ಕರಾವಳಿ ಕರ್ನಾಟಕದಲ್ಲಿ ಮಳೆ ಅವಾಂತರ 
ರಾಜ್ಯ

ಕರಾವಳಿ ಕರ್ನಾಟಕದಲ್ಲಿ ಮುಂದುವರಿದ ಮಳೆ ಅವಾಂತರ: ರೆಡ್ ಅಲರ್ಟ್ ಘೋಷಣೆ, NDRF ತಂಡಗಳ ನಿಯೋಜನೆ

ಅಧಿಕಾರಿಗಳ ಪ್ರಕಾರ, ಜಿಲ್ಲೆಯಾದ್ಯಂತ ಗುಡ್ಡಗಾಡು ಪ್ರದೇಶಗಳಲ್ಲಿ ಸಣ್ಣಪುಟ್ಟ ಭೂಕುಸಿತಗಳು ಸಂಭವಿಸಿವೆ.

ಮಂಗಳೂರು: ರಾಜ್ಯದ ಕರಾವಳಿ ಪ್ರದೇಶದಲ್ಲಿ ಸತತ ಮೂರನೇ ದಿನವಾದ ಸೋಮವಾರವೂ ಭಾರಿ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅಧಿಕಾರಿಗಳು ರೆಡ್ ಅಲರ್ಟ್ ಘೋಷಿಸಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ.

ಮುಂದಿನ 48 ಗಂಟೆಗಳಲ್ಲಿ ಕರಾವಳಿ ಪ್ರದೇಶದಾದ್ಯಂತ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಮುಂದಿನ ಐದು ದಿನಗಳವರೆಗೆ ರೆಡ್ ಅಲರ್ಟ್ ಜಾರಿಯಲ್ಲಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಮಂಗಳೂರು ನಗರದ ಹಲವಾರು ಭಾಗಗಳಲ್ಲಿ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ವರದಿಯಾಗಿದೆ. ಅಧಿಕಾರಿಗಳ ಪ್ರಕಾರ, ಜಿಲ್ಲೆಯಾದ್ಯಂತ ಗುಡ್ಡಗಾಡು ಪ್ರದೇಶಗಳಲ್ಲಿ ಸಣ್ಣಪುಟ್ಟ ಭೂಕುಸಿತಗಳು ಸಂಭವಿಸಿವೆ.

ಮಂಗಳೂರು ನಗರದ ಕೊಟ್ಟಾರ ಜಂಕ್ಷನ್, ಮಾಲೆಮಾರ್, ಮಹಾವೀರ ವೃತ್ತ ಜವಾವೃತಗೊಂಡಿದ್ದು, ಉರ್ವ, ಮಟಡಕಣಿ, ಕುದ್ರೋಳಿ ಮತ್ತು ಕೊಡಿಯಾಲ್‌ಬೈಲ್ (ಪಶ್ಚಿಮ) ಗಳಲ್ಲಿ ಸಣ್ಣ ಪ್ರಮಾಣದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ತೊಕ್ಕುಟ್ಟು, ಗೂಡಿನಬಳಿ, ಮರಕಡ, ಪಣಂಬೂರು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳೂ ಜಲಾವೃತಗೊಂಡಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಹಂಗಾಮಿ ಜಿಲ್ಲಾಧಿಕಾರಿ ಆನಂದ್ ಕೆ, ಸೋಮವಾರ ನಿರಂತರ ಮಳೆಯಿಂದಾಗಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾಡಳಿತದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಹಲವು ಪ್ರದೇಶಗಳಲ್ಲಿ 150 ಮಿಮೀ ಮಳೆಯಾಗಿದ್ದು, ಸುಳ್ಯದ ಬೆಳ್ಳಾರೆಯಲ್ಲಿ ಅತಿ ಹೆಚ್ಚು 200.5 ಮಿಮೀ ಮಳೆಯಾಗಿದೆ. ಬಂಟ್ವಾಳದ ಸಾರಪಾಡಿ ಮತ್ತು ಪುತ್ತೂರಿನ ಬೆಳಂದೂರಿನಲ್ಲಿ ತಲಾ 190 ಮಿ.ಮೀ. ಮಳೆಯಾಗಿದೆ.

ಪರಿಸ್ಥಿತಿ ಹದಗೆಡುತ್ತಿರುವುದರಿಂದ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಒಂದು ತಂಡವನ್ನು ಪುತ್ತೂರಿನಲ್ಲಿ ನಿಯೋಜಿಸಲಾಗಿದ್ದು, ಮಂಗಳೂರು ಮತ್ತು ಸುಬ್ರಹ್ಮಣ್ಯದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪಡೆಯ (ಎಸ್‌ಡಿಆರ್‌ಎಫ್) ಎರಡು ತಂಡಗಳನ್ನು ನಿಯೋಜಿಸಲಾಗಿದೆ.

ಅಧಿಕಾರಿಗಳಿಗೆ ಹೆಚ್ಚಿನ ಎಚ್ಚರಿಕೆ ವಹಿಸಲು ಸೂಚಿಸಲಾಗಿದ್ದು, ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಜೆಸಿಬಿಗಳು ಮತ್ತು ರಕ್ಷಣಾ ದೋಣಿಗಳಂತಹ ನಿರ್ಮಾಣ ಸಲಕರಣೆಗಳನ್ನು ಸಿದ್ಧವಾಗಿಡಲಾಗಿದೆ. ದುರ್ಬಲಗೊಂಡ ಕಟ್ಟಡಗಳಲ್ಲಿರುವ ಶಾಲೆಗಳು ಮತ್ತು ಅಂಗನವಾಡಿಗಳನ್ನು ಪುನಃ ತೆರೆಯುವ ಮೊದಲು ತೆರವುಗೊಳಿಸಲಾಗುತ್ತಿದೆ.

ಕುಮಟಾ ಬಳಿಯ ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಭೂಕುಸಿತಗಳು ವರದಿಯಾಗಿವೆ. ಬೆಳ್ತಂಗಡಿ ಸುತ್ತಮುತ್ತಲಿನ ನದಿಗಳಲ್ಲಿ ನೀರಿನ ಮಟ್ಟ ಏರುತ್ತಿದ್ದು, ತಗ್ಗು ಪ್ರದೇಶಗಳಿಗೆ ಪ್ರವಾಹದ ಅಪಾಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆದ್ದಾರಿ ನಿರ್ಮಾಣ ಕಾರ್ಯಗಳಿಂದಾಗಿ ವಸತಿ ಪ್ರದೇಶಗಳಲ್ಲಿ ನೀರು ನುಗ್ಗಿರುವ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಅಧಿಕಾರಿಗಳು ಕೋರಿದ್ದಾರೆ.

ಈಮಧ್ಯೆ, ಮಳೆಗೂ ಮುನ್ನ ಹೊರಟಿದ್ದ ಮೀನುಗಾರಿಕಾ ದೋಣಿಗಳು ಪ್ರತಿಕೂಲ ಪರಿಸ್ಥಿತಿಯಿಂದಾಗಿ ನವ ಮಂಗಳೂರು ಬಂದರಿಗೆ ಹಿಂತಿರುಗುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!