ಬೆಂಗಳೂರು: ನಗರದ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ಖಂಡಿಸಿ ಬಿಜೆಪಿ ನಾಯಕರು ಸೋಮವಾರ ಪ್ರತಿಭಟನೆ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಕೆಲ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟ ಬಿಜೆಪಿ ನಾಯಕರನ್ನ ಪೊಲೀಸರು ರೇಸ್ ಕೋರ್ಸ್ ರಸ್ತೆ ಬಳಿಯೇ ತಡೆದಿದ್ದಾರೆ.
ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಬಿಜೆಪಿ ನಾಯಕರು
ಈ ವೇಳೆ ಬ್ಯಾರಿಕೇಡ್ ಏರಿದ ಸಿಟಿ ರವಿ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಅನೇಕ ಬಿಜೆಪಿ ನಾಯಕರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸರ್ಕಾರದ ವಿರುದ್ಧ ಭಿತ್ತಪತ್ರ ಹಿಡಿದುಕೊಂಡು ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದ್ದಾರೆ.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಪರಪ್ಪನ ಅಗ್ರಹಾರದಲ್ಲಿ ವಿಕೃತ ಕಾಮಿ ಉಮೇಶ್ ರೆಡ್ಡಿಯಂತವರಿಗೆ, ಉಗ್ರ ಸಂಘಟನೆ ISISಗೆ ಉಗ್ರ ಮನಸ್ಥಿತಿಯ ಯುವಕರನ್ನು ನೇಮಕಮಾಡುತ್ತಿದ್ದ ಜುಹಾದ್ ಹಮೀದ್ ಶಕೀಲ್ ಮನ್ನಾನಿಗೆ ಸಕಲ ಸವಲತ್ತು ನೀಡಿ, ಐಷಾರಾಮಿ ವ್ಯವಸ್ಥೆ ಕಲ್ಪಿಸಿಕೊಟ್ಟಿರುವುದು ಅತ್ಯಂತ ನಾಚಿಕೆಗೇಡಿನ ಕ್ರಮವಾಗಿದೆ. ಕೂಡಲೇ ಇದಕ್ಕೆ ಕಾರಣರಾದ ಜೈಲು ಸಿಬ್ಬಂದಿ, ಅಧಿಕಾರಿಗಳನ್ನು ಬಂಧಿಸಿ ದೇಶ ದ್ರೋಹಿ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ಕೈಗೆತ್ತಿಕೊಳ್ಳಲಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೈಲಿನೊಳಗೆ ಇರುವ ಉಗ್ರರಿಗೆ ಅವಕಾಶ ನೀಡುತ್ತಿದ್ದಾರೆ. ಕರ್ನಾಟಕದ ಜೈಲುಗಳನ್ನು ಉಗ್ರರಿಗೆ ರೆಸಾರ್ಟ್ ಆಗಿ ಪರಿವರ್ತಿಸಲಾಗಿದೆ! ಆಗಾಗ್ಗೆ ವಿದೇಶಗಳಿಗೆ ಪ್ರಯಾಣಿಸುವ ಮತ್ತು ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ರಾಹುಲ್ ಗಾಂಧಿ, ಈಗ ಈ ಭಯೋತ್ಪಾದಕರಿಗೆ ಅವಕಾಶ ನೀಡುತ್ತಿದ್ದಾರೆಯೇ ಮತ್ತು ಅವರ ಜಾಲಗಳನ್ನು ಬಳಸಿಕೊಂಡು ದೇಶಾದ್ಯಂತ ಅಶಾಂತಿ ಸೃಷ್ಟಿಸಲು ಮತ್ತು ಕೃತಕ ಆಡಳಿತ ಬದಲಾವಣೆಗಾಗಿ ನಮ್ಮ ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಜೈಲುಗಳು ಭಯೋತ್ಪಾದಕರಿಗೆ ಸ್ವರ್ಗವಾಗಿವೆ. ಸಮಾಜ ಘಾತುಕ ಶಕ್ತಿಗಳಿಗೆ ಐಷಾರಾಮಿ ವ್ಯವಸ್ಥೆ ಒದಗಿಸುವ ಮೂಲಕ ಪಂಚತಾರಾ ಹೋಟೆಲ್ ಆಗಿ ಮಾಡಲಾಗಿದೆ ಎಂದು ಆರೋಪಿಸಿದರು. ಜೈಲಿನಲ್ಲಿ ನಟ ದರ್ಶನ್ ಸಿಗರೇಟ್ ಸೇದಿದ್ದಕ್ಕೆ ಅವರ ಬೇಲನ್ನು ಸುಪ್ರೀಂಕೋರ್ಟ್ಗೆ ಹೋಗಿ ರದ್ದು ಮಾಡಿದರು. ಹಾಗಂತ ನಟ ದರ್ಶನ್ ಸಿಗರೇಟ್ ಸೇದಿದ್ದು ಸರಿ ಎಂದು ಹೇಳುತ್ತಿಲ್ಲ ಅದು ತಪ್ಪು. ಅದೇ ರೀತಿ ಕ್ರಮ ಈಗ ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.ಜೈಲಿನಲ್ಲಿ ಗಾಂಜಾ, ಬಿರಿಯಾನಿ ಮೊಬೈಲ್ ಎಲ್ಲವೂ ಸಿಗುತ್ತಿದ. ಜೈಲಿಗೆ ಹೋದರೆ ರಾಜ್ಯಾತೀಥ್ಯ ಫ್ರೀ ಇದು ಕಾಂಗ್ರೆಸ್ನ ಬಿಟ್ಟಿ ಗ್ಯಾರಂಟಿ ಎಂದು ವ್ಯಂಗ್ಯವಾಡಿದರು.
