ಬೆಂಗಳೂರು: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್ ಸಿಗುವ ಸಾಧ್ಯತೆಯಿದೆ. ಆಗಸ್ಟ್ 15ರಂದು ಆರಂಭವಾಗಬೇಕಿದ್ದ ನಮ್ಮ ಮೆಟ್ರೋ ಪಿಂಕ್ ಲೈನ್ ಸಂಚಾರ ಇದೀಗ ಅಗತ್ಯ ಅನುಮತಿಗಳು ದೊರೆತರೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಆರಂಭವಾಗುವ ನಿರೀಕ್ಷೆಯಿದೆ.
ರೈಲ್ವೆ ಮಂಡಳಿಯ ಅನುಮತಿ ಹಾಗೂ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ (CMRS) ಪರಿಶೀಲನೆ ಪೂರ್ಣಗೊಂಡ ಬಳಿಕ ಸಾರ್ವಜನಿಕ ಸೇವೆಗೆ ಮಾರ್ಗ ಮುಕ್ತವಾಗಲಿದೆ.
ಟಿಎನ್ಐಇಗೆ ಮಾಹಿತಿ ನೀಡಿದ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ. ಜಾಫರ್ ಅವರು, ಎತ್ತರಿಸಿದ ಪಿಂಕ್ ಲೈನ್ಗೆ ಸಂಬಂಧಿಸಿದಂತೆ ರೈಲ್ವೆ ಮಂಡಳಿಯಿಂದ ರೈಲುಗಳ ಸಂಚಾರಕ್ಕೆ ಅನುಮತಿ ಪಡೆಯುವುದು ಮಾತ್ರ ಬಾಕಿಯಿದೆ ಎಂದು ತಿಳಿಸಿದ್ದಾರೆ.
ರೈಲ್ವೆ ಮಂಡಳಿಯ ಅನುಮತಿ ದೊರೆತ ಬಳಿಕ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ಮಾರ್ಗದ ಪರಿಶೀಲನೆ ನಡೆಸಲಿದ್ದಾರೆ. ಬಿಎಂಆರ್ಸಿಎಲ್ನ ಕಡೆಯಿಂದ ಎಲ್ಲ ಕಾಮಗಾರಿಗಳೂ ಪೂರ್ಣಗೊಂಡಿವೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ನಲ್ಲಿ ಮಾರ್ಗವನ್ನು ಆರಂಭಿಸಬಹುದು. ಆದರೆ, ನಿಖರ ದಿನಾಂಕವು ಅಗತ್ಯ ಕಾನೂನುಬದ್ಧ ಅನುಮತಿಗಳು ಯಾವಾಗ ದೊರೆಯುತ್ತವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಪಿಂಕ್ ಲೈನ್ ಭೂಗತ ಮಾರ್ಗ ಕಾಮಗಾರಿ ಪರಿಶೀಲನೆ
ಇದೇ ವೇಳೆ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ಶನಿವಾರ ಪಿಂಕ್ ಲೈನ್ನ ಭೂಗತ ಮಾರ್ಗದ ಕಾಮಗಾರಿಯನ್ನು ಪರಿಶೀಲಿಸಿದರು.
ಈ ಮಾರ್ಗವು ಡೇರಿ ಸರ್ಕಲ್ನಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸಲಿದೆ. ಭೂಗತ ಮಾರ್ಗದ ಕಾಮಗಾರಿಯನ್ನು 2027ರ ಮಧ್ಯಭಾಗದ ವೇಳೆಗೆ ಪೂರ್ಣಗೊಳಿಸುವ ಗುರಿಯನ್ನು ಸಚಿವರು ನಿಗದಿಪಡಿಸಿದ್ದಾರೆ ಎಂದು ಜಾಫರ್ ತಿಳಿಸಿದ್ದಾರೆ.
ಈ ಗಡುವನ್ನು ಸಾಧಿಸಲು ಸಾಧ್ಯವಿದೆ ಎಂಬ ವಿಶ್ವಾಸ ಬಿಎಂಆರ್ಸಿಎಲ್ಗಿದೆ. ಭೂಗತ ಮಾರ್ಗದ ನಾಗರಿಕ ಕಾಮಗಾರಿಗಳು ಪೂರ್ಣಗೊಂಡಿದ್ದು, ವಿದ್ಯುದ್ದೀಕರಣ ಕಾಮಗಾರಿ ಬಹುತೇಕ ಮುಗಿದಿದೆ. ಇದೀಗ ಸಿಗ್ನಲಿಂಗ್ ಕಾಮಗಾರಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.