ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ, ಮೈಸೂರು ದಸರಾ ಉತ್ಸವದಲ್ಲಿ ಅಂಬಾರಿ ಹಾಗೂ ಅಂಬಾರಿ ಹೊರುವ ಆನೆ, ನಿಶಾನೆ ಆನೆಗಳು ಎಲ್ಲರ ಕೇಂದ್ರಬಿಂದುವಾಗಿರಲಿವೆ.
2020 ರಿಂದ ಅಭಿಮನ್ಯು ಆನೆ ಅಂಬಾರಿ ಹೊರುತ್ತಿತ್ತು. ಆದರೆ ಈ ಬಾರಿಯಿಂದ ಅಭಿಮನ್ಯು ಅಂಬಾರಿ ಹೊರುವುದಿಲ್ಲ. ಅರಣ್ಯ ಇಲಾಖೆ ಈ ಬಾರಿಯ ದಸರಾ ಅಂಬಾರಿ ಹೊರುವುದಕ್ಕೆ ಹೊಸ ಆನೆಯ ಶೋಧನೆಯಲ್ಲಿ ತೊಡಗಿದೆ.
ಮೈಸೂರು ದಸರಾ ಉತ್ಸವಕ್ಕೆ 12 ಆನೆಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು ಅಭಿಮನ್ಯು ಆನೆಯನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಧನಂಜಯ, ಮಹೇಂದ್ರ, ಸುಗ್ರೀವ ಅಥವಾ ಪ್ರಶಾಂತ ಈ 4 ಆನೆಗಳ ಪೈಕಿ 1 ಈ ಬಾರಿ ತಾಯಿ ಚಾಮುಂಡಿ ಇರುವ ಚಿನ್ನದ ಅಂಬಾರಿಯನ್ನು ಹೊರಲಿದೆ.
60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಬಾರಿ ಅಂಬಾರಿ ಹೊರಲು ಅಭಿಮನ್ಯುವನ್ನು ಪರಿಗಣಿಸಿಲ್ಲ ಎಂದು ತಿಳಿಸಲಾಗಿದೆ. ಆ.26ರಂದು ದಸರಾ ಗಜಪಯಣ ಆರಂಭವಾಗಲಿದ್ದು, ಮೊದಲ ತಂಡದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಲಕ್ಷ್ಮೀ ಹಾಗೂ ಕಾವೇರಿ ಆನೆಗಳು ಆಗಮಿಸಲಿವೆ.
ದಸರಾದ ಅಚ್ಚುಮೆಚ್ಚಿನ ಕ್ಯಾಪ್ಟನ್ ಅಭಿಮನ್ಯುಗೆ ದಸರಾದಲ್ಲಿ ಬರೋಬ್ಬರಿ 25 ವರ್ಷಗಳ ಇತಿಹಾಸವಿದೆ. ತುರ್ತು ಕಾರಣಗಳಿಗಾಗಿ ಬಲಿಷ್ಠ ಆನೆಗಳಾದ ಭೀಮ ಮತ್ತು ಹರ್ಷನನ್ನು ಅರಣ್ಯ ಇಲಾಖೆಯು ಮೀಸಲು ಪಡೆಯಾಗಿ ತಂಡಕ್ಕೆ ಸೇರಿಸಿಕೊಂಡಿದೆ.