ಬೆಳಗಾವಿ: ಜಿಲ್ಲೆಯಲ್ಲಿ ಗುರುವಾರ ಕೆಎಸ್ಆರ್ಟಿಸಿ ಬಸ್ ಮತ್ತು ಮೋಟಾರ್ಸೈಕಲ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಓರ್ವ ವ್ಯಕ್ತಿ, ಅವರ ನಾಲ್ಕು ವರ್ಷದ ಮಗಳು ಮತ್ತು ಮತ್ತೊಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ.
ಗೋಕಾಕ ತಾಲೂಕಿನ ಕೊನ್ನೂರು ಪಟ್ಟಣದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಸೈಫ್ ಮುಲ್ಲಾ (29), ಅವರ ಮಗಳು ಸಿಜಾ ಮುಲ್ಲಾ (4) ಮತ್ತು ಇಮ್ತಿಯಾಜ್ ಬಡ್ಗಾಂವ್ (35) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಜಿಹಾನ್ ಶಾರುಖ್ ಕುಡಚಿಕರ್ ಎಂಬ ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗೋಕಾಕಕ್ಕೆ ತೆರಳುತ್ತಿದ್ದಾಗ ಕೊನ್ನೂರು ಬಳಿ ಮೋಟಾರ್ಸೈಕಲ್ಗೆ ಡಿಕ್ಕಿ ಹೊಡೆದಿದೆ.
ಅಪಘಾತಕ್ಕೂ ಮೊದಲು, ಮೋಟಾರ್ಸೈಕಲ್ ಗೋಕಾಕ ಜಲಪಾತದ ಬಳಿಯಿರುವ ಫೋರ್ಬ್ಸ್ ಶಾಲೆಯಿಂದ ಹೊರಟಿತ್ತು. ಸೈಫ್ ಮುಲ್ಲಾ ಅವರು ತಮ್ಮ ಮಗಳು ಸಿಜಾ, ಸ್ನೇಹಿತ ಇಮ್ತಿಯಾಜ್ ಮತ್ತು ಅವರ ಮಗಳು ಜಿಹಾನ್ ಅವರೊಂದಿಗೆ ಮೋಟಾರ್ಸೈಕಲ್ ಚಲಾಯಿಸುತ್ತಿದ್ದರು.
ಬೈಕ್ನಲ್ಲಿದ್ದ ನಾಲ್ವರ ಪೈಕಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡಿರುವ ಮಗುವಿನ ಸ್ಥಿತಿ ಗಂಭೀರವಾಗಿದೆ. ಅಪಘಾತದ ನಂತರ, ಬಸ್ ಚಾಲಕ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಧಾವಿಸಿ, ಪ್ರಾಥಮಿಕ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.