ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ವಿರೋಧಿಸಿ ಮತ್ತು ಈ ಪ್ರಕ್ರಿಯೆ "ದೋಷಪೂರಿತ", "ಅವೈಜ್ಞಾನಿಕ" ಎಂದು ಆರೋಪಿಸಿದ ನಟ ಪ್ರಕಾಶ್ ರಾಜ್ ಅವರು, ಸೆಪ್ಟೆಂಬರ್ 1ರಂದು "ಚುನಾವಣಾ ಆಯೋಗ ಚಲೋ" ನಡೆಸುವುದಾಗಿ ಮಂಗಳವಾರ ಘೋಷಿಸಿದ್ದಾರೆ.
ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಟ ಪ್ರಕಾಶ್ ರಾಜ್, ಲಕ್ಷಾಂತರ ಅರ್ಹ ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಆರೋಪಿಸಿದರು. ಅಲ್ಲದೆ ಎಸ್ಐಆರ್ ಪ್ರಕ್ರಿಯೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ವಿವಿಧ ಸಂಘಟನೆಗಳ, ನಾಗರಿಕರು ಸಿದ್ಧಪಡಿಸಿದ ದೂರುಗಳ ಎಫ್ಐಆರ್ ಅನ್ನು ಬಿಡುಗಡೆ ಮಾಡಿದ ಪ್ರಕಾಶ್ ರಾಜ್ ಅವರು, ಒಂದು ತಿಂಗಳಲ್ಲಿ 1.08 ಕೋಟಿ ಮತದಾರರ ಹಕ್ಕು ಕಸಿದಿರುವುದು ಅಪರಾಧ. ಈ ಎಲ್ಲಾ ಮತದಾರರನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡುವವರೆಗೆ ಹೋರಟಾ ಮಾಡುವುದಾಗಿ ತಿಳಿಸಿದರು.
ಸಂಘಟನೆಗಳು ಸಂಪೂರ್ಣ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಕೋರಿ ಕೋರ್ಟ್ ಮೆಟ್ಟಿಲೇರಲು ಸಿದ್ಧವಾಗಿವೆ. ಆದ್ದರಿಂದ ಇದು ಬಹಳ ದೊಡ್ಡ ಹೋರಾಟ" ಎಂದು ಅವರು ಹೇಳಿದರು.
"ಮುಂದಿನ(ವಿಧಾನಸಭೆ) ಚುನಾವಣೆಗೆ ನಮಗೆ ಇನ್ನೂ ಎರಡು ವರ್ಷವಿದ್ದರೂ ಮತದಾರರಲ್ಲಿ ಯಾವುದೇ ಜಾಗೃತಿ ಮೂಡಿಸದೇ ತರಾತುರಿಯಲ್ಲಿ ಎಸ್ಐಆರ್ ಕೈಗೊಳ್ಳಲಾಗಿದೆ. ಐದು ಕೋಟಿಗೂ ಹೆಚ್ಚು ಮತದಾರರನ್ನು ಒಳಗೊಂಡ ಈ ಪ್ರಕ್ರಿಯೆಯನ್ನು ನೀವು ಒಂದು ತಿಂಗಳಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ನೀವು ಅದನ್ನು ಆರು ತಿಂಗಳ ಮುಂಚಿತವಾಗಿ ಘೋಷಿಸಬೇಕಾಗಿತ್ತು" ಎಂದು ಅವರು ಹೇಳಿದರು.
ಇಡೀ ಪ್ರಕ್ರಿಯೆಯನ್ನು "ಅವೈಜ್ಞಾನಿಕ" ಮತ್ತು "ಪ್ರಜಾಪ್ರಭುತ್ವ ವಿರೋಧಿ" ರೀತಿಯಲ್ಲಿ ನಡೆಸಲಾಗಿದೆ ಎಂದು ಆರೋಪಿಸಿದ ಪ್ರಕಾಶ್ ರಾಜ್, ಈ ಸಂಬಂಧ ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ಸೋಮವಾರ ಪ್ರಕಟವಾದ ಎಸ್ಐಆರ್ ಪ್ರಕ್ರಿಯೆಯ ಕರಡು ಮತದಾರರ ಪಟ್ಟಿಯಲ್ಲಿ 4.46 ಕೋಟಿಗೂ ಹೆಚ್ಚು ಮತದಾರರಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ವಿ ಅನ್ಬುಕ್ಕುಮಾರ್ ಹೇಳಿದ ಒಂದು ದಿನದ ನಂತರ ಪ್ರಕಾಶ್ ರಾಜ್ ಅವರು ಚುನಾವಣಾ ಆಯೋಗ ಚಲೋ ಘೋಷಿಸಿದ್ದಾರೆ.