ರಾಜ್ಯ

News headlines 25-10-2025 | ಬೆಂಗಳೂರು ರಸ್ತೆ ಗುಂಡಿಗೆ ಮತ್ತೊಂದು ಬಲಿ; ಲಾಲ್ ಬಾಗ್ ಭೂಮಿ ಬಳಕೆ ತಾತ್ಕಾಲಿಕ- ಡಿ.ಕೆ ಶಿವಕುಮಾರ್; ಶಬರಿಮಲೆ ಚಿನ್ನ ಕಳವು; ಬೆಂಗಳೂರು, ಬಳ್ಳಾರಿಯಲ್ಲಿ ಕೇರಳ ಪೊಲೀಸರಿಂದ ಶೋಧ

ಲಾಲ್ ಬಾಗ್ ಬೊಟಾನಿಕಲ್ ಗಾರ್ಡನ್ ಭೂಮಿ ಬಳಕೆ ತಾತ್ಕಾಲಿಕ- ಡಿಕೆ ಶಿವಕುಮಾರ್

ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ನ ಒಂದು ಭಾಗವನ್ನು ಸುರಂಗ ರಸ್ತೆ ಯೋಜನೆಗಾಗಿ ತೆಗೆದುಕೊಳ್ಳಲಾಗುವುದು ಎಂಬ ವಿರೋಧ ಪಕ್ಷದ ಬಿಜೆಪಿ ಮತ್ತು ಕಾರ್ಯಕರ್ತರ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ಭೂಮಿಯನ್ನು ತಾತ್ಕಾಲಿಕವಾಗಿ ಮಾತ್ರ ಬಳಸಲಾಗುವುದು ಯೋಜನೆ ಪೂರ್ಣಗೊಂಡ ನಂತರ ಲಾಲ್‌ಬಾಗ್ ಅಧಿಕಾರಿಗಳಿಗೆ ಹಿಂತಿರುಗಿಸಲಾಗುವುದು ಎಂದು ಹೇಳಿದರು. ಶನಿವಾರ ಹೇರೋಹಳ್ಳಿ ಗಾಂಧಿ ಪಾರ್ಕ್‌ನಲ್ಲಿ ನಡೆದ ವಾಕ್ ವಿತ್ ಸಿಟಿಜನ್ಸ್ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಅವರು, ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಮತ್ತು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಭ್ರಷ್ಟಾಚಾರ ಆರೋಪಗಳನ್ನು ತಳ್ಳಿಹಾಕಿದ್ದಾರೆ. "ನಾನು ಮುಕ್ತ ಚರ್ಚೆಗೆ ಕರೆ ನೀಡಿದ್ದೇನೆ. ನಾಗರಿಕರು ಸಾಲ ಮತ್ತು ಉತ್ತಮ ಸೌಲಭ್ಯಗಳನ್ನು ಪಡೆಯಲು ನಾವು ಆಸ್ತಿ ದಾಖಲೆಗಳನ್ನು ಸರಿಪಡಿಸುತ್ತಿದ್ದೇವೆ. ಇದು ನಮ್ಮ ಆರನೇ ಗ್ಯಾರೆಂಟಿ" ಎಂದು ಅವರು ಹೇಳಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಬೆಂಗಳೂರನ್ನು ಅಭಿವೃದ್ಧಿಪಡಿಸಲು ಕರ್ನಾಟಕದೊಂದಿಗೆ ಸಹಕರಿಸುತ್ತಿಲ್ಲ ಎಂದು ಇದೇ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.

ಅಡುಗೆ ಅನಿಲ ಸಿಲಿಂಡರ್ ಸ್ಫೋಟ: ಮಹಿಳೆ ಸಾವು; ಗ್ಯಾಸ್ ಗೀಸರ್ ಅನಿಲ ಸೋರಿಕೆಯಿಂದ ಸಹೋದರಿಯರ ಪ್ರಾಣಕ್ಕೆ ಕುತ್ತು!

ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆ.ಆರ್‌ ಪುರಂನ ತ್ರಿವೇಣಿ ನಗರದಲ್ಲಿ ವರದಿಯಾಗಿದೆ. ಸ್ಫೋಟದ ತೀವ್ರತೆಗೆ ಇಡೀ ಮನೆಯೇ ನೆಲಸಮ ಆಗಿದೆ. ಈ ವೇಳೆ ಮನೆಯಲ್ಲಿದ್ದ ಅಕ್ಕಯ್ಯಮಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಬಾಂಬ್ ಸ್ಕ್ವಾಡ್‌ ಹಾಗೂ ಡಾಗ್ ಸ್ಕ್ವಾಡ್ ಅಧಿಕಾರಿಗಳೂ ಪರಿಶೀಲನೆ ನಡೆಸುತ್ತಿದ್ದಾರೆ. ಮತ್ತೊಂದು ಘಟನೆಯಲ್ಲಿ ಗ್ಯಾಸ್ ಗೀಸರ್ ನಿಂದ ಎಲ್ ಪಿಜಿ ಸೋರಿಕೆಯಾಗಿ ಮೈಸೂರು ಜಿಲ್ಲೆಯಲ್ಲಿ ಇಬ್ಬರು ಸಹೋದರಿಯರು ಸಾವನ್ನಪ್ಪಿದ್ದಾರೆ. ಪಿರಿಯಾಪಟ್ಟಣದ ಜೋನಿಗೇರಿ ಬೀದಿಯಲ್ಲಿ ಅಲ್ತಾಫ್ ಪಾಷಾ ಮತ್ತು ಅವರ ಕುಟುಂದವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಗುರುವಾರ ರಾತ್ರಿ ಸುಮಾರು 7ರ ಸಮಯದಲ್ಲಿ ಸಹೋದರಿಯರು ಒಟ್ಟಿಗೆ ಸ್ನಾನಕ್ಕೆ ತೆರಳಿದ್ದರು.