ವಿಧಾನಪರಿತ್ನ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ಭಯೋತ್ಪಾದಕರಿಗೆ ಜೈಲಿನಲ್ಲಿ ಎಲ್ಲ ಸೌಲಭ್ಯ ನೀಡಲು ರಾಜ್ಯ ಸರ್ಕಾರ ಬಂದಂತಿದೆ ಎಂದು ಹರಿಹಾಯ್ದು, ಈ ಸರ್ಕಾರ ಯಾರ ಪರವಾಗಿದೆ ಎಂಬುದು ಗೊತ್ತಾಗಬೇಕು. ಜೈಲಿನಲ್ಲಿ ಬಿರಿಯಾನಿ ಪಾರ್ಟಿ ಇದೆ ಇದೇನಾ ಜೈಲು ವ್ಯವಸ್ಥೆ ಎಂದು ಹರಿಹಾಯ್ದರು.
ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಈಗ ರೆಸಾರ್ಟ್ಗೆ ಹೋಗುವ ಅಗತ್ಯವಿಲ್ಲ ಜೈಲಿನಲ್ಲೇ ಎಲ್ಲ ಸವಲತ್ತುಗಳು ಸಿಗುತ್ತಿವೆ. ಈ ಸರ್ಕಾರಕ್ಕೆ ನಾಚಿಕೆ ಆಗಬೇಕು. ಜೈಲು ರಾಜ್ಯಾತೀಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಬೇಕು ಈ ಪ್ರಕರಣವನ್ನು ಎನ್ಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಶಾಸಕ ಸಿ.ಎನ್. ಅಶ್ವನಾಥ್ ನಾರಾಯಣ್ ಮಾತನಾಡಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ"ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿಲ್ಲ. ಆಡಳಿತ ಹದಗೆಟ್ಟಿದೆ. ಸರ್ಕಾರ ಭಯೋತ್ಪಾದಕರನ್ನು ಪೋಷಿಸುತ್ತಿದೆ. ಜೈಲು ಭಯೋತ್ಪಾದಕರಿಗೆ ಸ್ವರ್ಗವಾಗಿದೆ. ಆದಾಗ್ಯೂ, ಕಾಂಗ್ರೆಸ್ ಸರ್ಕಾರ ಯಾವುದನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅವರು ಭಯೋತ್ಪಾದಕರಿಗೆ ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ಉಸ್ತುವಾರಿ ಎಸ್. ಹರೀಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಜೈಲುಗಳು ಸುರಕ್ಷಿತ ತಾಣಗಳಾಗಿ ಮಾರ್ಪಟ್ಟಿವೆ. ದೇಶಾದ್ಯಂತ ಭಯೋತ್ಪಾದಕರು ಬೆಂಗಳೂರು ಜೈಲಿಗೆ ವರ್ಗಾವಣೆ ಬಯಸುತ್ತಿದ್ದಾರೆ ಏಕೆಂದರೆ ಇದು ಸುರಕ್ಷಿತ ತಾಣವಾಗಿದೆ. ಗೃಹ ಸಚಿವ ಜಿ. ಪರಮೇಶ್ವರ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆಗಾರಿಕೆ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು