ಬೆಂಗಳೂರು: ನೀವು ನಮಸ್ತೇ ಸದಾ ವತ್ಸಲೆ ಹೇಳಿ ಇಷ್ಟೆಲ್ಲಾ ಬದಲಾವಣೆ ಆಗಿದ್ದೀರಿ. ಇನ್ನು ಪೂರ್ತಿ ಹೇಳಿದರೆ ಎಷ್ಟು ಬದಲಾವಣೆ ಆಗ್ತೀರಿ ಎಂದು ಶಾಸಕ ಸುನೀಲ್ ಕುಮಾರ್ ಮುಖ್ಯಮಂತ್ರಿ ಡಿಕ ಶಿವಕುಮಾರ್ ಕಾಲೆಳೆದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ವಿಧಾನಸಭೆಯಲ್ಲಿ ಮಂಗಳವಾರ ನಡೆದ ಉಪ ಸಭಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಸಂದರ್ಭದಲ್ಲಿ ಮಾತನಾಡುವ ಸಂದರ್ಭದಲ್ಲಿ, ಆಡಳಿತ ಮತ್ತು ವಿಪಕ್ಷ ನಾಯಕರ ನಡುವೆ ಸದನದಲ್ಲಿ ಸ್ವಾರಸ್ಯಕರ ಮಾತುಕತೆ ನಡೆಯಿತು.
ಅಶೋಕ್ ಮತ್ತು ಅವರ ತಂಡದ ವಿರುದ್ಧ ನನಗೆ ಬೇಜಾರಾಗಿದೆ, ನಾನು ಬರ್ತಿದಂಗೆ ದಿಕ್ಕಾರ ದಿಕ್ಕಾರ ಅಂತಾ ಹೇಳ್ತಾರೆ. ನಾನು ಪೂರ್ತಿ ಹೇಳಿದ ಮೇಲೆ ನೀವು ಮಾತಾನಾಡಿದರೆ ಸರಿ, ಅದನ್ನು ಬಿಟ್ಟು ಏಕಾ ಏಕಿ ದಿಕ್ಕಾರ ಕೂಗಿದರೆ ಹೇಗೆ ಎಂದು ಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಶಾಸಕ ಸುನೀಲ್ ಕುಮಾರ್, ನೀವು ನಮಸ್ತೇ ಸದಾ ವತ್ಸಲೆ ಹೇಳಿ ಇಷ್ಟೆಲ್ಲಾ ಬದಲಾವಣೆ ಆಗಿದ್ದೀರಿ. ಇನ್ನು ಪೂರ್ತಿ ಹೇಳಿದರೆ ಎಷ್ಟೊಂದು ಬದಲಾವಣೆಯಾಗಬಹುದು, ನೀವು ವೇದಾಂತಿ ಆಗುವುದು ಒಳ್ಳೆಯದು, ನಿಮಗೆ ಸಿಎಂ ಸ್ಥಾನ ಸೆಟ್ ಆಗ್ತಿಲ್ಲ ಎಂದರು.
ಸಿಎಂ ಮಾತನಾಡುತ್ತಿದ್ದಾಗ ಪದೇ ಪದೇ ಮಧ್ಯಪ್ರವೇಶ ಮಾಡಿದ ಸುನೀಲ್ ಕುಮಾರ್ ಅವರಿಗೆ, "ಏನು ಸುನೀಲ್ ನನ್ನನ್ನು ಕಂಡರೆ ಇಷ್ಟೊಂದು ಕೋಪ" ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸುನೀಲ್ "ನೀವು ಬಹಳ ಉದಾರಿಗಳು, ತೊಂದರೆ ಕೊಡಲ್ಲ. ಆದರೆ ನಿಮ್ಮ ಸಂಪುಟದಲ್ಲಿ ತೊಂದರೆ ಕೊಡಲು ತುಂಬಾ ಜನ ಇದ್ದಾರೆ" ಎಂದರು.
ಈ ವೇಳೆ ಗ್ರೀಕ್ ತತ್ವಜ್ಞಾನಿ ಪ್ಲುಟೋ ಮಾತನ್ನು ಉಲ್ಲೇಖ ಮಾಡಿದ ಡಿಕೆ ಶಿವಕುಮಾರ್, "Lord, protect me from my friends; I can take care of my enemies." (ಗಾಡ್ ಪೊಟ್ರೆಕ್ಟ್ ಮಿ ಫ್ರಂ ಮೈ ಫ್ರೆಂಡ್ಸ್, ಸೋ ಐ ಕಾನ್ ಟೇಕ್ ಕೇರ್ ಆಫ್ ಮೈ ಎನಿಮೀಸ್) ಎಂದು ಹೇಳಿದರು. ಇದಕ್ಕೆ ಸುನೀಲ್ ಕುಮಾರ್ ತಿರುಗೇಟು ನೀಡಿ, "ನೀವು ವೇದಾಂತಿ ಆಗುವುದು ಒಳ್ಳೆಯದು. ನೀವು ಸಿಎಂ ಸ್ಥಾನಕ್ಕೆ ಸೆಟ್ ಆಗ್ತಿಲ್ಲ. ಪರಮೇಶ್ವರ್ ಅವರಿಗೆ ಬಿಟ್ಟು ಕೊಟ್ಟು ವೇದಾಂತಿ ಆಗಿ. ಆಡಳಿತಕ್ಕೆ ನೀವು ಸೆಟ್ ಆಗ್ತಿಲ್ಲ" ಎಂದರು.