ದಾವಣಗೆರೆ: ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ನಾಪತ್ತೆಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದ್ದು, ಅವರ ಮೊಬೈಲ್ಗಳು ಸ್ವಿಚ್ಆಫ್ ಆಗಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.
ದಾವಣಗೆರೆಯ ಬನಶಂಕರಿ ಬಡಾವಣೆಯ ನಿವಾಸಿ ರಮೇಶ್ ಕುಮಾರ್(38) ಅವರು ಆಗಸ್ಟ್ 14 ರಂದು ತಮ್ಮ ಪತ್ನಿ ಜಯಶೀಲ(36), ಪುತ್ರ ಹಿತೇಶ್(9) ಹಾಗೂ ಪುತ್ರಿ ಪ್ರೇರಣ(3) ಅವರೊಂದಿಗೆ ಬೆಂಗಳೂರಿಗೆ ಹೋಗಿ ಬರುತ್ತೇವೆ ಎಂದು ಪೋಷಕರಿಗೆ ಹೇಳಿ ಮನೆಯಿಂದ ಹೊರಟಿದ್ದು, ವಾಪಸ್ ಬಂದಿಲ್ಲ ಮತ್ತು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.
ಮೂಲತಃ ದಾವಣಗೆರೆ ತಾಲೂಕಿನ ಶ್ಯಾಗಲೆ ಗ್ರಾಮದವರಾದ ರಮೇಶ್ ಕುಮಾರ್ ಅವರು ಷೇರು ಮಾರುಕಟ್ಟೆ ಹೂಡಿಕೆ ವ್ಯವಹಾರ ಮಾಡಿಕೊಂಡು ಕುಟುಂಬದೊಂದಿಗೆ ದಾವಣಗೆರೆಯಲ್ಲಿ ನೆಲೆಸಿದ್ದರು.
ರಮೇಶ್ ಕುಮಾರ್ ಸಾರ್ವಜನಿಕರಿಂದಲೂ ಹಣ ಸಂಗ್ರಹಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟವಾಗಿತ್ತು ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಕುಟುಂಬ ಸಮೇತ ಮನೆ ಬಿಟ್ಟು ಹೋಗಿರಬಹುದೇ ಎಂಬ ಅನುಮಾನವೂ ವ್ಯಕ್ತವಾಗಿದೆ.
ರಮೇಶ್ ಕುಟುಂಬ ತಮ್ಮ ಸ್ವಂತ ಕಾರು ಅಥವಾ ಬೈಕ್ ಬಳಸದೆ, ಅವುಗಳನ್ನು ಮನೆಯ ಬಳಿಯೇ ನಿಲ್ಲಿಸಿ, ಆಟೋದಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಸ್ ನಿಲ್ದಾಣಕ್ಕೆ ಹೋಗಿದ್ದರು. ಬಳಿಕ ರಮೇಶ್ ಕುಮಾರ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಅಂದಿನಿಂದ ಈವರೆಗೂ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಸಂಬಂಧಿಕರ ಮನೆಗಳಿಗೂ ಹೋಗಿಲ್ಲ. ಇದರಿಂದ ಆತಂಕಗೊಂಡು ರಮೇಶ್ ಕುಮಾರ್ ಅವರ ಸಂಬಂಧಿಕರು ವಿದ್ಯಾನಗರ ಠಾಣೆಗೆ ದೂರು ನೀಡಿದ್ದು, ರಮೇಶ್ ಕುಟುಂಬಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಮನೆಯಲ್ಲಿ ಪತ್ರ ಪತ್ತೆ
ಇನ್ನು, ನಾವು ಬಹಳ ಸಾಲ ಮಾಡಿಕೊಡಿದ್ದೇವೆ, ಆದರೆ ಯಾರಿಗೂ ಅನ್ಯಾಯ ಮಾಡಿಲ್ಲ. ಸಾಲಾ ತಿರಿಸಲು ಆಗದ ಕಾರಣ ನಾವು ದೂರ ಹೋಗುತ್ತಿದ್ದೇವೆ. ನಮ್ಮನ್ನು ಹುಡುಕ ಬೇಡಿ, ನಮ್ಮಿಂದ ಸಂಬಂಧಿಕರ ಹೆಸರು ಹಾಳಾಗಬಾರದು. ಹೀಗಾಗಿ ದೂರ ಹೋಗುತ್ತಿದ್ದೇವೆ ಎಂದು ಮನೆಯಲ್ಲಿ ಕುಟುಂಬಸ್ಥರು ಬರೆದಿಟ್ಟು ಹೋದ ಪತ್ರ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ.