ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಜಗತ್ಪ್ರಸಿದ್ಧವಾಗಿದೆ. ಅಂಬಾರಿ ಹೊರುವುದಕ್ಕೂ ಸೈ... ಕಾಡಾನೆ ಕಾರ್ಯಾಚರಣೆಗಳಿಗೂ ಸೈ... ಅಂತ ಅಭಿಮನ್ಯುವಿನ ತಾಕತ್ತಾಗಿದ್ದ ಅದರ ಎಡಭಾಗದ ದಂತ ಇದೀಗ ಮುರಿದಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದಲ್ಲಿರುವ ಅಭಿಮನ್ಯುವಿಗೆ 59 ವರ್ಷ ವಯಸ್ಸಾಗಿದೆ. ಮರದ ದಿಮ್ಮಿ ಸ್ಥಳಾಂತರಿಸುವಾಗ ಎಡಭಾಗದ ದಂತ ಸ್ವಲ್ಪ ತುಂಡಾಗಿ ಎಂದು ವರದಿಯಾಗಿದೆ.
ದುಬಾರೆ ಆನೆ ಕಾಳಗ ದುರಂತದ ಬಳಿಕ ಸಾಕಾನೆ ಶಿಬಿರಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿತ್ತು. ಹೀಗಾಗಿ ಮತ್ತಿಗೋಡು ಕ್ಯಾಂಪ್ನಲ್ಲಿ ಮರದ ದಿಮ್ಮಿಗಳನ್ನು ಸ್ಥಳಾಂತರಿಸುವ ಕಾರ್ಯಚರಣೆ ನಡೆಯುತ್ತಿತ್ತು. ಈ ವೇಳೆ ಅಭಿಮನ್ಯುವಿನ ಎಡಭಾಗದ ದಂತದ ಮುಂದಿನ ಭಾಗ ತುಂಡಾಗಿದೆ. ಬಲಭಾಗಕ್ಕೆ ಬಾಗಿದಂತೆ ಕಾಣುತ್ತಿದ್ದ ದಂತದ ತುದಿ ಮುರಿದಿದೆ.
ಆನೆ ಕಾರ್ಯಾಚರಣೆಗಳಲ್ಲಿ ಅಭಿಮನ್ಯುವಿಗೆ ಶಕ್ತಿಯಾಗಿದ್ದು ಈ ದಂತ. ದಾಳಿ ವೇಳೆ ಎದುರಾಳಿ ಆನೆಗಳಿಗೆ ಅಭಿಮನ್ಯುವಿನ ಬಲಭಾಗಕ್ಕೆ ಬಾಗಿದ್ದ ದಂತ ಹೆಚ್ಚು ಹಾನಿ ಮಾಡುತ್ತಿತ್ತು. ಹೀಗಾಗಿ ಹೆಚ್ಚು ಕಾರ್ಯಾಚರಣೆಗಳು ಸಫಲವಾಗಲು ಕಾರಣವು ಈ ದಂತವಾಗಿತ್ತು. ಇನ್ನು ವಯಸ್ಸಿನ ಕಾರಣ ಇತ್ತೀಚೆಗೆ ಅಭಿಮನ್ಯುವನ್ನು ಕಾರ್ಯಾಚರಣೆಗಳಿಂದ ದೂರವಿಡಲಾಗಿತ್ತು. ದಂಡ ತುಂಡಾಗಿರುವುದರಿಂದ ಈ ಬಾರಿ ದಸರಾಗೆ ದಂತವನ್ನು ಹೊಸದಾಗಿ ಟ್ರೀಮ್ ಮಾಡಿಕೊಂಡು ಬರುವ ಸಾಧ್ಯತೆ ಇದೆ.
2020ರಿಂದಲೂ ಅಂಬಾರಿ ಹೊರುವ ಜವಾಬ್ದಾರಿಯನ್ನು ಅಭಿಮನ್ಯು ನಿಭಾಯಿಸುತ್ತಿದೆ. 2026ನೇ ಸಾಲಿನ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತರೆ ಸತತ 7ನೇ ಬಾರಿ ಅಂಬಾರಿ ಹೊತ್ತಂತೆ ಆಗಲಿದೆ. ಈ ಹಿಂದೆ ಅರ್ಜುನ ಸತತ 8 ಬಾರಿ ಅಂಬಾರಿ ಹೊತ್ತು ಸಾಧನೆ ಮಾಡಿತ್ತು.