ಪೆಹಲ್ಗಾಮ್ ಉಗ್ರ ದಾಳಿಗೆ ಕನ್ನಡಿಗರನ್ನು ಹೋಲಿಸಿ ವಿವಾದ ಸೃಷ್ಟಿಸಿದ್ದ ಗಾಯಕ ಸೋನು ನಿಗಮ್ ಕನ್ನಡವನ್ನು ಹಾಡಿಹೊಗಳಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಕನ್ನಡಿಗರು ನನ್ನ ಕುಟುಂಬದವರು ಎಂದಿದ್ದಲ್ಲದೆ, ಮುಂಗಾರು ಮಳೆಯ ಅವರು ಹಾಡಿದ ಜನಪ್ರಿಯ ಗೀತೆ 'ಅನಿಸುತಿದೆ ಯಾಕೋ ಇಂದು' ಹಾಡನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.
ಸುಮಧುರ ಕಂಠದ ಕಲಾವಿದ
ತಮ್ಮ ಅದ್ಭುತ ಕಂಠದಿಂದ ದೇಶದ ಉದ್ದಗಲಕ್ಕೂ ಖ್ಯಾತಿ ಪಡೆದಿರುವ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಿಟ್ ಹಾಡುಗಳನ್ನು ಕೊಟ್ಟವರು ಬಾಲಿವುಡ್ ಗಾಯಕ ಸೋನು ನಿಗಮ್. ಮುಂಗಾರು ಮಳೆ ಸಿನಿಮಾಕ್ಕೆ ಅವರ ಕಂಠದಿಂದ ಮೂಡಿ ಬಂದ ಹಾಡುಗಳು ಇಂದಿಗೂ ಸೂಪರ್ ಹಿಟ್. ಕನ್ನಡ, ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿ ಆಯ್ತು ಎಂದು ಹೇಳಿ ಭಾಷಾಭೇದ ಮಾಡುವುದರಿಂದ ಪೆಹಲ್ಗಾಮ್ ರೀತಿಯ ದಾಳಿಯಾಗುತ್ತದೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.
ಪೆಹಲ್ಗಾಮ್ ದಾಳಿಗೆ ಹೋಲಿಕೆ
ಕಾಲೇಜೊಂದರ ಕಾರ್ಯಕ್ರಮಕ್ಕೆ ಬಂದು ಕನ್ನಡದ ಹಾಡುಗಳನ್ನು ಹೇಳುವಂತೆ ಕೇಳಿದ ಕನ್ನಡಿಗರನ್ನು ಪೆಹಲ್ಗಾಮ್ ಉಗ್ರರಿಗೆ ಹೋಲಿಕೆ ಮಾಡಿ ಕುಚೇಷ್ಟೆ ಮೆರೆದಿದ್ದರು. ಇದರ ಬಳಿಕ ಕನ್ನಡಪರ ಸಂಘಟನೆಗಳು ಕ್ಷಮೆ ಕೋರುವಂತೆ ಆಗ್ರಹಿಸಿದ ನಂತರ, ಕ್ಷಮೆ ಕೇಳದೇ ತನ್ನ ಹೇಳಿಕೆಗೆ ಸ್ಪಷ್ಟನೆ ಕೊಡುವ ಜೊತೆಗೆ ಮತ್ತೊಮ್ಮೆ ಕನ್ನಡಿಗರನ್ನು ಪುಂಡರು ಎಂದು ಹೇಳಿ ವಿಡಿಯೋ ಹರಿಬಿಟ್ಟಿದ್ದರು. ಬಳಿಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಭೆ ನಡೆದು, ಅವರನ್ನು ಕನ್ನಡ ಚಿತ್ರರಂಗದಿಂದ ನಿಷೇಧಿಸಲಾಗಿತ್ತು.
ಕನ್ನಡಿಗರಿಗೆ ಶರಣು
ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಸಂಗೀತ ಕಾರ್ಯಕ್ರಮ ನೀಡಿದ ಸೋನು ನಿಗಮ್ ಕನ್ನಡವನ್ನು ಹಾಡಿ ರಂಜಿಸಿದ್ದಾರೆ. ಅಲ್ಲದೆ ಕನ್ನಡ ಬಗ್ಗೆ ಕೂಡ ಪ್ರಶಂಸೆ ಮಾತುಗಳನ್ನಾಡಿದ್ದಾರೆ.
ಕನ್ನಡಿಗರು ನನ್ನ ಕುಟುಂಬ
ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಅವರು ಪಾಲ್ಗೊಂಡು, ಕನ್ನಡಿಗರು ನನ್ನ ಕುಟುಂಬವರು ಎಂದು ಪೀಠಿಕೆ ಇಡುತ್ತಲೇ, ಅನಿಸುತಿದೆ ಯಾಕೋ ಇಂದು ಹಾಡು ಹೇಳಿದರು. ಹಿಂದಿಯ ಎಲ್ಲಾ ಗಾಯನಕ್ಕಿಂತಲೂ ಇದು ತುಂಬಾ ಅದ್ಭುತ ಗಾಯನ ಎಂದು ಅದರ ಫುಲ್ ಹಾಡನ್ನು ಹೇಳುವ ಮೂಲಕ ಅಲ್ಲಿ ನೆರೆದಿದ್ದವರನ್ನು ರಂಜಿಸಿದರು. ಇದೇ ವೇಳೆ ಆ ಜನಸಂದಣಿಯಲ್ಲಿ ಕಳೆದುಹೋದ ಬಾಲಕನನ್ನು ಹಾಡಿನ ಮೂಲಕ ವೇದಿಕೆಯಲ್ಲಿ ಕೈಹಿಡಿದು ಕರೆತಂದು ಪೋಷಕರಿಗೆ ಒಪ್ಪಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.