ಶಬರಿಮಲೆ ಚಿನ್ನ ಕಳವು; ಬೆಂಗಳೂರು, ಬಳ್ಳಾರಿಯಲ್ಲಿ ಕೇರಳ ಪೊಲೀಸರಿಂದ ಶೋಧ

ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಚಿನ್ನ ಕಳವು ಪ್ರಕರಣದ ತನಿಖೆ ಚುರುಕುಗೊಳಿಸಿರುವ ಕೇರಳ ಪೊಲೀಸರ ವಿಶೇಷ ತನಿಖಾ ತಂಡ ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಪರಿಶೀಲನೆ ನಡೆಸಿದೆ. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಬೆಂಗಳೂರಿನ ಶ್ರೀರಾಂಪುರ ವ್ಯಾಪ್ತಿಯಲ್ಲಿರುವ ಆರೋಪಿ ಅರ್ಚಕ ಪೋಟಿ ಉನ್ನಿಕೃಷ್ಣನ್ ನಿವಾಸ ಹಾಗೂ ಬಳ್ಳಾರಿಯ ರೊದ್ದಂ ಜ್ಯುವೆಲ್ಲರ್ಸ್ ಮೇಲೆ ಕೇರಳ ಪೊಲೀಸರು ದಾಳಿ ನಡೆಸಿದ್ದು, ಪರಿಶೀಲಿಸಿದ್ದಾರೆ. ಶಬರಿಮಲೆ ದೇವಾಲಯದ ದ್ವಾರಪಾಲಕ ಮೂರ್ತಿಗಳಿಂದ 475 ಗ್ರಾಂ ಚಿನ್ನದ ಪ್ಲೇಟ್ ಕದ್ದ ಆರೋಪದಡಿ ಪೋಟಿ ಉನ್ನಿಕೃಷ್ಣನ್ ಅವರನ್ನು ಕೇರಳ ಪೊಲೀಸರು ವಶಕ್ಕೆ ಪಡೆದಿದ್ದರು. ಕದ್ದ ಚಿನ್ನವನ್ನು ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್ ಅವರಿಗೆ ಮಾರಾಟ ಮಾಡಿದ ಆರೋಪದಡಿ ದಾಳಿ ಮುಂದುವರೆಸಲಾಗಿದೆ. ಉದ್ಯಮಿ ಗೋವರ್ಧನ್ ಅವರ ಒಡೆತನದ ರೊದ್ದಂ ಆಭರಣ ಅಂಗಡಿಯಿಂದ ವಿಶೇಷ ತನಿಖಾ ತಂಡ ಹಲವಾರು ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದೆ. 476 ಗ್ರಾಂ ಚಿನ್ನ ಖರೀದಿಸಿದ್ದಾಗಿ ಗೋವರ್ಧನ್ ಒಪ್ಪಿಕೊಂಡಿದ್ದಾರೆ.

