ಬೆಂಗಳೂರು: ಶೃಂಗೇರಿ ಶಾಸಕ ಟಿಡಿ ರಾಜೇಗೌಡಗೆ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆಗೆ ಹೈಕೋರ್ಟ್ ಸೂಚನೆ ನೀಡಿದ್ದು, ಮೇ 2ರಂದು ಬೆಳಿಗ್ಗೆ 9 ಗಂಟೆಗೆ ಅಂಚೆ ಮತ ಮರು ಎಣಿಕೆ ನಡೆಯಲಿದೆ.
ಚಿಕ್ಕಮಗಳೂರಿನ ಐಡಿಎಸ್ಜಿ ಕಾಲೇಜಿನಲ್ಲಿ ಮರು ಮತ ಎಣಿಕೆ ನಡೆಯಲಿದೆ. ಹೈಕೋರ್ಟ್ನ ತೀರ್ಪಿನಿಂದ ದೊಡ್ಡ ಶಾಸಕ ರಾಜೇಗೌಡರಿಗೆ ಶಾಕ್ ಆಗಿದೆ. ಕಳೆದ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಅಂಚೆ ಮತಗಳ ಬಗ್ಗೆ ಉಂಟಾದ ವಿವಾದ ಇದೀಗ ಮರು ಎಣಿಕೆಯ ಹಂತಕ್ಕೆ ಬಂದಿದೆ.
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಕುರಿತಾಗಿ ಮಾಜಿ ಶಾಸಕ ಡಿ.ಎನ್. ಜೀವರಾಜ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಟಿ.ಡಿ. ರಾಜೇಗೌಡ ಅವರ ಆಯ್ಕೆ ಅಸಿಂಧು ಎಂದು ಪ್ರಶ್ನಿಸಿ, ವಿಶೇಷವಾಗಿ ಅಂಚೆ ಮತಗಳ ಎಣಿಕೆಯಲ್ಲಿ ಅಸಂಗತತೆ ಇದೆ ಎಂದು ಅವರು ಆರೋಪಿಸಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್, ಅಂಚೆ ಮತಗಳ ಮರು ಎಣಿಕೆ ನಡೆಸುವಂತೆ ಆದೇಶ ನೀಡಿದೆ.
ಈ ಮರು ಎಣಿಕೆ ಮೇ 2 ರಂದು ನಡೆಯಲಿದೆ. ಚಿಕ್ಕಮಗಳೂರು ನಗರದಲ್ಲಿರುವ IDSG ಕಾಲೇಜಿನಲ್ಲಿ ಬೆಳಗ್ಗೆ 9 ಗಂಟೆಯಿಂದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ಇದಕ್ಕಾಗಿ ಚುನಾವಣಾ ಆಯೋಗ ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದೆ.
ಹೈಕೋರ್ಟ್ ಆದೇಶದ ಮೇರೆಗೆ ಮರು ಎಣಿಕೆ ನಡೆಯುತ್ತಿರುವುದರಿಂದ, ಈ ಪ್ರಕ್ರಿಯೆ ರಾಜ್ಯದಷ್ಟೇ ಅಲ್ಲ, ರಾಜ್ಯದ ಹೊರಗೂ ಗಮನ ಸೆಳೆದಿದೆ. ಹೀಗಾಗಿ ಶಾಸಕ ಟಿ.ಡಿ. ರಾಜೇಗೌಡಗೆ ಆತಂಕ ಹೆಚ್ಚಾಗಿದೆ.
ಹೈಕೋರ್ಟ್ ಈಗಾಗಲೇ ಏಪ್ರಿಲ್ 6 ರಂದು ಅಂಚೆ ಮತಗಳ ಮರು ಎಣಿಕೆ ಮಾಡಲು ಆದೇಶ ನೀಡಿತ್ತು. ಆದರೆ ಅದೇ ತೀರ್ಪಿಗೆ 2 ವಾರಗಳ ಮಧ್ಯಂತರ ತಡೆ ನೀಡಿತ್ತು. ಆ ಅವಧಿಯಲ್ಲಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿಕೊಳ್ಳಲು ಅವಕಾಶ ನೀಡಲಾಗಿತ್ತು.
ಆದರೆ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸದ ಕಾರಣ, ಈಗ ಹೈಕೋರ್ಟ್ನ ಆದೇಶ ಜಾರಿಗೊಳಿಸಲಾಗುತ್ತಿದೆ. ಇದರಿಂದ ಅಂಚೆ ಮತಗಳ ಮರು ಎಣಿಕೆ ನಡೆಸುವುದು ಕಡ್ಡಾಯವಾಗಿದೆ.