ಬೆಂಗಳೂರು: ಬೆಂಗಳೂರು ಮತ್ತು ಹೊಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಅತ್ತಿಬೆಲೆ ಬಳಿ ಬುಧವಾರ ಭಾರೀ ಪ್ರಮಾಣದಲ್ಲಿ ರಸ್ತೆ ಕುಸಿದಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಅತ್ತಿಬೆಲೆ ಮತ್ತು ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದ್ದಕ್ಕಿದ್ದಂತೆ ರಸ್ತೆ ಕುಸಿತ ಸಂಭವಿಸಿದ್ದು, ಘಟನೆಯ ನಂತರ ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೀಕ್ ಅವರ್ನಲ್ಲಿ ಈ ಘಟನೆ ನಡೆದಿರುವುದರಿಂದ ಭಾರಿ ಟ್ರಾಫಿಕ್ ಜಾಮ್ ಆಗಿದೆ.
ಕಾಮಗಾರಿ ವೇಳೆ ಘಟನೆ
ಪ್ರಸ್ತುತ ನಡೆಯುತ್ತಿರುವ ರಸ್ತೆ ವಿಸ್ತರಣೆ ಮತ್ತು NHAI ಯೋಜನೆಗಳು ಈ ಘಟನೆಗೆ ಕಾರಣವಾಗಿದ್ದು, ಅಸ್ಥಿರವಾದ ಮಣ್ಣು ಮತ್ತು ಭಾರೀ ಯಂತ್ರೋಪಕರಣಗಳ ಸಂಚಾರದಿಂದ ರಸ್ತೆ ಕುಸಿತವಾಗಿದೆ ಎನ್ನಲಾಗುತ್ತಿದೆ.
ವಾಹನ ದಟ್ಟಣೆ ಸಮಯದಲ್ಲಿ ತುರ್ತು ದುರಸ್ತಿ ಕಾರ್ಯ
ಪೀಕ್ ಅವರ್ನಲ್ಲಿ ಕಾಮಗಾರಿ ನಡೆಸುತ್ತಿರುವ NHAI ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಹನ ದಟ್ಟಣೆ ಸಮಯದಲ್ಲಿ ಕ್ರೇನ್ಗಳ ಮೂಲಕ ತಡೆಗೋಡೆಗಳು ಮತ್ತು ಫಿಲ್ಲರ್ಗಳನ್ನು ಸಜ್ಜುಗೊಳಿಸಲಾಗುತ್ತಿದೆ.