ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ನಡೆಸುವ ಕೇಂದ್ರೀಕೃತ ನೀಟ್ ಪರೀಕ್ಷೆಗೆ ಪರ್ಯಾಯವಾಗಿ ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ರಾಜ್ಯಮಟ್ಟದ ಪ್ರವೇಶ ಪರೀಕ್ಷೆಯನ್ನು ನಡೆಸಲು ಕರ್ನಾಟಕ ಸರ್ಕಾರ ಸಂಪೂರ್ಣ ಸಜ್ಜಾಗಿದೆ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಭಾನುವಾರ ಹೇಳಿದರು.
ರಾಜ್ಯದಲ್ಲಿ ಪರೀಕ್ಷೆಗಳನ್ನು ನಡೆಸುವ ಮೂಲಸೌಕರ್ಯ ಮತ್ತು ಪರಿಣತಿ ಸಾಕಷ್ಟಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು.
“ರಾಜ್ಯಮಟ್ಟದಲ್ಲಿ ಪ್ರವೇಶ ಪರೀಕ್ಷೆಗಳನ್ನು ನಡೆಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಪಾರದರ್ಶಕವಾಗಿರುವ ಸಿಇಟಿ ವ್ಯವಸ್ಥೆ ವೀರಪ್ಪ ಮೊಯ್ಲಿ ಅವರ ಆಡಳಿತದ ಅವಧಿಯಲ್ಲೇ ಜಾರಿಗೆ ಬಂದಿತ್ತು. ಯಾವುದೇ ಅಡೆತಡೆಗಳಿಲ್ಲದೆ ಪರೀಕ್ಷೆಗಳನ್ನು ನಡೆಸುವ ಪರಿಣತಿ ನಮ್ಮಲ್ಲಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಸಿಬಿಎಸ್ಇ ಪಠ್ಯಕ್ರಮವನ್ನು ಆಧರಿಸಿ ನೀಟ್ ಪರೀಕ್ಷೆಯ ವ್ಯಾಪ್ತಿಯನ್ನು ನಿಗದಿಪಡಿಸುತ್ತದೆ. ಕರ್ನಾಟಕದ ಪದವಿಪೂರ್ವ (ಪಿಯು) ಕಾಲೇಜುಗಳಲ್ಲೂ ಸಿಬಿಎಸ್ಇ ಪಠ್ಯಕ್ರಮವನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮೊದಲೇ ಕ್ರಮ ಕೈಗೊಂಡಿದೆ. ಹೀಗಾಗಿ ಎನ್ಎಂಸಿ ನಿಗದಿಪಡಿಸಿದ ಪಠ್ಯಕ್ರಮದಂತೆ ರಾಜ್ಯಮಟ್ಟದ ಪ್ರವೇಶ ಪರೀಕ್ಷೆ ನಡೆಸುವಂತೆ ಸೂಚಿಸಿದರೂ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ತಿಳಿಸಿದರು.
ಯಾವುದೇ ಸಂಘರ್ಷ ಉಂಟಾಗುವುದಿಲ್ಲ. ರಾಜ್ಯಮಟ್ಟದ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಲು ಕರ್ನಾಟಕ ಸಿದ್ಧವಾಗಿದೆ ಎಂದರು.
ಇದೇ ವೇಳೆ ನೀಟ್ ಪರೀಕ್ಷೆ ನಡೆಸುವ ಎನ್ಟಿಎ ಮತ್ತು ಕೇಂದ್ರ ಸರ್ಕಾರದ ಪಾರದರ್ಶಕತೆಯನ್ನು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ನಡೆಸುವ ಪರೀಕ್ಷೆಗಳ ಬಗ್ಗೆ ಸಾಮಾನ್ಯವಾಗಿ ಯಾವುದೇ ದೊಡ್ಡ ಮಟ್ಟದ ದೂರುಗಳು ಕೇಳಿಬರುವುದಿಲ್ಲ. ಕೆಲವೊಮ್ಮೆ ಸಣ್ಣಪುಟ್ಟ ಲೋಪಗಳು ಸಂಭವಿಸಬಹುದು, ಆದರೆ, ಅವು ಅಪರೂಪದ ಘಟನೆಗಳು ಎಂದರು.