ಬೆಂಗಳೂರು: ರಾಜ್ಯದಲ್ಲಿನ ಪ್ರಸ್ತುತ ಮಳೆ ಕೊರತೆಯನ್ನು ನೀಗಿಸಲು ಮತ್ತು ರಾಜ್ಯಾದ್ಯಂತ ತೀವ್ರ ನೀರಿನ ಅಭಾವ ತಡೆಗಟ್ಟಲು ರಾಜ್ಯ ಸರ್ಕಾರ ಮೋಡ ಬಿತ್ತನೆ ಕಾರ್ಯವನ್ನು ಚುರುಕುಗೊಳಿಸಿದೆ.
ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ, ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಈ ವಿಷಯವನ್ನು ತಿಳಿಸಿದರು. ಇದಕ್ಕಾಗಿ ಎಲ್ಲಾ ಆಡಳಿತಾತ್ಮಕ ಸಿದ್ಧತೆಗಳು ಪೂರ್ಣಗೊಂಡಿದ್ದು, ಪ್ರಮುಖ ಅನುಷ್ಠಾನ ಸಮಿತಿಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.
"ಪ್ರಸ್ತುತದಲ್ಲಿನ ಮಳೆಯ ಕೊರತೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಮತ್ತು ತೀವ್ರ ನೀರಿನ ಕೊರತೆಯನ್ನು ತಡೆಗಟ್ಟಲು ಆದ್ಯತೆಯ ಮೇಲೆ ಮೋಡ ಬಿತ್ತನೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದೇವೆ. ಈ ಯೋಜನೆಗಾಗಿ ಮೂರು ವಿಶೇಷ ಸಮಿತಿಗಳನ್ನು ಇಂದು ಔಪಚಾರಿಕವಾಗಿ ರಚಿಸಲಾಗುತ್ತಿದೆ. ಈ ಸಮಿತಿಗಳು ಮುಂದಿನ ಎರಡು ಮೂರು ದಿನಗಳಲ್ಲಿ ಆರಂಭಿಕ ತಾಂತ್ರಿಕ ಪರೀಕ್ಷೆ ನಡೆಸುತ್ತವೆ, ನಂತರ ಮೋಡ ಬಿತ್ತನೆ ಕಾರ್ಯ ಮತ್ತು ಕ್ಷೇತ್ರ ಪರಿಶೀಲನೆ ಕಾರ್ಯ ಅಧಿಕೃತವಾಗಿ ಪ್ರಾರಂಭವಾಗುತ್ತವೆ ಎಂದು ವಿವರಿಸಿದರು.
ಈ ಸಂಬಂಧ ಎರಡು ಉನ್ನತ ಮಟ್ಟದ ಸಭೆಗಳು ಈಗಾಗಲೇ ನಡೆದಿವೆ ಮತ್ತು ಇಲಾಖಾ ಕಾರ್ಯದರ್ಶಿಗಳಿಗೆ ನಿರ್ದಿಷ್ಟ ಕಾರ್ಯಾಚರಣೆಯ ನಿರ್ದೇಶನಗಳನ್ನು ನೀಡಲಾಗಿದೆ. ಡೆವಲಪ್ಮೆಂಟ್ ಕಮೀಷನರ್ ನೇತೃತ್ವದಲ್ಲಿ ಮಾನಿಟರ್ ಕಮಿಟಿ ಮತ್ತು ಟೆಕ್ನಿಕಲ್ ಕಮಿಟಿ ಆಗಬೇಕು. ಸಿಎಸ್ ಅವರ ಜೊತೆ ಮಾತಾಡಿದ್ದೇನೆ. ಇವತ್ತೇ ಕಮಿಟಿ ರಚನೆ ಆಗುತ್ತದೆ. ಕಮಿಟಿಯಿಂದ ರಿಪೋರ್ಟ್ ಪಡೆದು ಮುಂದಿನ ಪ್ರಕ್ರಿಯೆ ಮಾಡುತ್ತೇವೆ ಎಂದರು.
ಮೋಡ ಬಿತ್ತನೆ ಯಶಸ್ವಿಯಾಗುವ ಬಗ್ಗೆ ಯೋಚನೆ ಇದೆ. ಶೇ.30 ಆದ್ರು ಆಗಲಿ ಅನ್ನೋದು ನಮ್ಮ ಇಚ್ಛೆ. ಹಿಂದೆ 3 ಬಾರಿ ಮೋಡ ಬಿತ್ತನೆ ಆಗಿದೆ. ಮಳೆ ಕಡಿಮೆ ಆಗಿದೆ. ಇದರಿಂದ ಜನರಿಗೆ ಅನುಕೂಲ ಆಗಬಹುದು ಅಂತ ಮೋಡ ಬಿತ್ತನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
4 ಕಂದಾಯ ವಿಭಾಗದಲ್ಲಿ ಮೋಡ ಬಿತ್ತನೆ ಮಾಡುತ್ತಿದ್ದೇವೆ. ಎಲ್ಲಿ ಕ್ಲೌಡ್ ಇರುತ್ತೋ ಅಲ್ಲಿ ಮೋಡ ಬಿತ್ತನೆ ಮಾಡುತ್ತೇವೆ. 27 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆ ಆಗಲಿದೆ. 60 ದಿನ ಗಂಟೆಗಳ ಆಧಾರದಲ್ಲಿ ಇದನ್ನ ಮಾಡುತ್ತೇವೆ. ಸಕ್ಸಸ್ ರೇಟ್ ಕಡಿಮೆ ಇದೆ. ಆದರೂ ರೈತರ ಒತ್ತಡ ಇದೆ. ಅದಕ್ಕೆ ಮಾಡುತ್ತೇವೆ. ಬರ ಇದೆ. ಹೀಗಾಗಿ ಮೋಡ ಬಿತ್ತನೆ ಮಾಡಿದ್ರೆ ಅನುಕೂಲ ಆಗಬಹುದು ಅಂತ ಮಾಡುತ್ತಿದ್ದೇವೆ ಎಂದರು.