ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಶುಕ್ರವಾರ ನಿಧನರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರ ಗೌರವಾರ್ಥ ರಾಜ್ಯದ 114 ಸ್ಥಳದಲ್ಲಿ ತಲಾ 114 ಸಸಿ ನೆಟ್ಟು ಪೋಷಣೆ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಅವರು ಶನಿವಾರ ಹೇಳಿದ್ದಾರೆ.
114 ವರ್ಷ ಜೀವಿಸಿದ್ದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಗೌರವಾರ್ಥ ರಾಜ್ಯದ 114 ಸ್ಥಳಗಳಲ್ಲಿ 114 ಸಸಿ ನೆಟ್ಟು ಪೋಷಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಇಂದು ಮಧ್ಯಾಹ್ನ ಜ್ಞಾನಭಾರತಿ ಕಲಾಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶತಾಯುಷಿ ಸಾಲು ಮರದ ತಿಮ್ಮಕ್ಕ ಅವರ ಅಂತ್ಯಕ್ರಿಯೆ ನೆರವೇರಿತು.
ಈ ವೇಳೆ ಮಹಾನ್ ಪರಿಸರ ಪ್ರೇಮಿಗೆ ಅಂತಿಮ ನಮನ ಸಲ್ಲಿಸಿದ ನಂತರ ಮಾತನಾಡಿದ ಈಶ್ವರ ಖಂಡ್ರೆ ಅವರು, ಮರಗಳನ್ನೇ ಮಕ್ಕಳಂತೆ ಮಮಕಾರದಿಂದ ಬೆಳೆಸಿ ವಿಶ್ವಕ್ಕೇ ವೃಕ್ಷಗಳ ಮಹತ್ವ ಸಾರಿದ ಸಾಲುಮರದ ತಿಮ್ಮಕ್ಕ ಅವರ ಹೆಸರಲ್ಲಿ ಸಸಿನೆಡುವ ಮೂಲಕ ಅರಣ್ಯ ಇಲಾಖೆ ಗೌರವ ಸಲ್ಲಿಸಲಿದೆ ಎಂದರು.
ಅರಣ್ಯ ಇಲಾಖೆ ಸಾಲುಮರದ ತಿಮ್ಮಕ್ಕ ಅವರನ್ನು ಪರಿಸರ ರಾಯಭಾರಿಯಾಗಿ ಪುರಸ್ಕರಿಸಿತ್ತು. ಅಜ್ಜಿಯ ಪ್ರೇರಣೆಯಿಂದ ನೂರಾರು ಜನ ತಮ್ಮ ಕೈಲಾದಷ್ಟು ಸಸಿ ನೆಟ್ಟು ಪೋಷಿಸುತ್ತಿದ್ದಾರೆ. ಲಕ್ಷಾಂತರ ಪರಿಸರ ಪ್ರೇಮಿಗಳಿಗೆ ಪ್ರೇರಣೆಯಾಗಿದ್ದ ತಿಮ್ಮಕ್ಕ ಅವರ ನಿಧನದಿಂದ ರಾಜ್ಯ ನಿಷ್ಠಾವಂತ ಪರಿಸರ ಕಾಳಜಿಯ ಮಹಾಜೀವಿಯನ್ನು ಕಳೆದುಕೊಂಡಿದೆ ಎಂದು ಸಚಿವರು ದುಃಖ ವ್ಯಕ್ತಪಡಿಸಿದರು.
ಸಾಲುಮರದ ತಿಮ್ಮಕ್ಕ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಈಶ್ವರ ಖಂಡ್ರೆ ಅವರು ತಿಳಿಸಿದ್ದಾರೆ.