ಬಾಗಲಕೋಟೆ: ತಮಗೆ ಸಚಿವ ಸ್ಥಾನ ಸಿಗದಂತೆ ತಡೆಯಲು ಕೆಲವರು ನಡೆಸಿದ ಸತತ ಪ್ರಯತ್ನಗಳಿಗೆ ನೂತನ ಸಚಿವ ವಿಜಯಾನಂದ ಕಾಶಪ್ಪನವರ್ ಬಹಿರಂಗವಾಗಿಯೇ ಕಡಕ್ ಟಾಂಗ್ ನೀಡಿದ್ದಾರೆ. ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ವಿರುದ್ಧ ಮತ್ತೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ನನ್ನನ್ನು ಮಂತ್ರಿ ಮಾಡಬಾರದೆಂದು ಜಗದ್ಗುರುಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಳಿ ಹೇಳಿದ್ದರಂತೆ. ಆದರೆ, ಮುಖ್ಯಮಂತ್ರಿಗಳು ‘ಪಂಚಮಸಾಲಿ ಶ್ರೀಗಳು ನಿನ್ನನ್ನು ಮಂತ್ರಿ ಮಾಡಬಾರದು ಎಂದಿದ್ದಕ್ಕೆ ನಾನು ನಿನ್ನನ್ನು ಮಂತ್ರಿ ಮಾಡುತ್ತಿದ್ದೇನೆ’ ಎಂದು ಹೇಳಿ ನನಗೆ ಸಚಿವ ಸ್ಥಾನ ನೀಡಿದ್ದಾರೆ. ಸಚಿವನಾಗಿದ್ದೇನೆ. ಈಗೇನು ಮಾಡುತ್ತೀಯಪ್ಪಾ ಜಗದ್ಗುರು? ಎಂದು ನೇರವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ಇರುವವರೆಗೂ ಯಾವುದೇ ಮುಖ್ಯಮಂತ್ರಿಯ ಮನೆಗೆ ಹೋಗುವುದಿಲ್ಲ ಎಂದು ಪ್ರಮಾಣ ಮಾಡಿದ್ದೆಯಲ್ಲಪ್ಪಾ, ನಿನ್ನ ನೈತಿಕ ಮಟ್ಟ ಎಲ್ಲಿದೆ? ನಾವು ತೊಟ್ಟ ಬಟ್ಟೆಗೆ ವಿಧೇಯರಾಗಿ ಇರಬೇಕು. ಆದರೆ ನೀನು ಧರಿಸಿದ ಕಾವಿ ಬಟ್ಟೆಗೆ ವಿಧೇಯನಾಗಿದ್ದೀಯಾ? ಸಮಾಜ ನಮಗೆ ಕೊಟ್ಟ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಬೇಕೇ ಹೊರತು ‘ನನ್ನದೇ ನಡೆಯುತ್ತದೆ’ ಎಂದು ಏನೇನೋ ಮಾತನಾಡಿದರೆ ನಡೆಯುವುದಿಲ್ಲ ಎಂದರು.
ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಇನ್ಸ್ಟಾಗ್ರಾಮ್, ಫೇಸ್ಬುಕ್ಗಳಲ್ಲಿ ತಮಗೆ ಮಂತ್ರಿಗಿರಿ ತಪ್ಪಿಸಲು ನಡೆದ ಅಭಿಯಾನಗಳ ಕುರಿತು ಪ್ರಸ್ತಾಪಿಸಿ, "ಕೊಲ್ಲುವವರು ನೂರು ಜನರಿದ್ದರೂ ಕಾಯುವವನು ಒಬ್ಬ ಇದ್ದೇ ಇರುತ್ತಾನೆ ಎನ್ನುವುದಕ್ಕೆ ನಾನಿಂದು ಸಚಿವನಾಗಿರುವುದೇ ಜೀವಂತ ಸಾಕ್ಷಿ" ಎಂದು ಹೇಳಿದರು.