ಸಾಂದರ್ಭಿಕ ಚಿತ್ರ 
ರಾಜ್ಯ

ಹೊಸೂರು–ಬೊಮ್ಮಸಂದ್ರ ಮೆಟ್ರೋ ಯೋಜನೆ: ವೈಜ್ಞಾನಿಕ ಅಧ್ಯಯನಕ್ಕೆ ತಜ್ಞರ ಒತ್ತಾಯ

ಸುಮಾರು 23 ಕಿ.ಮೀ. ಉದ್ದದ ಈ ಮಾರ್ಗಕ್ಕೆ ಸಂಬಂಧಿಸಿದ ವಿವರವಾದ ಕಾರ್ಯಸಾಧ್ಯತಾ ವರದಿ (Detailed Feasibility Report) ಅಂತಿಮ ಹಂತದಲ್ಲಿದ್ದು, ಹೊಸೂರನ್ನು ಬೆಂಗಳೂರಿನ ಮೆಟ್ರೋ ಜಾಲಕ್ಕೆ ಸಂಪರ್ಕಿಸುವ ಉದ್ದೇಶ ಹೊಂದಿದೆ.

ಬೆಂಗಳೂರು: ತಮಿಳುನಾಡು ಸರ್ಕಾರವು ಹೊಸೂರು ಮತ್ತು ಬೊಮ್ಮಸಂದ್ರ ನಡುವೆ ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆಗೆ ಮುಂದಾಗಿರುವ ಬೆನ್ನಲ್ಲೇ, ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಬಲಪಡಿಸುವ ಪ್ರಯತ್ನವನ್ನು ಸಾರಿಗೆ ತಜ್ಞರು ಸ್ವಾಗತಿಸಿದ್ದಾರೆ. ಆದರೆ, ಪ್ರಯಾಣಿಕರ ಬೇಡಿಕೆಯನ್ನು ಪರಿಗಣಿಸದೆ ಮುಂಚಿತವಾಗಿಯೇ ಮೆಟ್ರೋ ವ್ಯವಸ್ಥೆ ಆಯ್ಕೆ ಮಾಡುವುದು ವೈಜ್ಞಾನಿಕ ವಿಧಾನವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸುಮಾರು 23 ಕಿ.ಮೀ. ಉದ್ದದ ಈ ಮಾರ್ಗಕ್ಕೆ ಸಂಬಂಧಿಸಿದ ವಿವರವಾದ ಕಾರ್ಯಸಾಧ್ಯತಾ ವರದಿ (Detailed Feasibility Report) ಅಂತಿಮ ಹಂತದಲ್ಲಿದ್ದು, ಹೊಸೂರನ್ನು ಬೆಂಗಳೂರಿನ ಮೆಟ್ರೋ ಜಾಲಕ್ಕೆ ಸಂಪರ್ಕಿಸುವ ಉದ್ದೇಶ ಹೊಂದಿದೆ.

ಭಾರತೀಯ ವಿಜ್ಞಾನ ಸಂಸ್ಥೆ (IISc)ಯ ಸುಸ್ಥಿರ ಸಾರಿಗೆ ಪ್ರಯೋಗಾಲಯದ ಸಂಚಾಲಕ ಪ್ರೊ. ಆಶಿಷ್ ವರ್ಮಾ, ಕಾರ್ಯಸಾಧ್ಯತಾ ಅಧ್ಯಯನವು ಪ್ರತಿ ಗಂಟೆಗೆ ಪ್ರತಿ ದಿಕ್ಕಿನಲ್ಲಿ ಎಷ್ಟು ಪ್ರಯಾಣಿಕರ ಬೇಡಿಕೆ ಇದೆ, ಗರಿಷ್ಠ ದಟ್ಟಣೆ ಇರುವ ಭಾಗಗಳು ಯಾವುವು ಎಂಬುದನ್ನು ಮೊದಲು ನಿರ್ಧರಿಸಬೇಕು. ಅದರ ಆಧಾರದ ಮೇಲೆ ಮೆಟ್ರೋ, ಮೆಟ್ರೋ ಲೈಟ್, ಉಪನಗರ ರೈಲು (Suburban Rail) ಅಥವಾ ಪ್ರಾದೇಶಿಕ ವೇಗದ ಸಾರಿಗೆ ವ್ಯವಸ್ಥೆ (RRTS) ಯಾವುದು ಸೂಕ್ತ ಎಂಬುದನ್ನು ತೀರ್ಮಾನಿಸಬೇಕು ಎಂದು ಹೇಳಿದರು.

