ಸಿದ್ದರಾಮಯ್ಯ online desk
ರಾಜ್ಯ

ನಮ್ಮ ಒತ್ತಾಯಕ್ಕೆ ಮಣಿದು ಕೇಂದ್ರ ಸರ್ಕಾರ GST ದರ ಕಡಿತಗೊಳಿಸಿದೆ, ಕಾಂಗ್ರೆಸ್ ಪ್ರತೀ ಭಾರತೀಯರ ಆಶಾ ಕಿರಣವಾಗಿದೆ: ಸಿದ್ದರಾಮಯ್ಯ

ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ನಿರ್ಭೀತ ಧ್ವನಿಯು ದೋಷಪೂರಿತ ಜಿಎಸ್‌ಟಿ (GST) ವ್ಯವಸ್ಥೆಯನ್ನು ಸತತವಾಗಿ ಬಯಲಿಗೆಳೆದಿದೆ. ಕಾಂಗ್ರೆಸ್ ಆಡಳಿತದ ರಾಜ್ಯಗಳು ಕೂಡ ದೋಷಪೂರಿತ ಜಿಎಸ್‌ಟಿ ವ್ಯವಸ್ಥೆಯನ್ನು ಸುಧಾರಿಸಲು ನಿರಂತರವಾಗಿ ಒತ್ತಾಯಿಸಿದ್ದವು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಮೋದಿ ಸರ್ಕಾರದ ತೆರಿಗೆ ನೀತಿಗಳು "ಜನ ವಿರೋಧಿ"ಯಾಗಿದೆ ಎಂದು ಬುಧವಾರ ಹೇಳಿದ್ದಾರೆ.

ಬಿಹಾರದ ಪಾಟ್ನಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಮಾತನಾಡಿದ ರಾಜ್ಯದ ಹಣಕಾಸು ಖಾತೆಯನ್ನೂ ಹೊಂದಿರುವ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಆಡಳಿತದ ರಾಜ್ಯಗಳ ಒತ್ತಾಯದ ಮೇರೆಗೆ ಕೇಂದ್ರವು ಜಿಎಸ್‌ಟಿ ದರಗಳನ್ನು ಕಡಿತಗೊಳಿಸಿದೆ ಎಂದು ಹೇಳಿದರು,

ಬಿಜೆಪಿಯ ಆಡಳಿತದಲ್ಲಿ ಸಾಮಾನ್ಯ ಭಾರತೀಯರು ನಲುಗಿ ಹೋಗಿದ್ದಾರೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ, ನಿರುದ್ಯೋಗ ನಮ್ಮ ಯುವಕರ ಬೆನ್ನೆಲುಬನ್ನು ಮುರಿದಿದೆ, ಅಸಮಾನತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಮೋದಿಯವರ ಸರ್ಕಾರದಿಂದ, ಭಾರತದಲ್ಲಿ ಬಿಲಿಯನೇರ್ಗಳು ಪ್ರಗತಿ ಹೊಂದುತ್ತಿದ್ದು, ಬಡವರು ಎರಡು ಹೊತ್ತಿನ ಊಟಕ್ಕಾಗಿ ಪರದಾಡುತ್ತಿರುವ ದೇಶವನ್ನಾಗಿ ಮಾಡಿದೆ. ಆದರೆ, ಈ ಕತ್ತಲಿನಲ್ಲಿ ಕಾಂಗ್ರೆಸ್ ಆಶಾಕಿರಣವಾಗಿದೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ನಿರ್ಭೀತ ಧ್ವನಿಯು ದೋಷಪೂರಿತ ಜಿಎಸ್‌ಟಿ (GST) ವ್ಯವಸ್ಥೆಯನ್ನು ಸತತವಾಗಿ ಬಯಲಿಗೆಳೆದಿದೆ. ಕಾಂಗ್ರೆಸ್ ಆಡಳಿತದ ರಾಜ್ಯಗಳು ಕೂಡ ದೋಷಪೂರಿತ ಜಿಎಸ್‌ಟಿ ವ್ಯವಸ್ಥೆಯನ್ನು ಸುಧಾರಿಸಲು ನಿರಂತರವಾಗಿ ಒತ್ತಾಯಿಸಿದ್ದವು. ಅಂತಹ ತಿದ್ದುಪಡಿಯಿಂದ ಸುಮಾರು ಶೇ.70ರಷ್ಟು ಆದಾಯ ನಷ್ಟವು ತಮ್ಮ ಹೆಗಲ ಮೇಲೆ ಬೀಳುತ್ತದೆ ಎಂಬುದು ತಿಳಿದಿದ್ದರೂ, ನಾವು ಸ್ಥಿರವಾಗಿ ನಿಂತೆವು ಎಂದು ತಿಳಿಸಿದರು.

