ಬೆಂಗಳೂರು: ಸ್ವಾತಂತ್ರ್ಯೋತ್ಸವ ಅಂಗವಾಗಿ ಬೆಂಗಳೂರಿನ ಐತಿಹಾಸಿಕ ಲಾಲ್ಬಾಗ್ನಲ್ಲಿ ಆಗಸ್ಟ್ 6ರಿಂದ 17ರವರೆಗೆ ನಡೆಯಲಿರುವ 220ನೇ ಫಲಪುಷ್ಪ ಪ್ರದರ್ಶನ ಈ ಬಾರಿ ಗಂಗರ ಸಾಮ್ರಾಜ್ಯದ ವೈಭವವನ್ನು ಅನಾವರಣಗೊಳಿಸಲಿದೆ.
ಸುಮಾರು 1,200 ವರ್ಷಗಳ ಇತಿಹಾಸ ಹೊಂದಿರುವ ಬೇಗೂರಿನ ಪಂಚಲಿಂಗೇಶ್ವರ ದೇವಾಲಯ ಈ ವರ್ಷದ ಪ್ರದರ್ಶನದ ಕೇಂದ್ರಬಿಂದುವಾಗಿದ್ದು, ಅದನ್ನು ಸಂಪೂರ್ಣವಾಗಿ ಹೂಗಳಿಂದ ನಿರ್ಮಿಸಲಾಗುತ್ತಿದೆ.
ಮಂಗಳವಾರ ಲಾಲ್ಬಾಗ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಆರ್. ಗಿರೀಶ್ ಈ ಕುರಿತು ಮಾಹಿತಿ ನೀಡಿದರು. ಆಗಸ್ಟ್ 6ರಂದು ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆಂದು ಹೇಳಿದರು.
ಗಂಗ ಸಾಮ್ರಾಜ್ಯದ ಇತಿಹಾಸ, ಕಲೆ, ಸಂಸ್ಕೃತಿ ಮತ್ತು ಶೌರ್ಯವನ್ನು ಪ್ರತಿಬಿಂಬಿಸುವ ಹಲವು ಕಲಾಕೃತಿಗಳು ಈ ಬಾರಿ ಹೂಗಳ ಮೂಲಕ ರೂಪುಗೊಳ್ಳಲಿವೆ. ಗಂಗ ಅರಸರ ಬಲಿಷ್ಠ ಗಜಸೇನೆ, ಯುದ್ಧದ ದೃಶ್ಯಗಳು, ಶ್ರವಣ ಬೆಳಗೊಳದ ಬಾಹುಬಲಿ ಪ್ರತಿಮೆ, ತಲಕಾಡಿನ ದೇವಾಲಯಗಳ ಪ್ರತಿರೂಪಗಳು ಸೇರಿದಂತೆ ಅನೇಕ ಆಕರ್ಷಕ ಕಲಾಕೃತಿಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಲಿವೆ.