ಪ್ರಮುಖ ವಾಣಿಜ್ಯ ಕೇಂದ್ರಗಳ ನಡುವೆ ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಬಲಪಡಿಸುವುದು ಸ್ವಾಗತಾರ್ಹ. ಆದರೆ ಮೊದಲು ಮೆಟ್ರೋ ನಿರ್ಮಿಸುವ ನಿರ್ಧಾರ ತೆಗೆದುಕೊಂಡು ನಂತರ ಕಾರ್ಯಸಾಧ್ಯತಾ ಅಧ್ಯಯನ ನಡೆಸುವುದು ವೈಜ್ಞಾನಿಕ ವಿಧಾನವಲ್ಲ. ಪ್ರಯಾಣಿಕರ ಬೇಡಿಕೆಯೇ ಯಾವ ಸಾರಿಗೆ ವ್ಯವಸ್ಥೆ ಸೂಕ್ತ ಎಂಬುದನ್ನು ನಿರ್ಧರಿಸಬೇಕು ಎಂದು ಹೇಳಿದರು.

ಸಾಕಷ್ಟು ಪ್ರಯಾಣಿಕರ ಬೇಡಿಕೆ ಇಲ್ಲದಿದ್ದರೂ ಹಲವಾರು ನಗರಗಳಲ್ಲಿ ಮೆಟ್ರೋ ನಿರ್ಮಿಸಿರುವ ಪರಿಣಾಮ, ಕಡಿಮೆ ಪ್ರಯಾಣಿಕರು ಮತ್ತು ಬಳಕೆಯಾಗದ ಮೂಲಸೌಕರ್ಯ ಸಮಸ್ಯೆ ಎದುರಾಗಿದೆ ಎಂದು ಅವರು ಹೇಳಿದರು.

ಮೆಟ್ರೋ ವ್ಯವಸ್ಥೆಗಳ ಹೊಂದಾಣಿಕೆ (Compatibility) ಸಮಸ್ಯೆಯಾಗಬಹುದು ಎಂಬ ವರದಿಗಳನ್ನು ತಳ್ಳಿಹಾಕಿದ ಅವರು, ಬೇರೆ ಬೇರೆ ಸಾರಿಗೆ ವ್ಯವಸ್ಥೆಗಳಿದ್ದರೂ ಸಾಮಾನ್ಯ ಟರ್ಮಿನಲ್‌ನಲ್ಲಿ ಭೌತಿಕ ಸಂಪರ್ಕ ಕಲ್ಪಿಸಿದರೆ ಸಾಕು. ಪ್ರಯಾಣಿಕರು ಸುಲಭವಾಗಿ ಒಂದು ವ್ಯವಸ್ಥೆಯಿಂದ ಮತ್ತೊಂದಕ್ಕೆ ಬದಲಾಯಿಸಬಹುದು. ಕೊಚ್ಚಿಯ ಮೆಟ್ರೋ ಮತ್ತು ವಾಟರ್ ಮೆಟ್ರೋ ಇದಕ್ಕೆ ಉತ್ತಮ ಉದಾಹರಣೆ ಎಂದರು.

