ಬೆಂಗಳೂರು: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿ, ಆತನ ಸಹೋದರನನ್ನೂ ಕೊಲೆಗೆ ಯತ್ನ ನಡೆಸಿರುವ ಘಟನೆ ಕನಕಪುರದಲ್ಲಿ ನಡೆದಿದೆ.
ಮೃತ ಯುವಕನನ್ನು ಸುನೀಲ್ (30) ಎಂದು ಗುರ್ತಿಸಲಾಗಿದೆ. ಈತನ ಸಹೋದರ ಟಿ.ಎಂ.ಕಿರಣ್ (28) ಅವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತುಂಗಣಿ ಗ್ರಾಮದ ಜಯಲಕ್ಷ್ಮೀ ಅವರು ದಾಂಪತ್ಯ ಬಿರುಕಿನಿಂದ ಪತಿ ಮುನಿರಾಜು ಅವರನ್ನು ತೊರೆದು ಯಡುವನಹಳ್ಳಿ ಗೇಟ್ ಬಳಿ ಮಕ್ಕಳೊಂದಿಗೆ ವಾಸವಿದ್ದರು. ಈ ಮಧ್ಯೆ ಮುನಿರಾಜು ಪಿತ್ರಾರ್ಜಿತ ಜಮೀನನ್ನು ಹೆಂಡತಿ, ಮಕ್ಕಳ ಗಮನಕ್ಕೆ ತರದೆ ಗೆಂಡೆಕೆರೆ ಪಾರ್ಥನಿಗೆ ಮಾರಿದ್ದರು.
ವಿಷಯ ತಿಳಿದ ಜಯಲಕ್ಷ್ಮೀ ತಮ್ಮ ಇಬ್ಬರು ಪುತ್ರರೊಂದಿಗೆ ಪಾರ್ಥ ಅವರ ಮನೆಬಳಿ ಬಂದು ಜಗಳ ಮಾಡಿದ್ದರು. ಈ ವೇಳೆ ಸ್ಥಳಿಯರು ಎರಡೂ ಕಡೆಯವರನ್ನು ಸಮಾಧಾನ ಮಾಡಿ ಕಳುಹಿಸಿದ್ದರು. ಆದರೆ, ತಡರಾತ್ರಿ ಜಯಲಕ್ಷ್ಮೀ ಪುತ್ರರಾದ ಸುನೀಲ್ ಹಾಗೂ ಕಿರಣ್ನನ್ನು ರಾಜಿ ನೆಪದಲ್ಲಿ ಗೆಂಡೆಗೆರೆ ಸಮೀಪದ ಜಲ್ಲಿ ಕ್ರಷರ್ ಬಳಿಗೆ ಕರೆಸಿದ ಪಾರ್ಥ, ಪುತ್ರ ಪ್ರೇಮ್ ಹಾಗೂ ಮತ್ತಿತರರು ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು, ಸುನೀಲ್ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ, ಬಳಿಕ ಗಂಭೀರ ಗಾಯಗೊಂಡ ಸುನೀಲ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ.
ಬಳಿಕ ಕೊಲೆಯನ್ನು ಅಪಘಾತ ಎಂದು ಬಿಂಬಿಸಲು ಆರೋಪಿ ಯತ್ನಿಸಿದ್ದಾರೆ. ಆದರೆ ಹಲ್ಲೆ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸುನೀಲ್ ಸಹೋದರ ಕಿರಣ್ ಹೇಳಿಕೆ ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುನಿರಾಜು ತಮ್ಮ ಪತ್ನಿ ಮತ್ತು ಮಕ್ಕಳ ಸಹಿ ಇಲ್ಲದೆ ಮಾರಾಟ ಮಾಡುವ ಹಕ್ಕು ಹೊಂದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಸದರಿ ಭೂಮಿಯ ಮಾಲೀಕತ್ವದ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ. ಆರೋಪಿಗಳ ವಿರುದ್ಧ ಕೊಲೆ, ಕೊಲೆ ಯತ್ನ ಮತ್ತು ಬಿಎನ್ಎಸ್ನ ಇತರ ವಿಭಾಗಗಳ ಜೊತೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.