ಬೆಂಗಳೂರು: ಕಾಫಿ ನಾಡು ಕೊಡಗು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಕಾಫಿ ಬೀಜದ ಕೊಯ್ಲು ಆರಂಭವಾಗುತ್ತಿದೆ. ಆದರೆ ಇದೇ ವೇಳೆ ಅಸ್ಸಾಂನಿಂದ ವಲಸೆ ಬಂದಿದ್ದ ನೂರಾರು ಕಾರ್ಮಿಕರು ತವರಿಗೆ ಮರಳುತ್ತಿರುವುದು ಅನಿರೀಕ್ಷಿತ ಬಿಕ್ಕಟ್ಟು ಸೃಷ್ಟಿಸಿದೆ.
ಅಸ್ಸಾಂನಿಂದ ಬಂದಿದ್ದ ನೂರಾರು ವಲಸೆ ಕಾರ್ಮಿಕರು ತಮ್ಮ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಾಪಸ್ ತೆರಳುತ್ತಿದ್ದಾರೆ. ಅಸ್ಸಾಂನಲ್ಲಿ ಚುನಾವಣಾ ಆಯೋಗದ ಪ್ರಮುಖ ಪರಿಶೀಲನಾ ಅಭಿಯಾನ ನಡೆಯುತ್ತಿದೆ. ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ನಿವಾಸಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಲು ಅಥವಾ ದಾಖಲೆಗಳನ್ನು ಸಲ್ಲಿಸಲು ವಿಫಲವಾದರೆ ಸಾವಿರಾರು ಹೆಸರುಗಳನ್ನು ಅಳಿಸುವ ಆತಂಕದಲ್ಲಿದ್ದಾರೆ.
ಅಸ್ಸಾಂ ನ ಅನೇಕ ಕಾರ್ಮಿಕರು ಕರ್ನಾಟಕದ ಮಲೆನಾಡು ಪ್ರದೇಶಗಳಲ್ಲಿನ ಕಾಫಿ ಎಸ್ಟೇಟ್ಗಳಲ್ಲಿ ವರ್ಷಗಳ ಕಾಲ ತಮ್ಮ ಕೆಲಸದ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ. SIR ಪ್ರಕ್ರಿಯೆಯನ್ನು ತಪ್ಪಿಸುವುದರಿಂದ ಅವರ ಮತದಾನದ ಹಕ್ಕುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಇದರ ಪರಿಣಾಮವಾಗಿ ಕಾಫಿ ಬೀಜ ಹಣ್ಣಾಗುತ್ತಿರುವಾಗ ಮತ್ತು ಬೆಳೆ ಹಾನಿ ಅಥವಾ ಗುಣಮಟ್ಟದ ನಷ್ಟವನ್ನು ತಪ್ಪಿಸಲು ತ್ವರಿತವಾಗಿ ಕಟಾವು ಮಾಡಬೇಕಾಗಿದೆ, ಆದರೆ ಹಠಾತ್ ಕಾರ್ಮಿಕ ಬಿಕ್ಕಟ್ಟು ಉಂಟಾಗಿರುವುದು ಕೊಯ್ಲಿನ ಮೇಲೆ ಪರಿಣಾಮ ಬಿರುತ್ತಿದೆ. ಕಾಫಿ ಕೊಯ್ಲು ಮಾಡದೆ ಹಾಗೆಯೇ ಬಿಟ್ಟರೆ ಮಾಗಿದ ಹಣ್ಣುಗಳು ನೆಲಕ್ಕೆ ಬೀಳುತ್ತವೆ ಮತ್ತು ಹೊಸ ಕಾಫಿ ಸಸ್ಯಗಳು ಮೊಳಕೆಯೊಡೆಯುತ್ತವೆ, ಇದು ಬೆಳೆಗಾರರಿಗೆ ಹೆಚ್ಚಿನ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಕಾಫಿ ತೋಟದ ಮಾಲೀಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ದಕ್ಷಿಣ ಕೊಡಗಿನ ಶ್ರೀಮಂಗಲದಲ್ಲಿ ನೆಲೆಸಿರುವ ಪ್ಲಾಂಟರ್ ಮತ್ತು ವಕೀಲರಾದ ಎಂ.