‘ಮೆಟ್ರೋಗಿಂತ ಹೊಸೂರಿಗೆ ಉಪನಗರ ರೈಲು ಸೂಕ್ತ’

ರೈಲು ಮತ್ತು ಸಂಚಾರ ತಜ್ಞ ಸಂಜೀವ್ ದ್ಯಾಮಣ್ಣವರ, ಬೆಂಗಳೂರಿನ ಈಗಿನ ಯೆಲ್ಲೋ ಲೈನ್ ಮೆಟ್ರೋವನ್ನು ಹೊಸೂರಿಗೆ ವಿಸ್ತರಿಸುವುದು ಕಾರ್ಯಾಚರಣೆಯ ದೃಷ್ಟಿಯಿಂದ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.

ಮೆಟ್ರೋ ವ್ಯವಸ್ಥೆಯನ್ನು ಮುಖ್ಯವಾಗಿ ನಗರ ಸಂಚಾರಕ್ಕಾಗಿ ರೂಪಿಸಲಾಗಿದೆ. ಹೊಸೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇದೇ ಮೆಟ್ರೋ ಬಳಸಲು ಆರಂಭಿಸಿದರೆ, ಬೊಮ್ಮಸಂದ್ರ, ಎಲೆಕ್ಟ್ರಾನಿಕ್ಸ್ ಸಿಟಿ ಹಾಗೂ ಬೆಂಗಳೂರಿನ ಇತರೆ ನಿಲ್ದಾಣಗಳಿಂದ ಹತ್ತುವ ಪ್ರಯಾಣಿಕರಿಗೆ ತೀವ್ರ ಜನದಟ್ಟಣೆ ಉಂಟಾಗಬಹುದು. ಮೆಟ್ರೋಗೆ ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯಕ್ಕೆ ಮಿತಿಯಿದೆ ಎಂದು ಹೇಳಿದರು.

ಸುಮಾರು 30–40 ಕಿ.ಮೀ. ದೂರದ ಪ್ರಯಾಣಕ್ಕೆ ಮೆಟ್ರೋ ಸೂಕ್ತವಾಗಿದ್ದು, ಅದಕ್ಕಿಂತ ದೂರದ ಪ್ರಾದೇಶಿಕ ಸಂಚಾರಕ್ಕೆ ಉಪನಗರ ರೈಲು ಅಥವಾ RRTS ಹೆಚ್ಚು ಪರಿಣಾಮಕಾರಿ ಎನ್ನುತ್ತಾರೆ.

ಈ ಹಿನ್ನೆಲೆಯಲ್ಲಿ, ಹೀಲಲಿಗೆ–ಹೊಸೂರುವರೆಗೆ ಪ್ರಸ್ತಾವಿತ ಉಪನಗರ ರೈಲು ಮಾರ್ಗವನ್ನು ವಿಸ್ತರಿಸುವಂತೆ ಅವರು ಸಲಹೆ ನೀಡಿದರು.

ಉಪನಗರ ರೈಲು ಹೆಚ್ಚು ಪ್ರಯಾಣಿಕರನ್ನು ಸಾಗಿಸಬಲ್ಲದು, ವೇಗವೂ ಹೆಚ್ಚು, ನಿಲುಗಡೆಗಳು ಕಡಿಮೆ ಹಾಗೂ ನಿರ್ಮಾಣ ವೆಚ್ಚವೂ ಕಡಿಮೆ. ಇದನ್ನು ಚಂದಾಪುರ ವೃತ್ತದೊಂದಿಗೆ ಸಂಪರ್ಕಿಸಿದರೆ, ಕೇಂದ್ರ ಬೆಂಗಳೂರಿಗೆ ತೆರಳುವವರು ಬೊಮ್ಮಸಂದ್ರದಲ್ಲಿ ಮೆಟ್ರೋಗೆ ಬದಲಾಯಿಸಬಹುದು ಅಥವಾ ನೇರವಾಗಿ ಕೆಎಸ್‌ಆರ್ ಸೇರಿದಂತೆ ಇತರ ರೈಲು ನಿಲ್ದಾಣಗಳಿಗೆ ಉಪನಗರ ರೈಲಿನಲ್ಲೇ ಪ್ರಯಾಣಿಸಬಹುದು ಎಂದು ವಿವರಿಸಿದರು.

