ಬೆಂಗಳೂರು: ಸಾರಿಗೆ ನಿಗಮಗಳ ಆರ್ಥಿಕ ಸುಸ್ಥಿರತೆ ಖಚಿತಪಡಿಸಿಕೊಳ್ಳಲು ಮತ್ತು ದರ ಏರಿಕೆಯನ್ನು ರಾಜಕೀಯಗೊಳಿಸದಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ) ಮಾದರಿಯಲ್ಲಿ ರಾಜ್ಯದ ಸಾರಿಗೆ ನಿಗಮಗಳ ಬಸ್ ದರವನ್ನು ಪರಿಷ್ಕರಿಸಲು ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಯನ್ನು (ಪಿಟಿಎಫ್ಆರ್ಸಿ) ರಚಿಸಲು ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ.
ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚಗಳ ಹೊರತಾಗಿಯೂ., ಇಲ್ಲಿಯವರೆಗೂ ಪ್ರಯಾಣ ದರ ಪರಿಷ್ಕರಣೆ ರಾಜಕೀಯ ಪರಿಗಣನೆಗಳಿಂದಾಗಿ ವಿಳಂಬವಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಡೀಸೆಲ್ ವೆಚ್ಚ ದುಪ್ಪಟ್ಟು ಆಗಿದೆ.
2014 ರಲ್ಲಿ ದಿನಕ್ಕೆ ರೂ. 7 ಕೋಟಿ ವೆಚ್ಚವಾಗುತ್ತಿದದ್ದು, 2025 ರಲ್ಲಿ ರೂ. 13 ಕೋಟಿಗೆ ಏರಿತ್ತು. ಇದೇ ಅವಧಿಯಲ್ಲಿ ಸಿಬ್ಬಂದಿ ವೆಚ್ಚ ದಿನಕ್ಕೆ ರೂ. 6 ಕೋಟಿಗಳಿಂದ ರೂ. 12 ಕೋಟಿ ಗೆ ಹೆಚ್ಚಾಗಿದೆ. ದಶಕಗಳಿಗೊಮ್ಮೆ ಪ್ರಯಾಣಿಕರಿಗೆ ಹೊರೆಯಾಗದಂತೆ ದರವನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಧಿಸೂಚನೆಯ ಪ್ರಕಾರ, ಕರ್ನಾಟಕ ಮೋಟಾರು ವಾಹನ ನಿಯಮಗಳು 1989ರಡಿಯಲ್ಲಿ ರಚಿಸಿರುವ ಸಮಿತಿಗೆ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷರಾಗಿರುತ್ತಾರೆ. ಇಬ್ಬರು ಸದಸ್ಯರು ಇರಲಿದ್ದಾರೆ. ಸದಸ್ಯರು ಕಾನೂನು ಶಿಕ್ಷಣ ಅರ್ಹತೆಯುಳ್ಳ ನಿವೃತ್ತ ಮುಖ್ಯ ಕಾರ್ಯದರ್ಶಿ ಅಥವಾ ಕಾರ್ಯದರ್ಶಿ ಮತ್ತು ಕೈಗಾರಿಕಾ ತಜ್ಞ ಅಥವಾ ಹಣಕಾಸು ತಜ್ಞರಾಗಿರುತ್ತಾರೆ. ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರಲಿದ್ದಾರೆ.
ಈ ಸಮಿತಿಯು ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ಕಾಲಕಾಲಕ್ಕೆ ದರ ಪರಿಷ್ಕರಣೆಯನ್ನು ಸೂಚಿಸಲಿದೆ. ನಿಗಮಗಳ ಆರ್ಥಿಕ ಮತ್ತು ಕಾರ್ಯಾಚರಣೆಯ ದಕ್ಷಣೆಯನ್ನು ಸುಧಾರಿಸಲು ದರಗಳ ಮೇಲೆ ವಿವಿಧ ಸರ್ ಚಾರ್ಜ್ ಗಳು ಮತ್ತು ಶುಲ್ಕಗಳನ್ನು ವಿಧಿಸಲು ಸೂಚಿಸುವ ಅಧಿಕಾರ ಕೂಡಾ ಈ ಸಮಿತಿಗೆ ಇರಲಿದೆ.
ಸಮಿತಿಯು ರಸ್ತೆ ಸಾರಿಗೆ ನಿಗಮಗಳಿಗೆ ನೀಡಲಾದ ಶಿಫಾರಸುಗಳ ಪ್ರತಿಯನ್ನು ಉಭಯ ಸದನಗಳ ಮುಂದೆ ಮಂಡಿಸಲು ಸರ್ಕಾರಕ್ಕೆ ಪ್ರತಿ ವರ್ಷ ಏಪ್ರಿಲ್ 1ರ ನಂತರ ಸಲ್ಲಿಸಬೇಕು. ಡಿಸೆಂಬರ್ 31ರ ಒಳಗೆ ವಾರ್ಷಿಕ ವರದಿಯಾಗಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.