ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಕ್ಷಣದ ಮಳೆ ಪರಿಹಾರ ಸಿಗುವ ಸಾಧ್ಯತೆ ಕಡಿಮೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ನಗರದಲ್ಲಿ ಗರಿಷ್ಠ ತಾಪಮಾನ ಸುಮಾರು 35 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಕನಿಷ್ಠ ತಾಪಮಾನವೂ 24 ಡಿಗ್ರಿ ಮಟ್ಟದಲ್ಲೇ ಉಳಿದಿದೆ. ಈ ಹವಾಮಾನ ಇನ್ನೂ ಕೆಲವು ದಿನಗಳವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಬೆಳಗಿನ ವೇಳೆಯಲ್ಲಿ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದರೂ, ಮಳೆಯಾಗಿ ಪರಿವರ್ತನೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ ಭೂಭಾಗದ ಮೇಲೆ ಸುಮಾರು 3 ಕಿಲೋಮೀಟರ್ ಎತ್ತರದಲ್ಲಿ ನಿರ್ಮಾಣವಾಗಿರುವ ಆ್ಯಂಟಿ-ಸೈಕ್ಲೋನಿಕ್ ವ್ಯವಸ್ಥೆ. ಈ ವ್ಯವಸ್ಥೆ ಮೋಡಗಳ ವಿಕಸನವನ್ನು ತಡೆಯುವುದರಿಂದ ಮಳೆಯಾಗಲು ಅಗತ್ಯವಾದ ವಾತಾವರಣ ಉಂಟಾಗುತ್ತಿಲ್ಲ. ಪರಿಣಾಮವಾಗಿ, ಮಳೆ ತರಬಲ್ಲ ಮೋಡಗಳು ರೂಪುಗೊಳ್ಳದೇ ತಾಪಮಾನ ಹೆಚ್ಚಾಗುತ್ತಿದೆ ಎಂದು ತಿಳಿಸಿದೆ.
ಇದೇ ವೇಳೆ ದಕ್ಷಿಣ-ಪೂರ್ವ ದಿಕ್ಕಿನಿಂದ ಬೀಸುತ್ತಿರುವ ಗಾಳಿಗಳು ಬಿಸಿಯನ್ನು ಹೆಚ್ಚಿಸುವುದರ ಜೊತೆಗೆ ಮಧ್ಯಮ ಮಟ್ಟದ ಆರ್ದ್ರತೆಯನ್ನು ತರಿಸುತ್ತಿವೆ. ಇದರಿಂದ ಹಗಲು ವೇಳೆ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದ್ದು, ರಾತ್ರಿ ಸಮಯದಲ್ಲೂ ತಂಪಿನ ಅನುಭವ ಕಡಿಮೆಯಾಗಿದೆ. ಈ ಕಾರಣದಿಂದ ನಗರ ನಿವಾಸಿಗಳಿಗೆ ಉಷ್ಣತೆ ಕಾಟ ಹೆಚ್ಚಾಗಿದೆ.
ರಾಜ್ಯದ ಇತರ ಭಾಗಗಳಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಕಂಡುಬರುತ್ತಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಕಲಬುರಗಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ತಲುಪಿದೆ.
ಆದಾಗ್ಯೂ, ಹವಾಮಾನ ಇಲಾಖೆ ಈ ತಾಪಮಾನ ಸಹಜವಾಗಿದ್ದು, ಅಸಾಮಾನ್ಯ ಹವಾಮಾನ ಬದಲಾವಣೆಯ ಸೂಚನೆ ಅಲ್ಲ ಎಂದು ಹೇಳಿದೆ.
ಇನ್ನು ಕರಾವಳಿ ಕರ್ನಾಟಕದಲ್ಲಿ ತಾಪಮಾನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಎನ್ನಲಾಗುತ್ತಿದ್ದು. ಆರ್ದ್ರತೆ (ಹ್ಯೂಮಿಡಿಟಿ) ಕಾರಣದಿಂದ ತಾಪಮಾನ ಇರಿಕೆಯಾಗಲಿದೆ. ಆರ್ದ್ರತೆಯು ಹಗಲಿನ ವೇಳೆ ತೇವಾಂಶ 50 ಶೇಕಡಾ ಮೀರಬಹುದಾದರೆ, ಸಂಜೆ ವೇಳೆಗೆ ಅದು 70–80 ಶೇಕಡಾ ಮಟ್ಟಕ್ಕೆ ಏರಲಿದೆ. ಇದರಿಂದ ಉಷ್ಣತೆ ಹೆಚ್ಚು ಅನುಭವವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶಗಳಿಗೆ ಮುಂದಿನ ಮೂರು ದಿನಗಳ ಕಾಲ ಎಚ್ಚರಿಕೆ ನೀಡಲಾಗಿದೆ. ವಿಶೇಷವಾಗಿ ಮೀನುಗಾರರು ಹಾಗೂ ಹೊರಾಂಗಣ ಕೆಲಸ ಮಾಡುವವರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಲಾಗಿದೆ.
ರಾಜ್ಯದ ಬಹುತೇಕ ಭಾಗಗಳಲ್ಲಿ ಹೆಚ್ಚಿನ ತಾಪಮಾನ ವಾತಾವರಣ ಮುಂದುವರಿಯಲಿದ್ದು, ಮಳೆಯ ಲಕ್ಷಣಗಳು ಕಡಿಮೆಯೇ ಇವೆ. ಆದರೆ, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮಾಹಿತಿ ನೀಡಿದೆ.