ಬೆಂಗಳೂರು ರಸ್ತೆ ಗುಂಡಿಗೆ ಮತ್ತೊಂದು ಬಲಿ

ರಸ್ತೆ ಗುಂಡಿ ತಪ್ಪಿಸಲು ಹೋಗಿ ಟೆಕ್ಕಿಯೊಬ್ಬರು ಲಾರಿ ಚಕ್ರಕ್ಕೆ ಸಿಲುಕಿ ಬ್ಯಾಂಕ್ ಉದ್ಯೋಗಿಯೊಬ್ಬರು ಸಾವನ್ನಪ್ಪಿದ ಘಟನೆ ಮಾದನಾಯಕನಹಳ್ಳಿ ಹುಸ್ಕೂರು ಎಪಿಎಂಸಿ ಬಳಿ ನಡೆದಿದೆ. ಮೃತ ಮಹಿಳೆಯನ್ನು ಪ್ರಿಯಾಂಕಾ ಕುಮಾರ್ ಪೂನಿಯಾ ಎಂದು ಗುರುತಿಸಲಾಗಿದೆ. ಯುವತಿ ಅಣ್ಣನ ಜೊತೆ ಬೈಕ್ನ್ಲ್ಲಿ ಎಪಿಎಂಸಿ ಹುಸ್ಕೂರು ರಸ್ತೆಯಿಂದ ಮಾದಾವರಕ್ಕೆ ತೆರಳುತ್ತಿದ್ದಾಗ ದಾಸನಪುರದ ಎಪಿಎಂಸಿ ಮಾರುಕಟ್ಟೆ ಕಡೆಗೆ ಹೋಗುತ್ತಿದ್ದ ಟ್ರಕ್ ಒಂದು ಗುಂಡಿಯನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾಗ ಬಲಕ್ಕೆ ತಿರುಗಿತು. ಟ್ರಕ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕ್‌ನ ಹ್ಯಾಂಡಲ್‌ಗೆ ತಗುಲಿದ ಪರಿಣಾಮ ಈ ಅಪಘಾತ ನಡೆದಿದೆ.

ಉತ್ತರಾಧಿಕಾರಿ ಹೇಳಿಕೆ: Yatindra ಹೇಳಿಕೆ ಸಿದ್ಧಾಂತಕ್ಕೆ ಸಂಬಂಧಿಸಿದ್ದು- ಸಿದ್ದರಾಮಯ್ಯ

ಬೆಳಗಾವಿಯಲ್ಲಿ ಇತ್ತೀಚೆಗೆ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಡಾ ಯತೀಂದ್ರ ಸಿದ್ದರಾಮಯ್ಯ ಸಿಎಂ ಸಿದ್ದರಾಮಯ್ಯನವರ ಉತ್ತರಾಧಿಕಾರಿ ಬಗ್ಗೆ ನೀಡಿದ್ದ ಹೇಳಿಕೆ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಈ ಹೇಳಿಕೆ ಬಗ್ಗೆ ಎಂಎಲ್ಸಿ ಡಾ.ಯತೀಂದ್ರ ಬಳಿಯೇ ಕೇಳಿದೆ. "ಅದು ಸೈದ್ಧಾಂತಿಕ ವಿಚಾರಕ್ಕೆ ಮಾತ್ರ ಸಂಬಂಧಿಸಿದ್ದಾಗಿದೆ. ಸಿಎಂ ಸ್ಥಾನದ ಬಗ್ಗೆ ಅಲ್ಲ" ಎಂದು ಯತೀಂದ್ರ ಹೇಳಿದ್ದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈಮಧ್ಯೆ, ಯತೀಂದ್ರ ಸಿದ್ದರಾಮಯ್ಯ ಅವರು ಶನಿವಾರ ತಮ್ಮ ತಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಐದು ವರ್ಷಗಳ ಪೂರ್ಣ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ಹೇಳಿದ್ದಾರೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಉನ್ನತ ಹುದ್ದೆಯನ್ನು ವಹಿಸಿಕೊಳ್ಳಬಹುದು ಎಂಬ "ನವೆಂಬರ್ ಕ್ರಾಂತಿ"ಯ ಊಹಾಪೋಹವನ್ನು "ಆಧಾರರಹಿತ" ಎಂದು ಯತೀಂದ್ರ ತಳ್ಳಿಹಾಕಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಂಡಿಯಾ ಬಣ ಅಧಿಕಾರಕ್ಕೆ ಬಂದರೆ ಪಂಚಾಯಿತಿ ಪ್ರತಿನಿಧಿಗಳಿಗೆ ಭತ್ಯೆ ಹೆಚ್ಚಳ, ಪಿಂಚಣಿ, ವಿಮೆ ಸೌಲಭ್ಯ: ತೇಜಸ್ವಿ ಯಾದವ್

Cabinet reshuffle: ಡಿಸೆಂಬರ್ ನಲ್ಲಿ ಸಚಿವ ಸಂಪುಟ ಪುನಾರಚನೆ; ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ರಾ?

ಸಚಿವ ಸಂಪುಟ ಪುನರಾಚನೆ: ಸಿದ್ದುಗೆ ಬೆಂಬಲ, ಸಿಎಂ ಆಗಿ ಮುಂದುವರೆಯುತ್ತಾರೆಂದರೆ ಸ್ಥಾನ ತ್ಯಾಗಕ್ಕೂ ಸಿದ್ಧ ಎಂದ ಸಚಿವರು

ಡಿಸೆಂಬರ್ 8 ರಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ

ಕ್ಷುಲಕ ಕಾರಣಕ್ಕೆ ದಂಪತಿ ನಡುವೆ ಜಗಳ, ತವರು ಮನೆ ಸೇರಿದ ಪತ್ನಿ, ಅವಳಿ ಹೆಣ್ಣು ಮಕ್ಕಳ 'ಕತ್ತು ಸೀಳಿ' ಕೊಂದ ಕಟುಕ ತಂದೆ!

SCROLL FOR NEXT