ಮಂಡ್ಯ: ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಖ್ಯಾತ ವಿಜ್ಞಾನಿ ಸುಬ್ಬಣ್ಣ ಅಯ್ಯಪ್ಪನ್ ಶವವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಖ್ಯಾತ ಕೃಷಿ ವಿಜ್ಞಾನಿ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಬ್ಬಣ್ಣ ಅಯ್ಯಪ್ಪನ್ ಶನಿವಾರ ಸಂಜೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಸಾಯಿ ಆಶ್ರಮದ ಬಳಿಯ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೂಲಗಳ ಪ್ರಕಾರ ಮೈಸೂರಿನ ವಿಶ್ವೇಶ್ವರಯ್ಯ ನಗರದ ಅಪಾರ್ಟ್ಮೆಂಟ್ನಲ್ಲಿ ಸುಬ್ಬಣ್ಣ ತಮ್ಮ ಪತ್ನಿಯೊಂದಿಗೆ ವಾಸಿಸುತ್ತಿದ್ದರು. ಅವರು ಮೇ 7 ರಿಂದ ಅವರು ನಾಪತ್ತೆಯಾಗಿದ್ದರು. ಈ ಸಂಬಂಧ ಕುಟುಂಬವು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ನಾಪತ್ತೆ ದೂರು ದಾಖಲಿಸಿತ್ತು.
ಆದರೆ ಶನಿವಾರ ಸಂಜೆ, ಆಶ್ರಮದ ಬಳಿಯ ಕಾವೇರಿ ನದಿಯಲ್ಲಿ ಸುಬಣ್ಣಅವರ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಅದು ವಿಜ್ಞಾನಿ ಎಂದು ಪತ್ತೆಯಾಯಿತು. ನದಿಯ ದಡದಲ್ಲಿ ನಿಲ್ಲಿಸಲಾಗಿದ್ದ ಸುಬ್ಬಣ್ಣ ಅವರ ಸ್ಕೂಟರ್ ಅನ್ನು ಸಹ ಅವರು ಪತ್ತೆ ಮಾಡಿದ್ದು ಪ್ರಸ್ತುತ ಅದನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ಆತ್ಮಹತ್ಯೆ ಶಂಕೆ
ಪ್ರಾಥಮಿಕ ತನಿಖೆಯಲ್ಲಿ, ಅವರು ಮೂರು ದಿನಗಳ ಹಿಂದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದಾಗ್ಯೂ, ಸಾವಿಗೆ ನಿಜವಾದ ಕಾರಣವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಶವವನ್ನು ಕೆಆರ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಸುಬ್ಬಣ್ಣ ಸಂಬಂಧಿ ಮತ್ತು ವಕೀಲ ಶ್ರೀನಿಧಿ ಅವರು ಸುಬ್ಬಣ್ಣ ನಿಯಮಿತವಾಗಿ ರಾಮಕೃಷ್ಣ ಆಶ್ರಮ ಮತ್ತು ಸಾಯಿ ಆಶ್ರಮಕ್ಕೆ ಧ್ಯಾನಕ್ಕಾಗಿ ಭೇಟಿ ನೀಡುತ್ತಿದ್ದರು ಎಂದು ಹೇಳಿದರು.
ಚಾಮರಾಜನಗರ ಜಿಲ್ಲೆಯ ಯಳಂದೂರಿನಲ್ಲಿ ಡಿಸೆಂಬರ್ 10, 1955 ರಂದು ಜನಿಸಿದ್ದ ಸುಬ್ಬಣ್ಣ 1975 ರಲ್ಲಿ ಮಂಗಳೂರಿನಲ್ಲಿ ಬಿಎಫ್ಎಸ್ಸಿ, ಮೀನುಗಾರಿಕೆ ವಿಜ್ಞಾನದಲ್ಲಿ ಪದವಿ ಮತ್ತು 1977 ರಲ್ಲಿ ಮೀನುಗಾರಿಕೆ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 1998 ರಲ್ಲಿ ಬೆಂಗಳೂರಿನಲ್ಲಿ ಯುಎಎಸ್ನಲ್ಲಿ ಪಿಎಚ್ಡಿ ಪಡೆದಿದ್ದರು.
ದೇಶಾದ್ಯಂತ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಸುಬ್ಬಣ್ಣ ನೀಲಿ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2022 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ಅವರು ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತೆ ಮಂಡಳಿಯ (ಎನ್ಎಬಿಎಲ್) ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.