ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಂಗಳವಾರ ಭಾರಿ ಮಳೆಯಾಗಿದ್ದು, ಕುಕ್ಕೆ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಆವರಣಕ್ಕೂ ನೀರು ನುಗ್ಗಿದೆ. ಭಾರಿ ಮಳೆಯಿಂದಾಗಿ ದರ್ಪಣ ತೀರ್ಥ ನದಿ ಉಕ್ಕಿ ಹರಿದಿದ್ದು, ಸೇತುವೆಯೊಂದು ಮುಳುಗಡೆಯಾಗಿದೆ.
ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಸುಬ್ರಹ್ಮಣ್ಯದಲ್ಲಿ 76.8 ಮಿ.ಮೀ. ಹಾಗೂ ಸುಳ್ಯದಲ್ಲಿ 77 ಮಿ.ಮೀ. ಮಳೆ ದಾಖಲಾಗಿದೆ.
ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುರಿದ ಭಾರಿ ಮಳೆಯಿಂದ ದರ್ಪಣ ತೀರ್ಥ ನದಿ ಉಕ್ಕಿ ಹರಿದು, ಆದಿ ಸುಬ್ರಹ್ಮಣ್ಯ ದೇವಸ್ಥಾನದ ಆವರಣಕ್ಕೆ ನೀರು ನುಗ್ಗಿತು.
ನೀರಿನ ಹರಿವು ತೀವ್ರವಾಗಿದ್ದ ಹಿನ್ನೆಲೆಯಲ್ಲಿ ದರ್ಶನಕ್ಕೆ ಆಗಮಿಸಿದ್ದ ಭಕ್ತರು ಕೆಲಕಾಲ ದೇವಸ್ಥಾನದ ಒಳಗೆ ಹಾಗೂ ಎತ್ತರದ ಪ್ರದೇಶಗಳಲ್ಲಿ ಉಳಿಯಬೇಕಾಯಿತು.
ದರ್ಪಣ ತೀರ್ಥ ನದಿಯಲ್ಲಿ ಇಷ್ಟು ತೀವ್ರವಾಗಿ ನೀರು ಹರಿಯುತ್ತಿರುವುದನ್ನು ಇದೇ ಮೊದಲ ಬಾರಿಗೆ ನೋಡುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಭಾರಿ ಮಳೆಯಿಂದ ಸುಬ್ರಹ್ಮಣ್ಯದ ನೂಚಿಲ ಗ್ರಾಮದಲ್ಲಿರುವ ಪ್ರಸನ್ನ ಭಟ್ ಮತ್ತು ಶೇಖರ್ ಭಟ್ ಅವರ ಮನೆಗಳಿಗೂ ನೀರು ನುಗ್ಗಿದೆ. ಕಲ್ಲಪಣೆಯಲ್ಲಿ ಸುಬ್ಬಮ್ಮ ಅವರಿಗೆ ಸೇರಿದ ಕಾಂಪೌಂಡ್ ಗೋಡೆ ಕುಸಿದು, ಪಕ್ಕದ ಮನೆಯ ಒಂದು ಭಾಗಕ್ಕೆ ಹಾನಿಯಾಗಿದೆ.
ಭಾರಿ ಮಳೆಯ ಪರಿಣಾಮ ಜಿಲ್ಲೆಯ ಪ್ರಮುಖ ನದಿಗಳಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ. ಬಂಟ್ವಾಳದಲ್ಲಿ ನೇತ್ರಾವತಿ ನದಿ 5.950 ಮೀಟರ್ ಹಾಗೂ ಉಪ್ಪಿನಂಗಡಿಯಲ್ಲಿ 25.8 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು, ಕುಮಾರಧಾರಾ ನದಿಯ ನೀರಿನ ಮಟ್ಟ 79.585 ಮೀಟರ್ಗೆ ಏರಿಕೆಯಾಗಿದೆ.
ಇದೇ ವೇಳೆ, ಕಾಣಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಂಚತಾರ್ನಲ್ಲಿರುವ ಸೇತುವೆಯೂ ನೀರಿನಲ್ಲಿ ಮುಳುಗಡೆಯಾಗಿದೆ. ಭಾರಿ ಮಳೆಯಿಂದಾಗಿ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ.