಿನಂತಿಸುತ್ತೇನೆ. ಆರತಕ್ಷತೆಗೆ ಬರುವ ಹಿರಿಯ ನಾಗರಿಕರು & ದಿವ್ಯಾಂಗ ವ್ಯಕ್ತಿಗಳಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ.
ಬೆಳಿಗ್ಗೆ 11 ಘಂಟೆಗೆ ವೃಕ್ಷ, ಗಾಯತ್ರಿ ವಿಹಾರ, ಪ್ಯಾಲೇಸ್ ಮೈದಾನ- ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದ್ದು, ನಿಮ್ಮ ಆಗಮನಕ್ಕಾಗಿ ಕಾಯುತ್ತಿರುತ್ತೇನೆ. ನಿಮ್ಮ ಪ್ರೀತಿಪೂರ್ವಕ ಆಶೀರ್ವಾದವೇ ನಮಗೆ ಶ್ರೀರಕ್ಷೆ ಎಂದು ಹೇಳಿದ್ದಾರೆ.