ಈ ವರ್ಷದ ಪ್ರಮುಖ ಆಕರ್ಷಣೆಯಾಗಿರುವ ಬೇಗೂರು ಪಂಚಲಿಂಗೇಶ್ವರ ದೇವಾಲಯದ ಪ್ರತಿರೂಪ ಸುಮಾರು 50 ಅಡಿ ಎತ್ತರ ಮತ್ತು 24 ಅಡಿ ಅಗಲ ಹೊಂದಿರಲಿದೆ. ಇದನ್ನು ನಿರ್ಮಿಸಲು ಒಟ್ಟು 6 ಲಕ್ಷ ಹೂಗಳನ್ನು ಬಳಸಲಾಗುತ್ತಿದೆ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆಯ ಉದ್ಯಾನ, ತೋಟ ಮತ್ತು ಪುಷ್ಪಾಲಂಕಾರ ವಿಭಾಗದ ಹೆಚ್ಚುವರಿ ನಿರ್ದೇಶಕ ಎಂ. ಜಗದೀಶ್ ಅವರು ಮಾತನಾಡಿ, ಮೊದಲ ಆರು ದಿನಗಳಿಗೆ ಬಿಳಿ, ಹಳದಿ, ಗುಲಾಬಿ ಮತ್ತು ರಸ್ಟ್ ಬಣ್ಣದ 2.15 ಲಕ್ಷ ಸೇವಂತಿಗೆ ಹೂಗಳು ಹಾಗೂ 90 ಸಾವಿರ ಕೆಂಪು ಮತ್ತು ಕಿತ್ತಳೆ ಬಣ್ಣದ ಗುಲಾಬಿ ಹೂಗಳು ಸೇರಿದಂತೆ ಒಟ್ಟು 3.5 ಲಕ್ಷ ಹೂಗಳನ್ನು ಬಳಸಲಾಗುತ್ತದೆ. ನಂತರದ ಆರು ದಿನಗಳಿಗೆ ಇದೇ ಪ್ರಮಾಣದ ಹೊಸ ಹೂಗಳನ್ನು ಬದಲಾಯಿಸಲಾಗುತ್ತದೆ. ದೇವಾಲಯದ ಪ್ರತಿರೂಪದ ಸುತ್ತಲೂ 25 ಸಾವಿರ ಅಲಂಕಾರಿಕ ಎಲೆ ಗಿಡಗಳನ್ನು ಅಳವಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದರ ಜೊತೆಗೆ ಗಾಜಿನ ಮನೆಯ ಬಲಭಾಗದಲ್ಲಿ ಬೆಂಗಳೂರು ಶಾಸನ, ಆನೆಗಳ ಯುದ್ಧದ ದೃಶ್ಯ, ಹಾಗೂ ಬ್ರಹ್ಮ ಸ್ತಂಭದ ಪ್ರತಿರೂಪಗಳನ್ನು 24 ಅಡಿ ಎತ್ತರದ ವೇದಿಕೆಯಲ್ಲಿ ಹೂಗಳಿಂದ ನಿರ್ಮಿಸಲಾಗುತ್ತಿದೆ. ಈ ಕಲಾಕೃತಿಗಳಿಗಾಗಿ ಸುಮಾರು 2.3 ಲಕ್ಷ ಹೂಗಳನ್ನು ಬಳಸಲಾಗುತ್ತದೆ.
ಗಂಗ ಸಾಮ್ರಾಜ್ಯ ಕನ್ನಡ ಸಾಹಿತ್ಯ, ಶಿಕ್ಷಣ, ನೀರಾವರಿ ವ್ಯವಸ್ಥೆ ಹಾಗೂ ಶಿಲ್ಪಕಲೆಗೆ ನೀಡಿದ ಕೊಡುಗೆಯನ್ನು ಪರಿಚಯಿಸುವ ವಿಶೇಷ ಕಲಾಕೃತಿಗಳೂ ಪ್ರದರ್ಶನದಲ್ಲಿ ಇರಲಿವೆ. ಹೂಗಳ ಮೂಲಕ ಇತಿಹಾಸವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ವಿಶೇಷ ಪರಿಕಲ್ಪನೆಯನ್ನು ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಫಲಪುಷ್ಪ ಪ್ರದರ್ಶನದಲ್ಲಿ ದೇವಾಲಯದ ಮುಂಭಾಗದಲ್ಲಿ ಗಂಗ ರಾಜ ಶ್ರೀಪುರುಷ ಅವರ ಆನೆ ಸಮೇತ ಪ್ರತಿಮೆ ಅಳವಡಿಸಲಾಗುತ್ತದೆ. ಜೊತೆಗೆ ಕೊಂಗಣಿವರ್ಮ, ಮಾಧವ, ಅವಿನೀತ ಹಾಗೂ ಮಹಾದಂಡನಾಯಕ ಚಾವುಂಡರಾಯ ಅವರ ಪ್ರತಿಮೆಗಳನ್ನೂ ಪ್ರದರ್ಶಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.