ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳ ದೋಷಾರೋಪ ನಿಗದಿ ನವೆಂಬರ್ 3ಕ್ಕೆ ಮುಂದೂಡಲ್ಪಟ್ಟಿದೆ.
ಇಂದು ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 6 ಮಂದಿ ಆರೋಪಿಗಳು ಜೈಲಿನಿಂದಲೇ ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ನಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ನಿಗದಿಯಂತೆ ಎಲ್ಲಾ ಆರೋಪಿಗಳ ದೋಷಾರೋಪ ಇಂದು ನಿಗದಿಯಾಗಬೇಕಾಗಿತ್ತು. ಕೋರ್ಟ್ ಜಡ್ಜ್ ಇಂದೇ ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸುವುದಾಗಿ ಹೇಳಿದ್ದರು.
ಆದರೆ, ನಟ ದರ್ಶನ್ ಪರ ವಕೀಲ ಸುನೀಲ್ ಕುಮಾರ್ ಸ್ಪಲ್ಪ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ಜೈಲಿಗೆ ಹೋಗಿ ಆರೋಪಿ ದರ್ಶನ್ ಅವರೊಂದಿಗೆ ಚರ್ಚೆ ಮಾಡಿ ಅವರು ಖುದ್ದಾಗಿ ಕೋರ್ಟ್ ಗೆ ಹಾಜರುಪಡಿಸಲು ಮತ್ತೊಂದು ದಿನಾಂಕ ನೀಡಿ ಎಂದು ಮನವಿ ಮಾಡಿಕೊಂಡರು. ಇದರಿಂದಾಗಿ ನವಂಬರ್ 3 ರಂದು ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸುವುದಾಗಿ ನ್ಯಾಯಾಧೀಶರು ಹೇಳಿದರು.
ನವಂಬರ್ 3 ರಂದು ಜೈಲಿನಿಂದ ಹೊರಗೆ ಜಾಮೀನಿನ ಮೇಲೆ ಇರುವ ಆರೋಪಿಗಳು ಕೂಡ ಕಡ್ಡಾಯವಾಗಿ ಖುದ್ದಾಗಿ ಕೋರ್ಟ್ ವಿಚಾರಣೆಗೆ ಹಾಜರಾಗಬೇಕು. ನವಂಬರ್ 3 ರಂದು ವಿಚಾರಣೆಗೆ ಹಾಜರಾಗದಿದ್ದರೇ, ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ.
ನವಂಬರ್ 3ರ ಸೋಮವಾರ ನಟ ದರ್ಶನ್ ಹಾಗೂ ಪವಿತ್ರಾಗೌಡ , ಉಳಿದ ಆರೋಪಿಗಳ ವಿರುದ್ಧ ಯಾವ್ಯಾವ ಸೆಕ್ಷನ್ ಗಳಡಿ ವಿಚಾರಣೆ ನಡೆಯಬೇಕೆಂದು ಕೋರ್ಟ್ ನಿರ್ಧರಿಸಿ, ಆರೋಪ ಹೊರಿಸಲಾಗುತ್ತದೆ. ನಟ ದರ್ಶನ್, ಪವಿತ್ರಾಗೌಡ ವಿರುದ್ಧ ಕೊಲೆ, ಹಲ್ಲೆ, ಕಿಡ್ನ್ಯಾಪ್, ಸಾಕ್ಷ್ಯನಾಶ, ಷಡ್ಯಂತ್ರ ಸೇರಿದಂತೆ ವಿವಿಧ ಆರೋಪಗಳನ್ನು ಹೊರಿಸುವ ಸಾಧ್ಯತೆ ಇದೆ. ಇವುಗಳ ಬಗ್ಗೆ ಮುಂದೆ ಕೋರ್ಟ್ ನಲ್ಲಿ ಪರ - ವಿರೋಧ ವಾದ-ಪ್ರತಿವಾದ ನಡೆಯಲಿದೆ.