ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ಶಾಸಕರು ತಮ್ಮ ಪ್ರತಿಭಟನೆ ನಡೆಸಲು ಬಯಸಿದರೆ ಸದನದ ಬಾವಿಗೆ ಬರುವಂತೆ ಕರ್ನಾಟಕ ವಿಧಾನಸಭಾ ಸ್ಪೀಕರ್ ಜಿ.ಎಸ್. ಪಾಟೀಲ್ ಹೇಳಿದ್ದು ಇದಕ್ಕೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ವಿರೋಧ ಪಕ್ಷವು ಸೋಮವಾರದಿಂದ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸುತ್ತಿವೆ. ಆದರೆ ಬಿಜೆಪಿ ಶಾಸಕರು ಇಲ್ಲಿಯವರೆಗೆ ಸದನದ ಬಾವಿಗೆ ಪ್ರವೇಶಿಸುವ ಬದಲು ತಮಗೆ ಹಂಚಿಕೆಯಾದ ಸ್ಥಾನಗಳಲ್ಲೇ ನಿಂತು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಸರ್ಕಾರ ಹಾಗೂ ವಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಸಿದ್ದು ಈ ವೇಳೆ ಸ್ಪೀಕರ್ ಪಾಟೀಲ್ ತಮ್ಮ ಕುರ್ಚಿಯಿಂದ ಎದ್ದು ನಿಂತು ಸದನವನ್ನು ನಿಯಂತ್ರಿಸಲು ಪ್ರಯತ್ನಿಸಿದರು.
ನಾವು ನಿಮ್ಮನ್ನು ಗೌರವಿಸುತ್ತೇವೆ. ನೀವು ನಿಂತರೆ, ನಾವೆಲ್ಲರೂ ಕುಳಿತುಕೊಳ್ಳುತ್ತೇವೆ. ನಾವು ನಿಮ್ಮ ಮಾತನ್ನು ಕೇಳುತ್ತೇವೆ. ಆದರೆ ನಾವು ಕಾಂಗ್ರೆಸ್ ಮಾತನ್ನು ಕೇಳುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಸ್ಪೀಕರ್ ಅವರನ್ನು ಉದ್ದೇಶಿಸಿ ಹೇಳಿದರು. ನಂತರ ಪಾಟೀಲ್ ಹೊಸ ಸ್ಪೀಕರ್ ಆಗಿ, ಮೊದಲ ಎರಡು ದಿನಗಳಲ್ಲಿ ನಿಯಮ ಪುಸ್ತಕವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದನ್ನು ತಪ್ಪಿಸಿ ವಿರೋಧ ಪಕ್ಷದ ಬೇಡಿಕೆಯ ಮೇಲೆ ಪ್ರತಿಭಟಿಸಲು ಅವಕಾಶ ನೀಡಿದ್ದರು ಎಂದು ಸದನಕ್ಕೆ ತಿಳಿಸಿದರು. ಆದರೆ ನೀವು ನಿಂತು ನಿಮ್ಮ ಸ್ಥಾನಗಳಿಂದ ಕೂಗುವ ಮೂಲಕ ಪ್ರತಿಭಟಿಸಲು ಸಾಧ್ಯವಿಲ್ಲ. ನೀವು ಪ್ರತಿಭಟಿಸಲು ಬಯಸಿದರೆ, ಸದನದ ಬಾವಿಗೆ ಬನ್ನಿ ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್, ವಿರೋಧ ಪಕ್ಷವನ್ನು ಬಾವಿಗೆ ಆಹ್ವಾನಿಸುವ ಮೊದಲ ಸ್ಪೀಕರ್ ನೀವು. ಬೇರೆ ಯಾವುದೇ ಸ್ಪೀಕರ್ ಅಂತಹ ಆಹ್ವಾನವನ್ನು ನೀಡಿಲ್ಲ ಎಂದು ಹೇಳಿದರು. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪೀಕರ್ ಅವರನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದು, ನೀವು ಯಾವ ನಿಯಮದ ಅಡಿಯಲ್ಲಿ ನಿಗದಿಪಡಿಸಿದ ಆಸನಗಳ ಬಳಿ ನಿಂತು ಪ್ರತಿಭಟಿಸುತ್ತಿದ್ದೀರಿ ಅಥವಾ ಘೋಷಣೆಗಳನ್ನು ಕೂಗುತ್ತಿದ್ದೀರಿ. ನೀವು ಪ್ರತಿಭಟಿಸಲು ಬಯಸಿದರೆ, ಬಾವಿಗೆ ಬನ್ನಿ ಎಂದು ಹೇಳಿದರು. ಇದಕ್ಕೆ ಸಿ ಎನ್ ಅಶ್ವತ್ಥ ನಾರಾಯಣ್ ಸೇರಿದಂತೆ ಕೆಲವು ಬಿಜೆಪಿ ಸದಸ್ಯರು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಇತ್ತೀಚೆಗೆ ಸಂಸತ್ತಿನಲ್ಲಿ ಹೇಗೆ ಪ್ರತಿಭಟನೆ ನಡೆಸಿದರು ಎಂದು ಪ್ರಿಯಾಂಕ್ ಖರ್ಗೆ ಹೇಳಲಿ? ಅವರು ಸಹ ನಿಗದಿಪಡಿಸಿದ ಸ್ಥಾನಗಳಿಂದಲೇ ಪ್ರತಿಭಟನೆ ನಡೆಸಿದರು. ಸದನ ಕಾರ್ಯನಿರ್ವಹಿಸಲು ಬಿಡಲಿಲ್ಲ ಎಂದು ಹೇಳಿದರು.
ಮೂಲಗಳ ಪ್ರಕಾರ, ವಿರೋಧ ಪಕ್ಷವು ಉದ್ದೇಶಪೂರ್ವಕವಾಗಿ ಪ್ರತಿಭಟನೆಯ ಸಮಯದಲ್ಲಿ ಸದನದ ಬಾವಿಗೆ ಪ್ರವೇಶಿಸದಿರಲು ನಿರ್ಧರಿಸಿದೆ. ತಮ್ಮ ಮಾತನ್ನು ಪರಿಣಾಮಕಾರಿಯಾಗಿ ಆಲಿಸುವಂತೆ ನೋಡಿಕೊಳ್ಳಲು ಮತ್ತು ಆಡಳಿತಾರೂಢ ಕಾಂಗ್ರೆಸ್ ಅಶಿಸ್ತಿನ ವರ್ತನೆಗಾಗಿ ಅವರನ್ನು ಅಮಾನತುಗೊಳಿಸುವುದನ್ನು ತಡೆಯಲು ವಿಪಕ್ಷಗಳು ಈ ರೀತಿ ಪ್ರತಿಭಟಿಸುತ್ತಿವೆ.