ಬೆಂಗಳೂರು: ಮೆದುಳು ತಿನ್ನುವ ಅಮೀಬಾ ಕೇರಳ ಸರ್ಕಾರ ನಿದ್ದೆ ಕೆಡಿಸಿದ್ದು, ಸೋಂಕಿಗೆ ಈ ವರೆಗೂ 17ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಈ ನಡುವೆ ಸೋಂಕು ಕುರಿತು ರಾಜ್ಯದಲ್ಲೂ ಆತಂಕ ಶುರುವಾಗಿದ್ದು, ಸೋಂಕು ಕುರಿತು ಜಾಗೃತಿ ಹಾಗೂ ಸೋಂಕು ತಡೆಗಟ್ಟುವ ಕ್ರಮಗಳ ಅಗತ್ಯವನ್ನು ಆರೋಗ್ಯ ತಜ್ಞರು ಒತ್ತಿ ಹೇಳಿದ್ದಾರೆ.
ಸಕ್ರಾ ವರ್ಲ್ಡ್ ಆಸ್ಪತ್ರೆಯ ನರವಿಜ್ಞಾನ ಸಂಸ್ಥೆಯ ನಿರ್ದೇಶಕ ಮತ್ತು ಮುಖ್ಯಸ್ಥ ಡಾ. ಅರ್ಜುನ್ ಶ್ರೀವತ್ಸ, ಅವರು ಮಾತನಾಡಿ, ನೇಗ್ಲೇರಿಯಾ ಫೌಲೇರಿ ಅಮೀಬಾದಿಂದ ಉಂಟಾಗುವ ಅಮೀಬಿಕ್ ಎನ್ಸೆಫಾಲಿಟಿಸ್ ಕಲುಷಿತ ನೀರಿಗೆ ಒಡ್ಡಿಕೊಂಡ ಒಂದರಿಂದ ಒಂಬತ್ತು ದಿನಗಳ ನಂತರ ಬೆಳವಣಿಗೆಯಾಗುತ್ತದೆ. ಸೋಂಕು ಮೂಗಿನ ಕುಹರದ ಮೂಲಕ ಪ್ರವೇಶಿಸುತ್ತದೆ. ವೇಗವಾಗಿ ಮಿದುಳು ಪ್ರವೇಶಿಸಿ, ಮಾರಕವಾಗಿ ಪರಿಣಮಿಸಲಿದೆ ಎಂದು ಹೇಳಿದ್ದಾರೆ.
ಸೋಂಕಿಗೊಳಗಾದವರಲ್ಲಿ ಅತೀವ್ರ ತಲೆನೋವು, ಜ್ವರ, ವಾಕರಿಕೆ, ವಾಂತಿ, ಕುತ್ತಿಗೆ ಬಿಗಿತ, ಗೊಂದಲ, ಸಮತೋಲನ ನಷ್ಟ, ರೋಗಗ್ರಸ್ತವಾಗುವ ಸೋಂಕುಗಳು ಪತ್ತೆಯಾಗುತ್ತವೆ. ತೀವ್ರತರ ಪ್ರಕರಣಗಳಲ್ಲಿ ಜನರು ಕೋಮಾಗೂ ಜಾರಲಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಕಲುಷಿತ ಈಜುಕೊಳಗಳಲ್ಲಿ ಈಜುವುದನ್ನು ತಪ್ಪಿಸಿ. ಈಜುಕೊಳಕ್ಕೆ ಇಳಿಯುವವರು ಮೂಗಿನ ಕ್ಲಿಪ್ಗಳನ್ನು ಬಳಸುವುದರಿಂದ ಅಮೀಬಾ ಮೂಗಿನ ಮಾರ್ಗಗಳ ಮೂಲಕ ಪ್ರವೇಶಿಸುವುದನ್ನು ತಡೆಯಬಹುದು. ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು ಕೆರೆಗಳಿಗೆ ಇಳಿಯುವುದು, ಈಜುಕೊಳಗಳಿಗೆ ಇಳಿಯುವುದನ್ನು ನಿಯಂತ್ರಿಸಿ ಎಂದು ಹೇಳಿದ್ದಾರೆ.
ಟ್ರೈಲೈಫ್ ಆಸ್ಪತ್ರೆಯ ಸಲಹೆಗಾರ ನರವಿಜ್ಞಾನಿ ಡಾ. ಆಂಟೊ ಇಗ್ನಾಟ್ ಅವರು ಮಾತನಾಡಿ, ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಅಪರೂಪ ಹಾಗೂ ಮಾರಕ ಕಾಯಿಲೆಯಾಗಿದ್ದು, ಸೋಂಕಿನಿಂದ ರಕ್ಷಿಸಿಕೊಳ್ಳಲು ಬೆಚ್ಚಗಿನ ನೀರಿನ ಚಟುವಟಿಕೆಗಳನ್ನು ನಿರ್ಬಂಧಿಸಿ. ಈಜುಕೊಳಕ್ಕೆ ಇಳಿಯುವ ಮೊದಲು ಈಜುಕೊಳದ ನಿರ್ವಹಣೆ ಮತ್ತು ಕ್ಲೋರಿನೀಕರಣವನ್ನು ಖಚಿತಪಡಿಸಿಕೊಳ್ಳಿ ಎಂದು ತಿಳಿಸಿದ್ದಾರೆ.
ಸೋಂಕು ವರದಿಯಾಗಿರುವ ಪ್ರದೇಶಗಳಿಗೆ ಪ್ರಯಾಣಿಸಿದ್ದರೆ, ಒಂದು ವೇಳೆ ತಲೆನೋವು, ಜ್ವರ, ವಾಕರಿಕೆ, ವಾಂತಿ ಅಥವಾ ರೋಗಗ್ರಸ್ತವಾಗುವಿಕೆಗಳಂತಹ ಲಕ್ಷಣಗಳನ್ನು ಅನುಭವಿಸಿದರೆ, ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದ್ದಾರೆ.
ಕೇರಳದಲ್ಲ ಹಲವು ವರ್ಷಗಳಿಂದ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಪ್ರಕರಣಗಳು ವರದಿಯಾಗುತ್ತಿವೆ. ಆದರೆ, ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರಂಭದಲ್ಲಿ ಕಲುಷಿತಗೊಂಡ ಕೆರೆ ಹಾಗೂ ಈಜುಕೊಳಗಳಿಗೆ ಇಳಿಯುವುದು ಸೋಂಕು ತಗುಲುವುದಕ್ಕೆ ಮಾರ್ಗವಾಗಿದೆ ಎನ್ನಲಾಗಿತ್ತು. ಆದರೆ, ಇತ್ತೀಚಿನ ಪ್ರಕರಣವೊಂದರಲ್ಲಿ, ಈಜುಕೊಳ, ಕೆರೆಗೆ ಇಳಿಯದ ಮಗುವಿಗೆ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಸೋಂಕು ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ರಾಜ್ಯದ ಆರೋಗ್ಯ ಅಧಿಕಾರಿಗಳು ಮಾತನಾಡಿ, ರಾಜ್ಯದಲ್ಲಿ ಇಲ್ಲಿಯವರೆಗೆ ಯಾವುದೇ ಸೋಂಕು ತಗುಲಿರುವ ಪ್ರಕರಣಗಳು ವರದಿಯಾಗಿಲ್ಲ. ಆದರೂ, ಮೇಲ್ವಿಚಾರಣೆಯನ್ನು ಮುಂದುವರೆಸಲಾಗುತ್ತಿದೆ. ಅಗತ್ಯವಿದ್ದರೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.