ಸರ್ಕಾರಗಳು ಮೆಟ್ರೋ ಸಂಪರ್ಕದ ಮೇಲೆಯೇ ಒಲವು ಹೊಂದಿದ್ದರೆ, ಬೆಂಗಳೂರಿನ ಈಗಿನ ಮೆಟ್ರೋ ಜಾಲವನ್ನು ವಿಸ್ತರಿಸುವ ಬದಲು ಹೊಸೂರು–ಎಲೆಕ್ಟ್ರಾನಿಕ್ಸ್ ಸಿಟಿ ನಡುವೆ ವಿಶೇಷ ಉದ್ದೇಶಿತ ಸಂಸ್ಥೆ (SPV) ಮೂಲಕ ಪ್ರತ್ಯೇಕ ಗಡಿ ದಾಟುವ ಮೆಟ್ರೋ ಯೋಜನೆಯನ್ನು ಪರಿಗಣಿಸಬೇಕು. ಇದರಿಂದ ಬೆಂಗಳೂರಿನ ನಗರ ಪ್ರಯಾಣಿಕರಿಗೆ ಮೀಸಲಾದ ಮೆಟ್ರೋ ಸಾಮರ್ಥ್ಯ ಉಳಿಯುವುದರ ಜೊತೆಗೆ ಪ್ರಾದೇಶಿಕ ಸಂಪರ್ಕವೂ ಉತ್ತಮವಾಗಲಿದೆ ಎಂದು ಸಲಹೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಭಾರತದ ಕಾನೂನು ಪಾಲಿಸುತ್ತಿದ್ದೀರಾ?': Metaಗೆ ಖಡಕ್ ಕ್ಲಾಸ್‌ ತೆಗೆದುಕೊಂಡ ಕೇಂದ್ರ ಸರ್ಕಾರ, ತೀವ್ರ ವಿಚಾರಣೆ

ಸಂಪುಟ ವಿಸ್ತರಣೆ ಕಿಚ್ಚು; 'ಕೈ' ಪಾಳಯದಲ್ಲಿ ಹೈ ಡ್ರಾಮಾ: ಡ್ಯಾಮೇಜ್ ಕಂಟ್ರೋಲ್‌ಗೆ ಸುರ್ಜೇವಾಲಾ ಎಂಟ್ರಿ..!

18 ಅಡಿ ಬಾವಿಯಲ್ಲಿ ಸಮುದ್ರದ ರೀತಿ ಅಲೆ...! ಗುಜರಾತ್‌ನಲ್ಲಿ ಬೆರಗು ಮೂಡಿಸಿದ ವಿಚಿತ್ರ ವಿದ್ಯಮಾನ; ಭೂಮಿಯೊಳಗೆ ನಡೆಯುತ್ತಿರುವುದೇನು? Video

'Real estate mafia ಲಾಭಕ್ಕಾಗಿ ಬಿಡದಿ ಯೋಜನೆ'; ಸರ್ಕಾರದ ವಿರುದ್ಧ BJP-JDS ವಾಗ್ದಾಳಿ, ಜಂಟಿ ಪಾದಯಾತ್ರೆಗೆ ಮುಂದು..!

ಒಂದಲ್ಲ, 5 ಪೊಲೀಸ್‌ ಆಯುಕ್ತಾಲಯಗಳು; ಬೆಂಗಳೂರು ಪೊಲೀಸ್‌ ವ್ಯವಸ್ಥೆಗೆ ಮೇಜರ್‌ ಸರ್ಜರಿ; ಆ.15ರಂದು ಡಿಕೆ.ಶಿವಕುಮಾರ್ ಮಹತ್ವದ ಘೋಷಣೆ..?