ಮೈಸೂರು: ಮೈಸೂರು ಪ್ರವಾಸಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಮತ್ತೊಬ್ಬ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿರುವ ಘಟನೆ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ ನಡೆದಿದೆ.
ಚಾರ್ವಿ(15), ರಮ್ಯ(16 ) ಮೃತ ದುದೈವಿಗಳು. ನೀರಿನಲ್ಲಿ ಮುಳುಗಿ ಸುಚಿತ್ರ ಅವರ ಸ್ಥಿತಿ ಗಂಭೀರವಾಗಿದೆ. ಸುಚಿತ್ರ ಅವರನ್ನು ಸ್ಥಳೀಯರು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯ ಆಕ್ಸಿಲಿಯಮ್ ನವಜೀವನ ಎಂಬ ಎನ್ಜಿಒದ 71 ವಿದ್ಯಾರ್ಥಿಗಳು ತಂಡವು ತಲಕಾಡು ಪ್ರವಾಸಕ್ಕೆ ಬಂದಿದ್ದರು.
ಪ್ರವಾಸದ ವೇಳೆ ಬಿಸಿಲಿನ ಬೇಗೆ ತಣಿಸಿಕೊಳ್ಳಲು ವಿದ್ಯಾರ್ಥಿಗಳು ನದಿಯಲ್ಲಿ ಈಜಾಡುತ್ತಿದ್ದರು. ಈಜಾಡುತ್ತಿದ್ದ ವೇಳೆ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿದ್ದಾರೆ.
ಈ ವೇಳೆ ಸ್ಥಳೀಯರ ಸಹಾಯದೊಂದಿಗೆ ಮೂವರನ್ನು ನೀರಿನಿಂದ ಹೊರ ತಂದು ತಲಕಾಡು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಆದರೆ, ಅಷ್ಟರಲ್ಲಾಗಲೇ ರಮ್ಯಾ ಹಾಗೂ ಚಾರ್ವಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮತ್ತೋರ್ವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಜೆಎಸ್ಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