ಬೆಂಗಳೂರು: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿನ 5.54 ಕೋಟಿ ಮತದಾರರ ಪೈಕಿ, 1.08 ಕೋಟಿಗೂ ಅಧಿಕ ಮತದಾರರು ಗೈರಾದ, ಸ್ಥಳಾಂತರ, ಮೃತಪಟ್ಟವರು, ನಕಲಿ ಮತ್ತಿತರ ASDDO ಪಟ್ಟಿಯಲ್ಲಿ ಗುರುತಿಸಿರುವುದು ಹಾಗೂ ಸುಮಾರು 43 ಲಕ್ಷ ಮತದಾರರಿಗೆ ತಾರ್ಕಿಕ ವ್ಯತ್ಯಾಸಗಳ (Logical Discrepancies) ಕುರಿತು ನೋಟಿಸ್ ನೀಡಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ ಎಂದವರು ತಿಳಿಸಿದ್ದಾರೆ.
ಬೆಂಗಳೂರು ಒಂದರಲ್ಲಿಯೇ 46. 88 ಲಕ್ಷ ಮತದಾರರು ASDDO ಪಟ್ಟಿಯಲ್ಲಿಯಲ್ಲಿದ್ದು, ರಾಜ್ಯದಲ್ಲಿ ಸುಮಾರು 1.5 ಕೋಟಿ ಮತದಾರರು ತಮ್ಮ ಆಕ್ಷೇಪಣೆ ಸಲ್ಲಿಸಲು ವಿಫಲವಾದರೆ ಮತದಾರರ ಪಟ್ಟಿಯಿಂದ ಡಿಲೀಟ್ ಆಗುವ ಆತಂಕ ಎದುರಿಸುತ್ತಿದ್ದಾರೆ.
ಗೈರುಹಾಜರಾದವರು ಎಂದು ಗುರುತಿಸದವರಲ್ಲಿ ಗಮನಾರ್ಹ ಸಂಖ್ಯೆಯವರು ನಿಜವಾದ ಮತದಾರರಾಗಿರಬಹುದು ಬಿಎಲ್ಒ (ಬೂತ್ ಮಟ್ಟದ ಅಧಿಕಾರಿ) ಭೇಟಿ ನೀಡಿದಾಗ ಕೆಲಸ, ಆರೋಗ್ಯ, ಇನ್ನಿತರ ಕಾರಣಗಳಿಗಾಗಿ ಮನೆಯಿಂದ ಹೊರಗಿದ್ದ ಕಾರಣ ಅವರು ತಮ್ಮ ವಿವರಗಳ ನಮೂನೆಯನ್ನು ಸಲ್ಲಿಸಲು ಸಾಧ್ಯವಾಗಿಲ್ಲ. ಅದೇ ರೀತಿ, ಬೇರೆ ಮತಗಟ್ಟೆ ವ್ಯಾಪ್ತಿಗೆ ಸ್ಥಳಾಂತರಗೊಂಡ ಮತದಾರರಿಗೆ, ಬಿಎಲ್ಒಗಳು ಮನೆ-ಮನೆಗೆ ಭೇಟಿ ನೀಡಿದಾಗ ತಮ್ಮ ಹೊಸ ನಿವಾಸದಲ್ಲಿ ವಿವರಗಳ ನಮೂನೆಯನ್ನು ಸಲ್ಲಿಸಲು ಅವಕಾಶ ಸಿಕ್ಕಿಲ್ಲ.
ಈ ಹಿನ್ನೆಲೆಯಲ್ಲಿ ಫಾರಂ 6 ಸಲ್ಲಿಕೆಗೆ ಸೂಕ್ತ ಸಮಯಾವಕಾಶ ಸೇರಿದಂತೆ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ಮತದಾರರು ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಇರುವ ಅವಧಿಯನ್ನು ವಿಸ್ತರಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತರನ್ನು (CEC)ಮನವಿ ಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಸಭೆಗಳು ಹಾಗೂ ನಗರ ಪ್ರದೇಶಗಳಲ್ಲಿ ವಾರ್ಡ್ ಸಮಿತಿ ಸಭೆಗಳನ್ನು ನಡೆಸುವಂತೆ CEOಗೆ ನಿರ್ದೇಶನ ನೀಡಬೇಕು. ಈ ಸಭೆಗಳ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ತಾರ್ಕಿಕ ವ್ಯತ್ಯಾಸಗಳು ಹಾಗೂ 2002ರ ಮತದಾರರ ಪಟ್ಟಿಯೊಂದಿಗೆ ಲಿಂಕ್ ಇಲ್ಲದಿರುವ ಕಾರಣ ನೋಟಿಸ್ ಪಡೆದ ಮತದಾರರಿಗೆ ಪ್ರತಿಕ್ರಿಯಿಸಲು ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಲು ಕನಿಷ್ಠ 3–4 ವಾರಗಳ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಭಾರೀ ಪ್ರಮಾಣದಲ್ಲಿ ಸಲ್ಲಿಕೆಯಾಗುವ ಹಕ್ಕು, ಆಕ್ಷೇಪಣೆ ಮತ್ತು ಅರ್ಜಿಗಳನ್ನು ನಿರ್ವಹಿಸಲು ಚುನಾವಣಾ ನೋಂದಣಿ ಅಧಿಕಾರಿಗಳ (ERO) ಸಂಖ್ಯೆಯನ್ನು ಹೆಚ್ಚಿಸಬೇಕು. ಅಗತ್ಯವಿದ್ದರೆ ಜಿಲ್ಲಾ ಚುನಾವಣಾಧಿಕಾರಿಗಳ (DEO) ಸಂಖ್ಯೆಯನ್ನೂ ಹೆಚ್ಚಿಸಿ, ತಪ್ಪುಗಳು ಮತ್ತು ಅನ್ಯಾಯಯುತ ಮತದಾರರ ಹೊರಗಿಡುವಿಕೆಯನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
SIR ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸಲು ಕರ್ನಾಟಕ ಸರ್ಕಾರವು ಚುನಾವಣಾ ಆಯೋಗಕ್ಕೆ ಸಾಧ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಗ್ರಾಮಸಭೆ ಹಾಗೂ ವಾರ್ಡ್ ಸಮಿತಿ ಸಭೆಗಳನ್ನು ಆಯೋಜಿಸಲು ಸ್ಥಳೀಯ ಆಡಳಿತವನ್ನು ಬಳಸಿಕೊಳ್ಳುವುದು, ವ್ಯಾಪಕ ಜನಜಾಗೃತಿ ಮತ್ತು ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳನ್ನು ನಡೆಸುವುದು ಹಾಗೂ ಅಗತ್ಯವಿರುವ ಎಲ್ಲಾ ಸಮನ್ವಯ ಮತ್ತು ಲಾಜಿಸ್ಟಿಕ್ ನೆರವನ್ನು ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಅವರು ತಿಳಿಸಿದ್ದಾರೆ.