ಬೆಂಗಳೂರು: ಸಂಚಾರ ನಿಯಮಗಳನ್ನು ಗಾಳಿಗೆ ತೂರುವ ವಾಹನ ಸವಾರರೇ ಎಚ್ಚರ, ಎಚ್ಚರ... ಮೊಂಡುತ ಪ್ರದರ್ಶಿಸಿದರೆ ಶುರುವಾಗಲಿದೆ ದೊಡ್ಡ ಸಂಕಷ್ಟ.
ಇನ್ಮುಂದೆ ಸಂಚಾರ ನಿಯಮ ಪಾಲನೆ ಮಾಡದಿದ್ದರೆ, ದಂಡವಷ್ಟೇ ಅಲ್ಲ. ಕೇಸ್ ಕೂಡ ದಾಖಲಾಗುತ್ತದೆ. ಹೌದು, ನಿಯಮ ಉಲ್ಲಂಘಿಸುವವರ ವಿರುದ್ಧ ಎಫ್ಐಆರ್ ದಾಖಲಿಸಲು ನಗರದ ಪೊಲೀಸರು ಮುಂದಾಗಿದ್ದಾರೆ.
ಸಂಚಾರ ಸಿಗ್ನಲ್ಗಳನ್ನು ದಾಟುವುದು, ಏಕಮುಖ ಸಂಚಾರಕ್ಕೆ ಅಡ್ಡಿಪಡಿಸುವುದು ಮತ್ತು ಸುಗಮ ಸಂಚಾರಕ್ಕೆ ಅಡ್ಡಿಯಾಗುವ ಜನನಿಬಿಡ ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡುವಂತಹ ಉಲ್ಲಂಘನೆಗಳಿಗಾಗಿ ನ್ಯಾಯವ್ಯಾಪ್ತಿಯ ಸಂಚಾರ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ಗಳನ್ನು ದಾಖಲಿಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ (ಪಶ್ಚಿಮ) ಅನೂಪ್ ಶೆಟ್ಟಿ ಅವರು ಹೇಳಿದ್ದಾರೆ.
ಪೊಲೀಸ್ ಅಂಕಿ ಅಂಶಗಳ ಪ್ರಕಾರ 2025ರ ಜನವರಿಯಿಂದ ನವೆಂಬರ್ವರೆಗೆ ಬೆಂಗಳೂರಿನಲ್ಲಿ 6,62,447 ಸಿಗ್ನಲ್ ಜಂಪಿಂಗ್ ಪ್ರಕರಣಗಳು ಹಾಗೂ 3,02,962 ನೋ-ಎಂಟ್ರಿ ಉಲ್ಲಂಘನೆಗಳು ದಾಖಲಾಗಿವೆ. ಏಕಮುಖ ರಸ್ತೆಯಲ್ಲಿನ ಸಂಚಾರ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುವ ಜೊತೆಗೆ ಅಪಘಾತಗಳಿಗೂ ಎಡೆಮಾಡಿಕೊಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂತಹ ಸಂದರ್ಭಗಳಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್)ಯ ಸೆಕ್ಷನ್ 285 (ಸಾರ್ವಜನಿಕ ಮಾರ್ಗದಲ್ಲಿ ಅಪಾಯ ಅಥವಾ ಅಡ್ಡಿ ಉಂಟುಮಾಡುವುದು) ಅಡಿಯಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಾಗಲಿದೆ ಎಂದು ತಿಳಿಸಿದ್ದಾರೆ.
ಇದೇ ಸೆಕ್ಷನ್ ಅಡಿಯಲ್ಲಿ, ಬಸ್ ಹಾಗೂ ರೈಲು ನಿಲ್ದಾಣಗಳ ಬಳಿ ರಸ್ತೆ ಮೇಲೆ ವಾಹನಗಳನ್ನು ನಿಲ್ಲಿಸಿ ಸುಗಮ ಸಂಚಾರಕ್ಕೆ ತೊಂದರೆ ಉಂಟು ಮಾಡುವ ಆಟೋರಿಕ್ಷಾ ಹಾಗೂ ಕಾರುಗಳ ಮೇಲೂ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ.
ಸಿಗ್ನಲ್ ಜಂಪಿಂಗ್ ಕೂಡ ಗಂಭೀರ ಅಪಘಾತಗಳಿಗೆ ಕಾರಣವಾಗಬಹುದು. ಹೀಗಾಗಿ ಇಂತಹ ಸಂದರ್ಭಗಳಲ್ಲಿ ಬಿಎನ್ಎಸ್ನ ಸೆಕ್ಷನ್ 281 (ಸಾರ್ವಜನಿಕ ಮಾರ್ಗದಲ್ಲಿ ಅಜಾಗರೂಕ ಅಥವಾ ನಿರ್ಲಕ್ಷ್ಯ ಚಾಲನೆ) ಅಡಿಯಲ್ಲಿ ಕೇಸ್ ದಾಖಲಾಗಲಿದೆ.
ಈ ಹಿಂದೆ ನಿಯಮಗಳನ್ನು ಉಲ್ಲಂಘಿಸುತ್ತಿದ್ದವರು ಸ್ಥಳದಲ್ಲೇ ದಂಡ ಪಾವತಿಸಿ ಮತ್ತೆ ಅದೇ ತಪ್ಪು ಮಾಡುತ್ತಿದ್ದರು. ಆದರ, ಈಗ ಎಫ್ಐಆರ್ ದಾಖಲಾದ ಬಳಿಕ ವಾಹನವನ್ನು ವಶಪಡಿಸಿಕೊಳ್ಳಲಾಗುತ್ತದೆ ಮತ್ತು ದಂಡ ಪಾವತಿಸಲು ನ್ಯಾಯಾಲಯವನ್ನು ಸಂಪರ್ಕಿಸಬೇಕಾಗುತ್ತದೆ. ಇದು ದೀರ್ಘ ಪ್ರಕ್ರಿಯೆಯಾಗಿರುವ ಕಾರಣ ಪರಿಣಾಮ ನಿಯಮ ಉಲ್ಲಂಘನೆಗಳು ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.