ಟಿ. ಕಾರಿಯಪ್ಪ ಹೇಳುವಂತೆ, ಕೊಡಗಿನ ಬೆಳೆಗಾರರು ಅಸ್ಸಾಂ ಮೂಲದ ಕಾರ್ಮಿಕರ ಮೇಲೆ ಅವಲಂಬಿತವಾಗಿಲ್ಲ. "ನಾವು ಕೇರಳದ ವಯನಾಡ್ ಮತ್ತು ಎಚ್ಡಿ ಕೋಟೆ ಪ್ರದೇಶದ ಕಾರ್ಮಿಕರನ್ನು ಕರೆಸಿಕೊಳ್ಳುತ್ತೇವೆ. ಅವರು ಜೀಪ್ಗಳಲ್ಲಿ ಬರುತ್ತಾರೆ ಮತ್ತು ಅವರ ವೇತನ ಸಮಂಜಸವಾಗಿದೆ" ಎಂದಿದ್ದಾರೆ. "ವಿಶೇಷವಾಗಿ ದಕ್ಷಿಣ ಕೂರ್ಗ್ನಲ್ಲಿ, ನಾವು ಅವರನ್ನು ಅವಲಂಬಿಸಿಲ್ಲ, ತಮಿಳುನಾಡಿನಿಂದಲೂ ಕಾರ್ಮಿಕರು ಬರುತ್ತಾರೆ ಎಂದಿದ್ದಾರೆ.
ಕೊಡಗಿನಲ್ಲಿ, ಸುಮಾರು 50 ಪ್ರತಿಶತ ಅಸ್ಸಾಂ ಕಾರ್ಮಿಕರು ಕಾಫಿ ಎಸ್ಟೇಟ್ಗಳಲ್ಲಿ ಅಲ್ಲ, ನಿರ್ಮಾಣ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಸ್ಸಾಂನ ಕಾರ್ಮಿಕರು ಕೌಶಲ್ಯ ಹೊಂದಿಲ್ಲ. ಅವರಿಗೆ ಕಾಫಿ ಎಸ್ಟೇಟ್ ಕೆಲಸ ಸರಿಯಾಗಿ ತಿಳಿದಿಲ್ಲ. ನಾವು ಅಸ್ಸಾಂ ಕಾರ್ಮಿಕರ ಮೇಲೆ ಅವಲಂಬಿತವಾಗಿಲ್ಲ. ಅನೇಕ ಎಸ್ಟೇಟ್ಗಳಲ್ಲಿ, ಸ್ಥಳೀಯ ಬುಡಕಟ್ಟು ಸಮುದಾಯಗಳು ದಶಕಗಳಿಂದ ಕೆಲಸ ಮಾಡುತ್ತಿವೆ, ಸ್ಥಿರವಾದ ಪ್ರಮುಖ ಕಾರ್ಯಪಡೆಯನ್ನು ಒದಗಿಸುತ್ತಿವೆ," ಎಂದು ಅವರು ಹೇಳಿದರು.
"ರೋಬಸ್ಟಾ ಸುಗ್ಗಿಯ ಸಮಯದಲ್ಲಿ ಅಸ್ಸಾಮಿ ಕಾರ್ಮಿಕರು ಹೊರಡುವುದರಿಂದ ಕಾರ್ಮಿಕರ ತೀವ್ರ ಕೊರತೆ ಉಂಟಾಗಲಿದೆ. ಸ್ಥಳೀಯ ಕಾರ್ಮಿಕರ ಬೆಲೆಯೂ ಹೆಚ್ಚಾಗುತ್ತದೆ, ಏಕೆಂದರೆ ಎಸ್ಟೇಟ್ಗಳು ಕಾರ್ಮಿಕರಿಗಾಗಿ ಪೈಪೋಟಿ ನಡೆಸುತ್ತವೆ" ಎಂದು ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ನ ಮಾಜಿ ಅಧ್ಯಕ್ಷ ಶಿರೀಶ್ ವಿಜಯೇಂದ್ರ ಹೇಳಿದರು. ಕಾರ್ಮಿಕರು ಏಕಾಏಕಿ ತೆರಳುವುದರಿಂದ ಸ್ಥಳೀಯ ಮತ್ತು ಇತರ ಪ್ರದೇಶಗಳ ಉಳಿದ ಕಾರ್ಮಿಕರಿಂದ ವೇತನ ಬೇಡಿಕೆ ಈಗಾಗಲೆ ಹೆಚ್ಚಿದೆ.