ಧಾರವಾಡ: ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ.
ಮೃತರನ್ನು ವಿಠ್ಠಲ ಶಿಂಧೆ(75), ಅವರ ಪುತ್ರ ನಾರಾಯಣ ಶಿಂಧೆ(38) ಮೊಮ್ಮಕ್ಕಳಾದ ಶಿವರಾಜ(12), ಶ್ರೀನಿಧಿ(10) ಎಂದು ಗುರುತಿಸಲಾಗಿದೆ.
ಈ ನಾಲ್ವರು ಇಂದು ಬೆಳಗ್ಗೆ ಚಿಕ್ಕಮಲ್ಲಿಗವಾಡ ಗ್ರಾಮದ ಹೊರಗೆ ಇರುವ ಹಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾವಿ ಬಳಿ ಅವರ ಚಪ್ಪಲಿಗಳು ಪತ್ತೆಯಾಗಿವೆ. ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದ್ದು, ಈ ಬಗ್ಗೆ ಧಾರವಾಡ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ನಿತ್ಯವೂ ಶಾಲೆಗೆ ಮಕ್ಕಳನ್ನು ಬಿಟ್ಟು ಬರೋ ಕೆಲಸ ಮಾಡುತ್ತಿದ್ದ ತಂದೆ ನಾರಾಯಣ ಅವರು ಇಂದು ಸಹ ಇಬ್ಬರೂ ಮಕ್ಕಳನ್ನು ತಯಾರು ಮಾಡಿ, ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾರೆ. ಹೀಗೆ ಹೋಗುವಾಗ ತಂದೆ 75 ವರ್ಷದ ತಂದೆ ವಿಠ್ಠಲ ಅವರನ್ನೂ ಕರೆದೊಯ್ದಿದ್ದಾರೆ. ಇತ್ತ ಎಂದಿನಂತೆ ಶಿಲ್ಪಾ ಧಾರವಾಡಕ್ಕೆ ಕೆಲಸಕ್ಕೆಂದು ಹೋಗಿದ್ದಾರೆ. ಆದರೆ ಮಧ್ಯಾಹ್ನದ ಹೊತ್ತಿಗೆ ಗ್ರಾಮದ ಹೊರಭಾಗದಲ್ಲಿರೋ ಸಣ್ಣ ಬಾವಿಯೊಂದರಲ್ಲಿ ಓರ್ವ ವ್ಯಕ್ತಿಯ ಶವ ತೇಲುತ್ತಿರೋ ಬಗ್ಗೆ ಸ್ಥಳೀಯರು ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆ ಶವವನ್ನು ಹೊರ ತೆಗೆಯುತ್ತಿದ್ದಂತೆಯೇ ಮತ್ತೊಂದು ಶವ ಪತ್ತೆಯಾಗಿದೆ. ಅದನ್ನೂ ತೆಗೆಯುತ್ತಲೇ ಶಾಲಾ ಸಮವಸ್ತ್ರದಲ್ಲಿರೋ ಎರಡು ಮಕ್ಕಳ ಶವಗಳು ಕೂಡ ತೇಲಿ ಬಂದಿವೆ. ಇದೇ ವೇಳೆ ಬಾವಿಯ ತಟದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಆಧಾರದ ಮೇಲೆ ಇದು ನಾರಾಯಣ ಶಿಂಧೆ ಕುಟುಂಬದ್ದು ಅಂತಾ ಪೊಲೀಸರು ಪತ್ತೆ ಮಾಡಿದ್ದಾರೆ.
ನಾರಾಯಣ ಅವರು ಹಲವು ಕಡೆಗಳಲ್ಲಿ ಸುಮಾರು 15 ಲಕ್ಷದಷ್ಟು ಸಾಲ ಮಾಡಿದ್ದರಂತೆ. ಆ ಸಾಲವನ್ನು ತೀರಿಸೋದರ ಬಗ್ಗೆ ಸಾಕಷ್ಟು ಆತಂಕವನ್ನೂ ಹೊರಹಾಕುತ್ತಿದ್ದರು ಎನ್ನಲಾಗಿದೆ.
ಈ ಸಂಬಂಧ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಮತ್ತೆ ಬೇರೆ ಯಾವುದಾದರೂ ಕಾರಣವಿರಬಹುದೇ ಅನ್ನೋದರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.