ನಮ್ಮ ಜನರನ್ನು ಅನ್ಯಾಯದ ವ್ಯವಸ್ಥೆಯಿಂದ ರಕ್ಷಿಸುವ ಉದ್ದೇಶದಿಂದ ನಾವೆಲ್ಲಾ ಒಗ್ಗಟ್ಟಾಗಿ ನಿಂತೆವು. ಆದಾಗ್ಯೂ ಮೋದಿಯವರು, ಎಂಟು ವರ್ಷಗಳ ಕಾಲ ಸಾಮಾನ್ಯ ಭಾರತೀಯರ ಪ್ರತಿಯೊಂದು ಹನಿ ಬೆವರು ಮತ್ತು ಹಣವನ್ನು ಹಿಂಡುತ್ತಲೇ ಇದ್ದರು. ಅಂತಿಮವಾಗಿ, ಅವರು ಜಿಎಸ್‌ಟಿಯನ್ನು ಸುಧಾರಿಸಲೇಬೇಕಾಯಿತು. ಆದರೆ, ಆಗಲೂ ಅವರು ಸೆಸ್‌ಗಳ ಮೂಲಕ ಕೇಂದ್ರ ಸರ್ಕಾರದ ಬೊಕ್ಕಸವನ್ನು ತುಂಬಲು ಒಂದು ಮಾರ್ಗವನ್ನು ಕಂಡುಕೊಂಡರು.

ಪ್ರಧಾನಿ ಮೋದಿಯವರು ವೈಫಲ್ಯತೆಯನ್ನು ವಿಜಯವಾಗಿ ಮೆರೆಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅವರ ಸರ್ಕಾರ ಎಡವಿದಾಗಲೆಲ್ಲ, ಅದನ್ನು ಒಂದು ಸಾಧನೆಯಂತೆ ಬಿಂಬಿಸುತ್ತಾರೆ. ಅವರು ಕಾಂಗ್ರೆಸ್ ಸರ್ಕಾರಗಳ ಕಠಿಣ ಪರಿಶ್ರಮ ಮತ್ತು ನಮ್ಮ ರಾಜ್ಯಗಳ ಅವಿರತ ಪ್ರಯತ್ನಗಳಿಗೆ ನಿರ್ಲಜ್ಜವಾಗಿ ತಾವೇ ಶ್ರೇಯ ಪಡೆಯುತ್ತಾರೆ. ಆದರೆ ಅವರ ದಾಖಲೆಯೇ ನಿರೂಪಿಸುವಂತೆ, ಅವರ ಪೊಳ್ಳು ಭರವಸೆಗಳು ಹಾಗೂ ಖಾಲಿ ಘೋಷಣೆಗಳು ಬಯಲಾಗಿವೆ.

ಪ್ರತಿಯೊಬ್ಬ ಭಾರತೀಯನಿಗೂ ನ್ಯಾಯಯುತ ಪ್ರಾತಿನಿಧ್ಯವನ್ನು ಖಚಿತಪಡಿಸಲು ಕೇಂದ್ರ ಸರ್ಕಾರವು ಜಾತಿಗಣತಿಯನ್ನು ಕೈಗೊಳ್ಳಬೇಕೆಂಬುದು ಕಾಂಗ್ರೆಸ್‌‌ನ ನಿರಂತರ ಬೇಡಿಕೆಯಾಗಿತ್ತು. ಕರ್ನಾಟಕದಲ್ಲಿ ನಾವು ಮೊದಲು ಜಾರಿಗೆ ತಂದ 'ಗ್ಯಾರಂಟಿ' ಯೋಜನೆಗಳನ್ನು ಇಂದು ಬಿಜೆಪಿ ಆಡಳಿತದ ರಾಜ್ಯಗಳು ಕೂಡ ನಿರ್ಲಜ್ಜವಾಗಿ ನಕಲು ಮಾಡುತ್ತಿರುವುದನ್ನು ನಾವು ಮರೆಯಬಾರದು. ಹಿಂದೆ ನಮ್ಮನ್ನು ಅಪಹಾಸ್ಯ ಮಾಡಿದವರು, ಇಂದು ನಮ್ಮ ಅನುಕರಿಸುತ್ತಿದ್ದಾರೆ. ಜನರು ನಮ್ಮ ಆಡಳಿತದ ಮಾದರಿಯನ್ನು ನಂಬುತ್ತಾರೆ ಎಂಬುದು ಅವರಿಗೆ ತಿಳಿದಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮತ ಎಣಿಕೆ ನಿಯಮ ಪರಿಷ್ಕರಿಸಿದ ಚುನಾವಣಾ ಆಯೋಗ; ಬಿಹಾರ ಚುನಾವಣೆಯಿಂದಲೇ ಜಾರಿ

ಶೀಘ್ರದಲ್ಲೇ ಕರ್ನಾಟಕ ಪೊಲೀಸ್ ಟೋಪಿಗಳು ಬದಲಾಗುತ್ತೆ: ಡಿಜಿ-ಐಜಿಪಿ ಸಲೀಮ್

Trump-Shehbaz Sharif Meeting: ಪಾಕ್ ಪ್ರಧಾನಿ ಜೊತೆಗೆ ಏನಿದು ಡೊನಾಲ್ಡ್ ಟ್ರಂಪ್ 'ರಹಸ್ಯ ಮಾತುಕತೆ'!

GST reforms: ಗ್ರಾಹಕರಿಗೆ ಜಿಎಸ್‌ಟಿ ಪ್ರಯೋಜನಗಳ ವರ್ಗಾವಣೆ; ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ಹೇಳಿದ್ದೇನು?

ಮೈಸೂರಿನಲ್ಲಿ SL ಭೈರಪ್ಪ ಸ್ಮಾರಕ ನಿರ್ಮಾಣ: ಅಂತಿಮ ದರ್ಶನ ಬಳಿಕ CM ಸಿದ್ದರಾಮಯ್ಯ ಘೋಷಣೆ; Video

SCROLL FOR NEXT